ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ: ಬಿಜೆಪಿ ಪ್ರತಿಭಟನೆ

Views: 0
ಬೆಂಗಳೂರು: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ, ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವುದನ್ನು ಪ್ರತಿಭಟಿಸಿ ಬಿಜೆಪಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು.
ರಾಜ್ಯ ಸರ್ಕಾರ ತಮಿಳುನಾಡಿನ ಡಿಎಂಕೆ ಸರ್ಕಾರ ವನ್ನು ಓಲೈಸಲು ಕದ್ದುಮುಚ್ಚಿ ನೀರು ಹರಿಸಿದ್ದಾರೆ. ಇದು ನಾಡಿನ ರೈತರು ಮತ್ತು ಜನತೆ ಮಾಡಿದ ದ್ರೋಹ. ಡಿಸೆಂಬರ್ ವೇಳೆಗೆ ಕುಡಿಯುವ ನೀರು ಸಿಗುವುದೂ ಕಷ್ಟವಿದೆ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶಾಸಕರ ಭವನ ಮತ್ತು ಕುಮಾರ ಕೃಪಾ ಅತಿಥಿ ಗೃಹ ವರ್ಗಾವಣೆ ದಂಧೆಯ ಕೇಂದ್ರವಾಗಿದೆ ಎಂದು ಅವರು ಹೇಳಿದರು.
ಅನ್ನಭಾಗ್ಯದ ಬಗ್ಗೆ ಮಾತನಾಡು ಸಿದ್ದರಾಮಯ್ಯ ಅವರು ಒಂದು ಕಾಳು ಅಕ್ಕಿಯನ್ನೂ ಕೊಟ್ಟಿಲ್ಲ, ಈಗ ಕೊಡುತ್ತಿರುವ 5 ಕೆ.ಜಿ ಅಕ್ಕಿ ಪ್ರಧಾನಿ ನರೇಂದ್ರ ಮೋದಿ ಕೊಡುತ್ತಿರುವ ಅಕ್ಕಿ ಎಂದ ಅವರು, ಒಂದು ಕಾಳು ಅಕ್ಕಿಕೊಡದ ಸಿದ್ದರಾಮಯ್ಯ ಅವರದು ಕೆಟ್ಟ ಸರ್ಕಾರ ಎಂದು ನುಡಿದರು.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರ ವಿರುದ್ಧ ಇದೇ 16 ರಿಂದ ರಾಜ್ಯ ವ್ಯಾಪಿ ಪ್ರವಾಸ ಮಾಡುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 25 ಸ್ಥಾನಗಳನ್ನು ಗೆಲ್ಲಲು ಶ್ರಮ ಹಾಕೋಣ ಎಂದರು.
ಕೋಲಾರದ ಕುರುಡುಮಲೆ ವಿನಾಯಕ ದೇವಸ್ಥಾನದ ಆವರಣದಿಂದ ಪ್ರವಾಸ ಆರಂಭಿಸುತ್ತೇನೆ. ಪಕ್ಷದ ಎಲ್ಲ ನಾಯಕರೂ ಜತೆಗಿರುತ್ತಾರೆ ಎಂದರು.
ಶಾಸಕರಾದ ಆರ್.ಅಶೋಕ, ಎಸ್.ಆರ್.ವಿಶ್ವನಾಥ್, ಗೋಪಾಲಯ್ಯ,ಮುನಿರತ್ನ, ಸಂಸದ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಗೋವಿಂದ ಕಾರಜೋಳ ಮುಂತಾದವರು ಮಾತನಾಡಿದರು.






