ಹಗರಣಗಳನ್ನು ಬಯಲಿಗೆಳೆಯುತ್ತೇವೆ :ಕಮಲಕ್ಕೆ ಕೈ ಟಕ್ಕರ್

Views: 0
ಆದಾಯ ತೆರಿಗೆ ದಾಳಿ ಸಂದರ್ಭದಲ್ಲಿ ಪತ್ತೆಯಾದ ಹಣಕ್ಕೂ ಕಾಂಗ್ರೆಸ್ಗೂ ನಂಟಿದೆ ಎಂಬ ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಲು ಕಾಂಗ್ರೆಸ್ ಪಕ್ಷ ಮುಂದಾಗಿದ್ದು, ಬಿಜೆಪಿ ಆಡಳಿತಾವಧಿಯ ಹಗರಣಗಳನ್ನು ಜನರ ಮುಂದಿಡಲು ಕಾಂಗ್ರೆಸ್ ತಯಾರಿ ನಡೆಸಿದೆ.
ಐಟಿ ದಾಳಿ ಸಂದರ್ಭದಲ್ಲಿ ಪತ್ತೆಯಾದ ಹಣಕ್ಕೂ, ಕಾಂಗ್ರೆಸ್ಗೂ ಸಂಬಂಧ ಇರದಿದ್ದರೂ ಬಿಜೆಪಿ ಇದನ್ನು ರಾಜಕಾರಣಗೊಳಿಸಿ, ಪ್ರತಿಭಟನೆ ನಡೆಸುತ್ತಿರುವುದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ಕಾಲದ ಹಗರಣಗಳನ್ನು ಬಯಲಿಗೆಳೆದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಬಿಜೆಪಿ ಆಡಳಿತಾವಧಿಯಲ್ಲಿ ವೈದ್ಯಕೀಯ ಇಲಾಖೆಯಲ್ಲಿ ನಡೆದಿದ್ದ ಅಕ್ರಮಗಳು, ಬಿಟ್ ಕಾಯಿನ್ ಹಗರಣ ಸೇರಿದಂತೆ ಹಲವು ಹಗರಣಗಳ ತನಿಖೆಯನ್ನು ಚುರುಕುಗೊಳಿಸಿ ಬಿಜೆಪಿ ನಾಯಕರ ಅಕ್ರಮಗಳನ್ನು ಬಯಲಿಗೆಳೆದು ಜನರ ಮುಂದೆ ಎಲ್ಲವನ್ನು ಬಿಚ್ಚಿಟ್ಟು ಬಿಜೆಪಿ ನಾಯಕರ ನಿಜ ಸ್ವರೂಪವನ್ನು ಜನರಿಗೆ ತಿಳಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದು, ಈ ಸಂಬಂಧ ಚರ್ಚೆಗಳು ನಡೆದಿವೆ.
ಬಿಜೆಪಿ ಸರ್ಕಾರದ ಆಡಳಿತಾವಧಿಯ ಹಗರಣಗಳ ತನಿಖೆಯನ್ನು ಚುರುಕಗೊಳಿಸಿ ಆದಷ್ಟು ಬೇಗ ವರದಿ ನೀಡುವಂತೆಯೂ ತನಿಖಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಐಟಿ ದಾಳಿಯನ್ನು ಬಿಜೆಪಿ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಅದಕ್ಕೆ ಪ್ರತಿಯಾಗಿ ಬಿಜೆಪಿ ಹಗರಣಗಳನ್ನು ಅಸ್ತ್ರ ಮಾಡಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಅವಧಿಯ ಹಗರಣಗಳು ಬಯಲಾಗಲುವುದು ನಿಶ್ಚಿತ.






