ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಕಾಶೀ ಮಠಾಧೀಶರಿಂದ ಚಾತುರ್ಮಾಸ ವ್ರತಕ್ಕೆ ಸಕಲ ಸಿದ್ಧತೆ

Views: 159
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವ್ರತವನ್ನು ಆಚರಿಸಲು ಸಕಲ ಸಿದ್ಧತೆ ನಡೆದಿದೆ.
ಜುಲೈ 5 ರಂದು ಶ್ರೀ ಕಾಶಿ ಮಠಾಧೀಶರು ಕೋಟೇಶ್ವರಕ್ಕೆ ಆಗಮಿಸಲಿದ್ದು, ಜುಲೈ15 ರಂದು ಚಾತುರ್ಮಾಸ ವ್ರತ ಸ್ವೀಕರಿಸುವರು.
ವಿಶೇಷ ಧಾರ್ಮಿಕ ಕಾರ್ಯಕ್ರಮಗಳು
100 ದಿನಗಳ ಅಖಂಡ ಭಜನೆ ಸತತ 85 ವರ್ಷಗಳಿಂದ ಪ್ರತಿದಿನ ಭಜನೆ ಹಾಗು ವಸಂತ ಪೂಜೆ ಇಲ್ಲಿ ನಡೆಯುತ್ತಿದೆ. ಈ ಬಾರಿ 100 ದಿನಗಳ ಕಾಲ ಅಖಂಡ ಭಜನೆ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದಲ್ಲದೇ ದೇಶ ವಿದೇಶದ ಗೌಡ ಸಾರಸ್ವತ ಸಮಾಜ ಬಾಂಧವರ ಭಜನೆ ಮಂಡಳಿಗಳು ಶತ ದಿವಸ ಅಖಂಡ ಭಜನೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸುವರು.
ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ಲಿ ಮಹೋತ್ಸವದ ಅಂಗವಾಗಿ ನೂರು ಮಂದಿ ಕಲಾವಿದರ ಶತನಮನ, ಶತಸ್ಮರಣ ಸಂಗೀತ ಕಾರ್ಯಕ್ರಮ ಅಗಸ್ಟ್ 18 ರಂದು ನಡೆಯಲಿದೆ. 4 ತಿಂಗಳ ಅವಧಿಯಲ್ಲಿ ಕೋಟಿ ರಾಮನಾಮ ತಾರಕ ಮಂತ್ರ ಹವನ, ಚತುರ್ವಿಂಶತಿ ಲಕ್ಷ ಗಾಯತ್ರಿ ಹವನ, ಬೃಹತಿ ಸಹಸ್ರ ಹವನ, ಮಹಾಭಾರತ ಪ್ರವಚನ, ಭಾಗವತ ಪಾರಾಯಣ, ಲಕ್ಷ್ಮೀನಾರಾಯಣ ಹೃದಯ ಹವನ, ಶ್ರೀ ಸೀತಾ ಕಲ್ಯಾಣ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ವಾಹನ ನಿಲುಗಡೆಗೆ ವಿಶಾಲ ವ್ಯವಸ್ಥೆ
ವಾಹನ ನಿಲುಗಡೆಗೆ ಮೂರು ಕಡೆ ವಿಶಾಲ ವ್ಯವಸ್ಥೆ ಮಾಡಲಾಗಿದ್ದು, ಸಮಾಜ ಬಾಂಧವರು ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬಿಯ ಸಂದರ್ಭದಲ್ಲಿ ಕೋಟೇಶ್ವರದಲ್ಲಿ ನಡೆಯುತ್ತಿರುವ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವ್ರತ ಯಶಸ್ವಿಗೊಳಿಸಲು ಸಹಕರಿಸುವಂತೆ ಶ್ರೀ ಪಟ್ಟಾಭಿ ರಾಮಚಂದ್ರ ದೇಗುಲದ ಆಡಳಿತ ಮೊಕ್ತೇಸರರಾದ ಶ್ರೀ ಚಾತುರ್ಮಾಸ ವ್ರತ ಸಮಿತಿ ಅಧ್ಯಕ್ಷ ಕೆ. ದಿನೇಶ ಜಿ. ಕಾಮತ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.