ಶಿಕ್ಷಣ

ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ನಿಂದ ‘ಮುದ್ದಕೃಷ್ಣ ಸ್ಪರ್ಧೆ’: ಪ್ರಕೃತಿ ಮಡಿಲಿನಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳಲಿ – ನಟಿ ಸಂಯುಕ್ತ ಹೊರನಾಡು

Views: 0

ಕನ್ನಡ ಕರಾವಳಿ ಸುದ್ದಿ: “ಟಿವಿ, ಮೊಬೈಲ್‌ ಮತ್ತು ಡಿಜಿಟಲ್‌ ಪರದೆಗಳಿಂದ ಮಕ್ಕಳನ್ನು ಸಾಧ್ಯವಾದಷ್ಟು ದೂರವಿಟ್ಟು, ಪ್ರಕೃತಿಯ ಮಡಿಲಿನಲ್ಲಿ ಸ್ವಚ್ಛಂದವಾಗಿ ಬೆರೆಯಲು ಅವಕಾಶ ನೀಡಬೇಕು. ಮಣ್ಣು, ಗಿಡ-ಮರಗಳ ಒಡನಾಟ ಹಾಗೂ ಹೊರಾಂಗಣ ಚಟುವಟಿಕೆಗಳು ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸಿ, ಅವರ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಭದ್ರ ಬುನಾದಿ ಹಾಕುತ್ತವೆ,” ಎಂದು ರಂಗಭೂಮಿ ಹಾಗೂ ಚಿತ್ರನಟಿ ಸಂಯುಕ್ತ ಹೊರನಾಡು ಹೇಳಿದರು.

ಅವರು ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದ್ದ ‘ಮುದ್ದಕೃಷ್ಣ ಸ್ಪರ್ಧೆ’ಯನ್ನು ಸಾಂಪ್ರದಾಯಿಕವಾಗಿ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

“ಇಂದಿನ ವೇಗದ ಜೀವನಶೈಲಿಯಲ್ಲಿ ಮಕ್ಕಳು ನಮ್ಮ ಸಂಸ್ಕೃತಿಯ ಬೇರುಗಳಿಂದ ದೂರವಾಗುತ್ತಿದ್ದಾರೆ. ಇಂತಹ ಸ್ಪರ್ಧೆಗಳು ಬರಿ ಮನರಂಜನೆಗೆ ಸೀಮಿತವಾಗದೆ, ಪೌರಾಣಿಕ ಪಾತ್ರಗಳ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅರಿವು ಮೂಡಿಸುತ್ತವೆ. ಸಂಸ್ಕೃತಿ ಮತ್ತು ಪ್ರಕೃತಿಯನ್ನು ಬೆಸೆಯುವ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಸಂಸ್ಥೆಯ ಶ್ರಮ ನಿಜಕ್ಕೂ ಶ್ಲಾಘನೀಯ,” ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರತಿಯೊಂದು ಮಗುವಿನಲ್ಲೂ ದೈವಿಕ ಅಂಶವಿದೆ: ಡಾ.ರಮೇಶ್‌ ಶೆಟ್ಟಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್‌ ಶೆಟ್ಟಿ, “ನಮ್ಮ ಸಂಸ್ಥೆಯ ಪ್ರತಿಯೊಂದು ಕಾರ್ಯಕ್ರಮವೂ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಬೇಕು ಎಂಬ ಉದಾತ್ತ ಉದ್ದೇಶವನ್ನು ಹೊಂದಿದೆ. ಶಿಕ್ಷಣದ ಜತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆಯುವುದು ನಮ್ಮ ಆದ್ಯತೆ. ಪ್ರತಿಯೊಂದು ಮಗುವಿನಲ್ಲೂ ಕಲ್ಮಷವಿಲ್ಲದ ದೈವಿಕ ಮನಸ್ಸಿದೆ. ಇಂತಹ ಸ್ಪರ್ಧೆಗಳಲ್ಲಿ ಗೆಲುವು ಅಥವಾ ಸೋಲು ಮುಖ್ಯವಲ್ಲ; ಬದಲಾಗಿ ಮಗು ಭಯವಿಲ್ಲದೆ ವೇದಿಕೆ ಏರಿ, ತನ್ನಲ್ಲಿರುವ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸುವುದೇ ನಿಜವಾದ ಯಶಸ್ಸು. ಪೋಷಕರು ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು,” ಎಂದರು.

ಸಂಸ್ಕೃತಿಯ ಆಚರಣೆ ಶಿಕ್ಷಣದ ಭಾಗವಾಗಲಿ: ಪ್ರತಾಪ್‌ ಚಂದ್ರ ಶೆಟ್ಟಿ

ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್‌ ಚಂದ್ರ ಶೆಟ್ಟಿ ಮಾತನಾಡಿ, “ಸುಜ್ಞಾನ ಸಂಸ್ಥೆಯು ಶಿಕ್ಷಣದ ಜೊತೆಗೆ ದೇಶದ ಮೂಲ ಸಂಸ್ಕೃತಿ, ಆಚಾರ-ವಿಚಾರ ಮತ್ತು ನೈತಿಕ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತದೆ. ಕೃಷ್ಣನ ವಿವಿಧ ವೇಷ ಧರಿಸಿ ವೇದಿಕೆಯಲ್ಲಿ ಕಂಗೊಳಿಸುತ್ತಿದ್ದ ಪುಟ್ಟ ಮಕ್ಕಳನ್ನು ನೋಡುತ್ತಿದ್ದರೆ, ಶ್ರೀ ಕೃಷ್ಣನೇ ಧರೆಗಿಳಿದು ಬಂದಿದ್ದಾನೇನೋ ಎಂಬ ಭಾವನೆ ಮೂಡುತ್ತದೆ. ಇಂತಹ ವೇದಿಕೆಗಳು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಪೋಷಕರು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳಲ್ಲಿ ಸಾಂಸ್ಕೃತಿಕ ಆಸಕ್ತಿ ಬೆಳೆಸಬೇಕು,” ಎಂದು ಕರೆ ನೀಡಿದರು.

ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಪ್ರಕೃತಿ ಮತ್ತು ಸಂಸ್ಕೃತಿ ಪೂರಕ: ಭರತ್‌ ಶೆಟ್ಟಿ

ಟ್ರಸ್ಟ್‌ನ ಖಜಾಂಚಿ ಭರತ್‌ ಶೆಟ್ಟಿ ಮಾತನಾಡಿ, “ಶ್ರೀಕೃಷ್ಣನ ಜೀವನವನ್ನು ಗಮನಿಸಿದರೆ ಆತನಿಗೆ ಪ್ರಕೃತಿ ಹಾಗೂ ಗೋವುಗಳೊಂದಿಗೆ ಅವಿನಾಭಾವ ಸಂಬಂಧವಿತ್ತು. ಪ್ರಕೃತಿಯನ್ನು ಪ್ರೀತಿಸುವುದೇ ಧರ್ಮ. ಈ ರೀತಿಯ ಆಚರಣೆಗಳು ಮಕ್ಕಳಲ್ಲಿ ಬಾಲ್ಯದಲ್ಲೇ ಕರುಣೆ, ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸುತ್ತವೆ. ನಮ್ಮ ಹಿರಿಯರು ಬಳುವಳಿಯಾಗಿ ನೀಡಿದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳು ಕೊಂಡಿಯಾಗಿ ಕೆಲಸ ಮಾಡುತ್ತವೆ,” ಎಂದು ಅಭಿಪ್ರಾಯಪಟ್ಟರು.

ಸೀನಿಯರ್‌ ವಿಭಾಗದಲ್ಲಿ ಅಗನ್ಯ ಜೆ ಪೂಜಾರಿ ಪ್ರಥಮ ಸ್ಥಾನ, ಶ್ರೀದ ದ್ವಿತೀಯ ಸ್ಥಾನ, ಅರ್ಣವ್‌ ಬಿ ಶೆಟ್ಟಿ ತೃತೀಯ ಸ್ಥಾನ ಪಡೆದರು. ಜೂನಿಯರ್‌ ವಿಭಾಗದಲ್ಲಿ ವಿಶ್ವಿತಾ ಕೊಲ್ಲೂರು ಪ್ರಥಮ ಸ್ಥಾನ, ಆಕೃತಿ ಎ.ಪೂಜಾರಿ ದ್ವಿತೀಯ ಸ್ಥಾನ, ಪ್ರಿಷಾ ಸಿ. ಶೆಟ್ಟಿ ತೃತೀಯ ಸ್ಥಾನ ಪಡೆದರು.ಎರಡೂ ವಿಭಾಗದ ಮೊದಲ ಮೂರು ವಿಜೇತ ಮಕ್ಕಳಿಗೆ ಕ್ರಮವಾಗಿ ರೂ.10,000, ರೂ.7,500 ಹಾಗೂ ರೂ.5,000 ನಗದು ಬಹುಮಾನ, ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ನೀಡಲಾಯಿತು.

ಹಾಗೇ ಸೀನಿಯರ್ ವಿಭಾಗದಲ್ಲಿ ಅವ್ಯನ್‌ ಜಿ.ಎಸ್‌, ಲಕ್ಷ್ಯ ಜೆ.ಕೆ, ಪ್ರಶ್ವಿತ್‌ ಆರ್. ಹಾಗೂ ಜೂನಿಯರ್‌ ವಿಭಾಗದಲ್ಲಿ ವರಿಧಿ ಶಾಸ್ತ್ರಿ,ಸಮನ್ವಿ ಪೈ, ಆರ್ವಿ ಸೇರಿದಂತೆ ಎರಡೂ ವಿಭಾಗದಲ್ಲಿನ 3 ಮಕ್ಕಳಿಗೆ ತಲಾ ರೂ.2500ರಂತೆ ಸಮಾಧಾನಕರ ಬಹುಮಾನ ನೀಡಲಾಯಿತು.ಭಾಗವಹಿಸಿದ ಪ್ರತಿ ಸ್ಪರ್ಧಿಗೂ ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಲಾಯಿತು.‌

ಭರತನಾಟ್ಯ ಕಲಾವಿದರಾದ ವಿದ್ವಾನ್‌ ಕೆ.ಭವಾನಿ ಶಂಕರ್‌, ಯಕ್ಷಗಾನ ಕಲಾವಿದರಾದ ಅಶ್ವಿನಿ ಕೊಂಡದಕುಳಿ, ಭರತನಾಟ್ಯ ಕಲಾವಿದರಾದ ವಿದ್ಯಾ ಸಂದೇಶದ, ಸಂಗೀತ ಶಿಕ್ಷಕಿ ಮತ್ತು ನೃತ್ಯಗಾರ್ತಿ ಮೀನಾ ಕಾರಂತ ತೀರ್ಪುಗಾರರಾಗಿದ್ದರು.

ಸುಜ್ಞಾನ ನ್ಯಾಷನಲ್‌ ಪಿಯು ಕಾಲೇಜು ಬಾರ್ಕೂರಿನ ಪ್ರಾಂಶುಪಾಲರಾದ ಪ್ರಕಾಶ್‌ ಆಚಾರ್ಯ ಸ್ವಾಗತಿಸಿದರೆ, ಶಿಕ್ಷಕಿ ಪ್ರೀತಿ ಚಂದ್ರಶೇಖರ ನಿರೂಪಿಸಿದರು. ಸುಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲರಾದ ರಂಜನ್‌ ಬಿ.ಶೆಟ್ಟಿ, ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್‌ ಕುಮಾರ್‌, ವಿದ್ಯಾರಣ್ಯ ಗ್ಲೋಬಲ್‌ ಸ್ಕೂಲ್‌ ನ ಪ್ರಾಂಶುಪಾಲರಾದ ಅನಿತಾ ಕುಮಾರಿ, ಉಪಪ್ರಾಂಶುಪಾಲರಾದ ಸ್ಪೂರ್ತಿ ಎ. ಉಪಸ್ಥಿತರಿದ್ದರು.

Related Articles

Back to top button
error: Content is protected !!