ಯುವಜನ

ಪರೀಕ್ಷೆ ಭಯದಿಂದ ಮೂರು ತಿಂಗಳಿಂದ ನಾಪತ್ತೆಯಾದ ವಿದ್ಯಾರ್ಥಿನಿಯರು: ಸಿಐಡಿಗೆ ವರ್ಗಾವಣೆ

Views: 56

ಕನ್ನಡ ಕರಾವಳಿ ಸುದ್ದಿ: ಪಿಯುಸಿ ವಿದ್ಯಾರ್ಥಿನಿಯರು ನಾಪತ್ತೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿ ಆದೇಶ ಹೊರಡಿಸಿದೆ.

ಬೆಂಗಳೂರಿನಲ್ಲಿ ಇಬ್ಬರು ಪಿಯು ವಿದ್ಯಾರ್ಥಿನಿಯರಾದ ತನಿಷ್ಕಾ ಮತ್ತು ತೇಜಸ್ವಿನಿ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.

ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಜನವರಿ 31ರಂದು ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರು ಮೂರು ತಿಂಗಳು ಕಳೆದರೂ ಇನ್ನೂ ಪತ್ತೆಯಾಗಿಲ್ಲ. ವಿದ್ಯಾರ್ಥಿನಿಯರು ಆಧಾರ್ ಕಾರ್ಡ್‌ನೊಂದಿಗೆ ಮನೆ ಬಿಟ್ಟು ಹೋಗಿದ್ದು, ಅವರ ಓಡಾಟದ ಸಿಸಿಟಿವಿ ದೃಶ್ಯಗಳು ಸಹ ಲಭ್ಯವಾಗಿದ್ದವು. ಆದರೂ, ಪೊಲೀಸರಿಗೆ ಈವರೆಗೆ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪೋಷಕರು ಈ ಹಿಂದೆ ಮನವಿ ಮಾಡಿದ್ದರು. ಅಲ್ಲದೆ, ಹೈಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಕೂಡ ಸಲ್ಲಿಸಿದ್ದರು

ಇದೀಗ, ಈ ಪ್ರಕರಣದ ಸಂಪೂರ್ಣ ವರದಿಯನ್ನು ವಿದ್ಯಾರಣ್ಯಪುರ ಠಾಣಾ ಪೊಲೀಸರು ಸಿಐಡಿಗೆ ಹಸ್ತಾಂತರಿಸಿದ್ದಾರೆ. ಸಿಐಡಿ ತಂಡವು ನಾಪತ್ತೆಯಾಗಿರುವ ತನಿಷ್ಕ ಮತ್ತು ತೇಜಸ್ವಿನಿ ಪತ್ತೆ ಕಾರ್ಯವನ್ನು ಮುಂದುವರಿಸಲಿದೆ.

ವಿದ್ಯಾರ್ಥಿನಿಯರ ಪತ್ತೆಗಾಗಿ ವಿದ್ಯಾರಣ್ಯಪುರ ಪೊಲೀಸರು ರಚಿಸಿದ್ದ 10 ಸದಸ್ಯರ ವಿಶೇಷ ತಂಡವು ಕಳೆದ 70 ದಿನಗಳಿಂದ ಅಹೋರಾತ್ರಿ ಹುಡುಕಾಟ ನಡೆಸಿದೆ. ಮುಂಬೈ, ಚೆನ್ನೈ, ಕೊಯಮತ್ತೂರು, ದೆಹಲಿ, ಕಾಶಿ, ಚಾಮರಾಜನಗರ ಹಾಗೂ ಮೈಸೂರು ಸೇರಿದಂತೆ ದೇಶದ ಹಲವೆಡೆ ಪೊಲೀಸರು ಗಾಳ ಹಾಕಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ವಿಶೇಷ ತಂಡವೊಂದು ಕೇರಳದಲ್ಲಿ ಬೀಡು ಬಿಟ್ಟು ತಲಾಶ್ ನಡೆಸುತ್ತಿದೆ.

ಪೊಲೀಸರಿಗೆ  ತಾಂತ್ರಿಕ ಸಾಕ್ಷ್ಯಗಳ ಕೊರತೆಯಿಂದ ವಿದ್ಯಾರ್ಥಿಗಳ ಪತ್ತೆ ಸಮಸ್ಯೆಯಾಗಿದೆ. ಈ ವಿದ್ಯಾರ್ಥಿನಿಯರು ಮೊಬೈಲ್ ಫೋನ್ ಬಳಸುತ್ತಿಲ್ಲ ಹಾಗೂ ಎಟಿಎಂ ಕಾರ್ಡ್‌ಗಳನ್ನು ಸಹ ಮುಟ್ಟುತ್ತಿಲ್ಲ. ಜೊತೆಗೆ ಸ್ನೇಹಿತರು ಅಥವಾ ಕುಟುಂಬದವರನ್ನು ಯಾವುದೇ ರೀತಿಯಲ್ಲೂ ಸಂಪರ್ಕಿಸುತ್ತಿಲ್ಲ. ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದು ರಾಜ್ಯದಾದ್ಯಂತ ‘ಶಕ್ತಿ’ ಯೋಜನೆಯಡಿ ಉಚಿತ ಬಸ್ ಪ್ರಯಾಣ ಮಾಡುತ್ತಿರುವುದು ಸಿಸಿಟಿವಿ ದೃಶ್ಯಗಳಿಂದ ಈ ಹಿಂದೆ ಪತ್ತೆಯಾಗಿತ್ತು.

ಒಂದು ಹಂತದಲ್ಲಿ ಪೊಲೀಸರಿಗೆ ಈ ವಿದ್ಯಾರ್ಥಿನಿಯರು ಮಲೆಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿದ್ದಾರೆ ಎಂಬ ಸುಳಿವು ಸಿಕ್ಕಿತ್ತು. ಆದರೆ ಪೊಲೀಸರು ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಅಲ್ಲಿಂದ ನಾಪತ್ತೆಯಾಗಿದ್ದಾರೆ. ಕೇವಲ 3,000 ರೂಪಾಯಿ ಹಣ ಹಿಡಿದು ಹೋದವರು ಇಷ್ಟು ದಿನ ಅಜ್ಞಾತರಾಗಿರುವುದು ಹೇಗೆ? ಎಲ್ಲಿಯೂ ‘ಯುಡಿಆರ್ ಕೇಸ್‌ಗಳು ದಾಖಲಾಗಿಲ್ಲದ ಕಾರಣ, ಅವರು ತಟಸ್ಥವಾಗಿದ್ದುಕೊಂಡು ತಲೆಮರೆಸಿಕೊಂಡಿದ್ದಾರೆ ಎಂಬುದು ಪೊಲೀಸರ ಬಲವಾದ ಶಂಕೆಯಾಗಿದೆ.

ಇಬ್ಬರೂ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯರಾಗಿದ್ದು, ಜನವರಿ 31ರಂದು ಮನೆ ಬಿಟ್ಟು ಹೋಗಿದ್ದರು. ಇಬ್ಬರೂ ಪರೀಕ್ಷೆಯ ಭಯದಿಂದಾಗಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Related Articles

Back to top button
error: Content is protected !!