ರಾಜಕೀಯ

INDIA ಪ್ರತಿಪಕ್ಷಗಳ ಮೈತ್ರಿಕೂಟ ಸಮನ್ವಯ ಸಮಿತಿ ರಚನೆ 

Views: 0

 

ಮುಂಬೈ: ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು 13 ಸದಸ್ಯರ ಸಮನ್ವಯ ಸಮಿತಿ ರಚಿಸಿತು.

ಇದೇ ವೇಳೆ, ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಮೈತ್ರಿಕೂಟದ ನಾಯಕರು ಪ್ರಕಟಿಸಿದ್ದಾರೆ.

ಬಿಹಾರದ ಪಾಟ್ನಾ ಹಾಗೂ ಬೆಂಗಳೂರಿನಲ್ಲಿ ಈಗಾಗಲೇ ಪ್ರತಿಪಕ್ಷಗಳ ನಾಯಕರು ಎರಡು ಸಭೆಗಳನ್ನು ಮಾಡಿದ್ದು, ಗುರುವಾರದಿಂದ ಮುಂಬೈನಲ್ಲಿ ಮೂರನೇ ಸಭೆ ಸೇರಿದ್ದಾರೆ.

ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಹಾರ ಸಿಎಂ ನಿತೀಶ್​ ಕುಮಾರ್, ಆರ್​ಜೆಡಿ ನಾಯಕ ಲಾಲು ಪ್ರಸಾದ್​ ಸೇರಿ ಹಲವು ಪಕ್ಷಗಳ ನಾಯಕರು ಪಾಲ್ಗೊಂಡಿದ್ದಾರೆ.

ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪ್ರತಿಪಕ್ಷಗಳು ಜಂಟಿಯಾಗಿ ಸ್ಪರ್ಧೆ ಮಾಡುವ ನಿರ್ಣಯವನ್ನು ತೆಗೆದುಕೊಂಡಿದ್ದೇವೆ ಎಂದು ನಾಯಕರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇದರ ಜೊತೆಗೆ, ವಿವಿಧ ರಾಜ್ಯಗಳಲ್ಲಿ ಸೀಟು ಹಂಚಿಕೆಯ ಪ್ರಕ್ರಿಯೆ ತಕ್ಷಣವೇ ಪ್ರಾರಂಭಿಸಲಾಗುತ್ತದೆ. ಅದಷ್ಟು ಬೇಗ ಸೀಟು ಕೊಡು-ಕೊಳ್ಳುವಿಕೆಯ ಪ್ರಕ್ರಿಯೆಯನ್ನು ಸಹಕಾರಿ ಮನೋಭಾವದಲ್ಲಿ ಮುಗಿಸಲಾಗುತ್ತದೆ. ಸಾರ್ವಜನಿಕರ ಸಮಸ್ಯೆಯ ವಿಷಯಗಳನ್ನು ಮುಂದಿಟ್ಟುಕೊಂಡು ದೇಶದ ವಿವಿಧ ಭಾಗಗಳಲ್ಲಿ ಶೀಘ್ರವೇ ರ್‍ಯಾಲಿಗಳನ್ನೂ ನಡೆಸುತ್ತೇವೆ. ವಿವಿಧ ಭಾಷೆಗಳಲ್ಲಿ ‘ಜುಡೇಗಾ ಭಾರತ್, ಜೀತೇಗಾ ಇಂಡಿಯಾ’ ಎಂಬ ವಿಷಯದ ಕುರಿತು ತಮ್ಮ ಸಂವಹನ ತಂತ್ರಗಳು, ಪ್ರಚಾರಗಳನ್ನು ಸಂಘಟಿಸಲು ನಿರ್ಣಯಿಸಲಾಗಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮತ್ತೊಂದೆಡೆ, ಮೈತ್ರಿಕೂಟದ ಸಮನ್ವಯ ಸಮಿತಿಯಲ್ಲಿ ಎನ್​ಸಿಪಿ ವರಿಷ್ಠ ಹಾಗು ಕೇಂದ್ರದ ಮಾಜಿ ಸಚಿವ ಶರದ್​ ಪವಾರ್​, ಕಾಂಗ್ರೆಸ್​ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​, ಆರ್​ಜೆಡಿ ಮುಖಂಡ ಹಾಗು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಡಿಎಂಕೆ ನಾಯಕ ಹಾಗು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​, ಟಿಎಂಸಿ ನಾಯಕ ಅಭಿಷೇಕ್​ ಬ್ಯಾನರ್ಜಿ, ಜಾರ್ಖಂಡ್​ ಮುಖ್ಯಮಂತ್ರಿ ಹೇಮಂತ್​ ಸೊರೇನ್​, ಉದ್ಧವ್​ ಠಾಕ್ರೆ ಬಣದ ಶಿವಸೇನೆಯ ನಾಯಕ ಸಂಜಯ್​ ರಾವತ್​, ಆಮ್​ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್​ ಅಬ್ದುಲ್ಲಾ, ಮೆಹಬೂಬಾ ಮುಪ್ತಿ ಹಾಗೂ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಇದ್ದಾರೆ.ಇದೇ ಸಮಿತಿಯು ಪ್ರತಿಪಕ್ಷಗಳ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ, ಸೀಟು ಹಂಚಿಕೆಯ ಕಾರ್ಯವನ್ನೂ ಪ್ರಾರಂಭಿಸುತ್ತದೆ. ಸೆಪ್ಟೆಂಬರ್ 30ರೊಳಗೆ ಸೀಟು ಹಂಚಿಕೆ ಅಂತಿಮಗೊಳಿಸುವ ಗುರಿ ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.

Related Articles

Back to top button
error: Content is protected !!