ಇತರೆ

ಜೀವನದ ಯಶಸ್ಸಿಗೆ ಔದ್ಯೋಗಿಕ ಉನ್ನತಿಗಿಂತ ಕೌಟುಂಬಿಕ ನೆಮ್ಮದಿ ಮುಖ್ಯ – ಡಾ. ವನಿತಾಲಕ್ಷ್ಮೀ

Views: 31

ಕನ್ನಡ ಕರಾವಳಿ ಸುದ್ದಿ:  “ಈಗ ಎಲ್ಲೆಡೆ ಸ್ತ್ರೀ ಸಬಲೀಕರಣದ ವಿಷಯ ಬಹು ಚರ್ಚೆಯಲ್ಲಿದೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಇದು ಇನ್ನಷ್ಟು ಜೋರಾಗುತ್ತದೆ. ಆದರೆ, ಕರಾವಳಿ ಜಿಲ್ಲೆಯಲ್ಲಿ ಮಹಿಳೆಯರು ಸಾಕಷ್ಟು ಸಬಲರಾಗಿದ್ದಾರೆ. ಇಂದು ಯುವ ಜನಾಂಗದವರು ಶೈಕ್ಷಣಿಕವಾಗಿ ಮುಂದುವರೆದಿದ್ದರೂ ಸಾಮಾಜಿಕ, ಧಾರ್ಮಿಕ ಜವಾಬ್ದಾರಿಗಳಲ್ಲಿ ಹಿಂದಿದ್ದಾರೆ” – ಎಂದು ಅಕದಕಟ್ಟೆಯ ಸರ್ಜನ್ಸ್ ಆಸ್ಪತ್ರೆಯ ಮಾಲಕಿ ಡಾ. ವನಿತಾಲಕ್ಷ್ಮೀ ಹೇಳಿದರು.

ಕೋಟೇಶ್ವರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದ ಮುಖ್ಯ ಅಭ್ಯಾಗತರಾಗಿ ಅವರು ಮಾತನಾಡಿದರು.

“ಸಂಸಾರದ ಆಧಾರ ಸ್ಥಂಭವಾಗಿರುವ ಯುವತಿಯರು ಇಂದು ಉನ್ನತ ಶಿಕ್ಷಣ ಹೊಂದಿದ್ದರೂ, ಮದುವೆ, ಸಂಸಾರ, ಮಕ್ಕಳು, ಧರ್ಮಾಚರಣೆ ಬಗ್ಗೆ ತಾತ್ಸಾರ ಹೊಂದಿದ್ದಾರೆ. ಕೇವಲ ಉದ್ಯೋಗದಲ್ಲಿ ಸಾಧನೆ ಮಾಡಿ ಹೇರಳ ಸಂಪಾದಿಸುವುದರ ಬಗ್ಗೆಯೇ ಗಮನ ಹೊಂದಿದ್ದಾರೆ. ಯಾವುದೇ ಅಸೈನ್ಮೆಂಟ್ ಕೊಟ್ಟರೂ ಪೂರ್ತಿಗೊಳಿಸುವ ಇವರು ಮಕ್ಕಳು, ಸಾಂಸಾರಿಕ ಜವಾಬ್ದಾರಿ ಹೊರಲು ಹಿಂದೇಟು ಹಾಕುತ್ತಿದ್ದಾರೆ. ಮೊದಲು ಮನೆಯಲ್ಲಿನ ಕಿರಿಯರಿಗೆ ಶಿಕ್ಷಣದ ಜೊತೆಗೆ ದೇಶಪ್ರೇಮ, ಧರ್ಮದ ಬಗ್ಗೆ ಹಿರಿಯರು ತಿಳಿಸಿಕೊಡುತ್ತಿದ್ದರು. ಆದರೆ ಇಂದು ಯುವ ಜನಾಂಗದವರು ಇವನ್ನೆಲ್ಲಾ ಧಿಕ್ಕರಿಸುತ್ತಾ, ಸಂಪ್ರದಾಯವನ್ನೇ ಮರೆಯುತ್ತಿದ್ದಾರೆ. ಇದು ಹಿಂದೂ ಧರ್ಮ ಮಾತ್ರವಲ್ಲದೆ ನಮ್ಮ ದೇಶಕ್ಕೇ ಗಂಡಾಂತರಕಾರಿಯಾಗಿದೆ. ಬ್ರಾಹ್ಮಣ ಪರಿಷತ್ ಈ ಬಗ್ಗೆ ಗಮನ ಹರಿಸಬೇಕು” ಎಂದು ಅವರು ಕರೆ ನೀಡಿದರು.

“ಇಂದು ಯಾವುದೇ ಹಬ್ಬ – ಹರಿದಿನಾಚರಣೆ, ಸಮಾರಂಭಗಳಲ್ಲಿ ಚಿಕ್ಕ ಮಕ್ಕಳು ಮತ್ತು ಹಿರಿಯರೇ ತುಂಬಿರುತ್ತಾರೆಯೇ ವಿನಃ ಹದಿಹರೆಯದವರ ಸಂಖ್ಯೆ ತೀರಾ ಕಡಿಮೆ ಇರುತ್ತದೆ. ಯುವ ಜನಾಂಗದವರನ್ನು ನಮ್ಮ ಸಂಸ್ಕೃತಿ, ಧಾರ್ಮಿಕ ಆಚರಣೆಗಳತ್ತ ಸೆಳೆಯದಿದ್ದರೆ ಭವಿಷ್ಯ ಘೋರವಾಗಿರುತ್ತದೆ” ಎಂದು ಡಾ. ವನಿತಾಲಕ್ಷ್ಮೀ ಎಚ್ಚರಿಸಿದರು.

ಇನ್ನೊರ್ವ ಮುಖ್ಯ ಅತಿಥಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಕೃಷ್ಣಾನಂದ ಚಾತ್ರ ಮಾತನಾಡಿ, “ವಿಪ್ರ ಸಮುದಾಯದಲ್ಲಿನ ಉದ್ಯೋಗಿಗಳಲ್ಲಿ ಇತ್ತೀಚಿಗೆ ಪ್ಯಾಕೇಜ್ ವಿಷಯವಾಗಿಯೇ ಸಮಸ್ಯೆಗಳು ಬರುತ್ತಿರುವುದು ಒಂದು ದುರಂತ. ಹೆಚ್ಚು ಪ್ಯಾಕೇಜ್ ನ ಯುವತಿಯರು ಕಡಿಮೆ ಸಂಬಳದ ಯುವಕರನ್ನು ವರಿಸುತ್ತಿಲ್ಲ. ಯುವ ಬಾಣಸಿಗರು, ಪುರೋಹಿತರು, ಕೃಷಿಕರು ಮದುವೆ ಬಗ್ಗೆ ಯೋಚಿಸುವಂತೆಯೇ ಇಲ್ಲ. ಆದರೆ, ಜೀವನದಲ್ಲಿ ಪ್ಯಾಕೇಜೆ ಎಲ್ಲವೂ ಅಲ್ಲ. ನಮ್ಮ ಸಂಸ್ಕೃತಿ, ಪರಂಪರೆ ಬೆರೆತ ನೆಮ್ಮದಿಯ ಕೌಟುಂಬಿಕ ಜೀವನವೇ ಮುಖ್ಯ ಎಂಬುದನ್ನು ಯುವ ಜನಾಂಗ ಅರಿಯಬೇಕು” ಎಂದರು.

ಕೋಟೇಶ್ವರ ವಲಯಾಧ್ಯಕ್ಷ ವಾದಿರಾಜ್ ಹೆಬ್ಬಾರ್ ಶುಭ ಹಾರೈಸಿದರು. ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಸಭಾಧ್ಯಕ್ಷತೆ ವಹಿಸಿದ್ದರು. ವಲಯ ಮಹಿಳಾ ವೇದಿಕೆ ಕಾರ್ಯದರ್ಶಿ ನಾಗರತ್ನ ಉಡುಪ ಉಪಸ್ಥಿತರಿದ್ದರು.

ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ನಡೆಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿಜೇತರ ಪಟ್ಟಿಯನ್ನು ವಸಂತಿ ಮಿತ್ಯಂತ ವಾಚಿಸಿದರು. ತೀರ್ಪುಗಾರರಾಗಿ ಸಹಕರಿಸಿದ ವಿದುಷಿ ಮೂಕಾಂಬಿಕಾ ಉಡುಪರನ್ನು ಗೌರವಿಸಲಾಯಿತು. ಹಿರಿಯ ಸಾಧಕಿ ರುಕ್ಮಿಣಿ ಪಾಟಾಳಿಯವರನ್ನು ಸನ್ಮಾನಿಸಲಾಯಿತು. ಸೌಮ್ಯ ಉಡುಪ ಸನ್ಮಾನ ಪತ್ರವನ್ನು ವಾಚಿಸಿದರು. ವಿಮಲಾ ಭಟ್ ಮಹಿಳಾ ದಿನಾಚರಣೆ ಬಗ್ಗೆ ತಾವೇ ಬರೆದ ಕವನ ವಾಚಿಸಿದರು.

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣಾನಂದ ಚಾತ್ರರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಆರಂಭದಲ್ಲಿ ಮಹಿಳೆಯರು ಸಾಮೂಹಿಕವಾಗಿ ಲೋಕಕಲ್ಯಾಣಾರ್ಥವಾಗಿ ಸರ್ವ ಮಂಗಲ ಮಾಂಗಲ್ಯೆ ಶ್ಲೋಕ ಪಠಣ ಮಾಡಿದರು.

ಸಭೆಯ ಮುನ್ನ ತಾಲೂಕು ಪರಿಷತ್ ನ ವಿಶೇಷ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ನಡೆಸಲಾಯಿತು. ಪರಿಷತ್ ಗೌರವಾಧ್ಯಕ್ಷ ಬೆಳ್ವೆ ಅನಂತಪದ್ಮನಾಭ ಬಾಯಿರಿ, ಕೋಶಾಧಿಕಾರಿ ರಘುರಾಮ್ ರಾವ್, ವಿಪ್ರವಾಣಿ ಪ್ರಧಾನ ಸಂಪಾದಕ ಪ್ರೊ. ಶಂಕರ ರಾವ್ ಕಾಳಾವರ, ಉಡುಪಿ ಜಿಲ್ಲಾ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ, ವಿವಿಧ ವಲಯಾಧ್ಯಕ್ಷರು ಉಪಸ್ಥಿತರಿದ್ದರು. ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿ, ಸುಧಾ ಭಟ್ ವಂದಿಸಿದರು.

 

 

Related Articles

Back to top button