ವಾಸ್ತು ತಜ್ಞ ಡಾl ಬಸವರಾಜ್ ಶೆಟ್ಟಿಗಾರರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪ್ರಧಾನ
Views: 146
ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ರಾಜೇಂದ್ರ ಬಾದಾಮಿಕರ್ ಇವರು ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ವಾಸ್ತುತಜ್ಞ ಡಾl ಬಸವರಾಜ್ ಶೆಟ್ಟಿಗಾರರವರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ನ್ಯಾಯಮೂರ್ತಿಗಳು ಮಾತನಾಡುತ್ತಾ, ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯುವುದು ಸಾಧಕರಿಗೆ ಹಿಂದೆಂದೂ ಪಡೆಯದೇ ಇರುವ ವಿಶೇಷ ಪ್ರಶಸ್ತಿಯೊಂದಿಗೆ ಗೌರವ ಸಹ ಹೆಚ್ಚಾದಂತೆ ಅಲ್ಲದೆ ಇಂತಹ ಬಹುಮುಖ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದರಿಂದ ಪ್ರತಿಷ್ಠಿತ ಸಂಸ್ಥೆಯ ಪ್ರತಿಷ್ಠೆಯು ಸಹ ಹೆಚ್ಚಾಗುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾl ಎಚ್. ಎಲ್. ಏನ್. ರಾವ್ ಅವರು ವಹಿಸಿದ್ದರು. ಪ್ರಶಸ್ತಿ ಪ್ರಧಾನ ಸಮಾರಂಭವನ್ನು ವಿದ್ಯಾ ವಾಚಸ್ಪತಿ ಅಂತರಾಷ್ಟ್ರೀಯ ಖ್ಯಾತಿಯ ವಿದ್ವಾಂಸರಾದ ಡಾl ಅರಳು ಮಲ್ಲಿಗೆ ಪಾರ್ಥಸಾರಥಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾ ನಿರ್ದೇಶಕರಾದ ನಾಡೋಜ ಡಾl ಮಹೇಶ್ ಜೋಶಿ ಆಗಮಿಸಿ ಶುಭ ಹಾರೈಸಿದರು.

ಸಾರ್ಥಹಳ್ಳಿ ನಾರಾಯಣಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಕೆ ಎನ್ ಅಡಿಗ ಅತಿಥಿಗಳನ್ನು ಗೌರವಿಸಿದರು. ಹಿರಿಯ ಲೇಖಕರಾದ ಆರ್ ವೆಂಕಟರಾಜು ವಂದಿಸಿದರು.






