ಪ್ರೀತಿಯಿಂದ ಮಾತನಾಡುತ್ತಿದ್ದವನು ಕಿರಿಕಿರಿ; ‘ನಿನ್ನನ್ನು ಕಂಡರೆ ಇಷ್ಟವಿಲ್ಲ’ ಎಂದ ಪ್ರಿಯಕನ ಕಿರುಕುಳಕ್ಕೆ ಬಲಿಯಾದ ಯುವತಿ
Views: 77
ಕನ್ನಡ ಕರಾವಳಿ ಸುದ್ದಿ:ಯುವತಿಯೊಬ್ಬಳು ಅರ್ಧದಾರಿಯಲ್ಲೇ ಬದುಕನ್ನು ಕೊನೆಗಾಣಿಸಿಕೊಂಡಿರುವ ಕರುಣಾಜನಕ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ. ಎಂ.ಎಸ್ಸಿ ಪದವೀಧರೆಯಾದ 26 ವರ್ಷದ ರೆಹಾನಾ ಎಂಬಾಕೆಯ ಸಾವಿಗೆ ಅವಳ ಭಾವಿ ಪತಿ ಶಾಜಹಾನ್ ಎಂಬಾತನ ವರ್ತನೆಯೇ ಕಾರಣ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಕಡಪ ಮೂಲದ ಶಾಜಹಾನ್ ಜೊತೆ ಫೆಬ್ರವರಿ 15ರಂದು ರೆಹಾನಾಳ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿತ್ತು. ಬರುವ ಆಗಸ್ಟ್ನಲ್ಲಿ ಮದುವೆ ನಿಗದಿಪಡಿಸಲಾಗಿತ್ತು. ಆರಂಭದಲ್ಲಿ ಇಬ್ಬರ ನಡುವೆ ಮಾತುಕತೆ ಚೆನ್ನಾಗಿಯೇ ಇತ್ತು, ಗಂಟೆಗಟ್ಟಲೆ ಫೋನ್ನಲ್ಲಿ ಹರಟುತ್ತಾ ತಮ್ಮ ಮುಂದಿನ ಜೀವನದ ಬಗ್ಗೆ ಕನಸು ಕಂಡಿದ್ದರು. ಆದರೆ, ಕೇವಲ ಮೂರು ವಾರಗಳ ಹಿಂದೆ ಶಾಜಹಾನ್ ನಡೆ ಸಂಪೂರ್ಣವಾಗಿ ಬದಲಾಗಿತ್ತು. ಪ್ರೀತಿಯಿಂದ ಮಾತನಾಡುತ್ತಿದ್ದವನು ಇದ್ದಕ್ಕಿದ್ದಂತೆ ಕಿರಿಕಿರಿ ತೋರಲಾರಂಭಿಸಿದನು.
12 ಪುಟಗಳ ಡೆತ್ ನೋಟಿನಲ್ಲಿ ಏನಿದೆ..?
ರೆಹಾನಾ ಸಾವಿನ ಮುನ್ನ ಬರೆದಿಟ್ಟಿರುವ 12 ಪುಟಗಳ ಡೆತ್ ನೋಟ್ ಅವಳ ಮನಸ್ಸಿನಲ್ಲಿದ್ದ ನೋವಿನ ಆಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಶಾಜಹಾನ್ ತನಗೆ ಈ ಮದುವೆ ಇಷ್ಟವಿಲ್ಲವೆಂದೂ, ತಾನು ಕೇವಲ ತಂದೆಯ ಒತ್ತಾಯಕ್ಕೆ ಮಣಿದು ಈ ಸಂಬಂಧಕ್ಕೆ ಒಪ್ಪಿಕೊಂಡಿದ್ದೇನೆ ಎಂದೂ ಆಕೆಗೆ ನೇರವಾಗಿ ಹೇಳಿದ್ದನು. ಅಷ್ಟೇ ಅಲ್ಲದೆ, ತನಗೆ ಮದ್ಯದ ಚಟವಿದೆಯೆಂದೂ ಮತ್ತು ಈ ಹಿಂದೆ ನಾಲ್ವರು ಯುವತಿಯರೊಂದಿಗೆ ಪ್ರೇಮ ಸಂಬಂಧವಿತ್ತೆಂದೂ ಹೇಳಿ ಆಕೆಯನ್ನು ಮಾನಸಿಕವಾಗಿ ಕುಗ್ಗಿಸಿದ್ದನು. “ನಿನ್ನ ಬಗ್ಗೆ ನನಗೆ ಯಾವುದೇ ಭಾವನೆಗಳಿಲ್ಲ, ನನಗೆ ನಿನ್ನನ್ನು ಕಂಡರೆ ಇಷ್ಟವಿಲ್ಲ, ನೀನೇ ಈ ಮದುವೆಯನ್ನು ನಿಲ್ಲಿಸಿಬಿಡು” ಎಂದು ಆಕೆಗೆ ಒತ್ತಡ ಹೇರಲಾರಂಭಿಸಿದ್ದನು.
ಮಗಳ ಕನಸುಗಳು ನುಚ್ಚುನೂರಾಗುತ್ತಿರುವುದನ್ನು ಕಂಡ ಕುಟುಂಬಸ್ಥರು ದಿಕ್ಕುತೋಚದಂತಾಗಿದ್ದರು. ಶಾಜಹಾನ್ನ ನಿರಂತರ ಮಾನಸಿಕ ಕಿರುಕುಳ ಮತ್ತು ತಿರಸ್ಕಾರವನ್ನು ಸಹಿಸಲಾಗದೆ ರೆಹಾನಾ ತೀವ್ರ ಖಿನ್ನತೆಗೆ ಒಳಗಾಗಿದ್ದಳು. ಇದರ ಪರಿಣಾಮವಾಗಿ ಕಳೆದ ಬುಧವಾರ ತನ್ನ ನಿವಾಸದಲ್ಲಿಯೇ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. “ನಮ್ಮ ಮಗಳ ಸಾವಿಗೆ ಶಾಜಹಾನ್ ನೇರ ಹೊಣೆ, ಅವನಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ರೆಹಾನಾ ಪೋಷಕರು ಕಣ್ಣೀರು ಹಾಕುತ್ತಾ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.
ಮೃತಳ ತಂದೆ ನೀಡಿದ ದೂರಿನ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಸಾಫ್ಟ್ವೇರ್ ಇಂಜಿನಿಯರ್ ಶಾಜಹಾನ್ ಹಾಗೂ ಆತನ ಪೋಷಕರಾದ ವೀರಯ್ಯ ಮತ್ತು ವಹೀದಾರನ್ನು ಪೊಲೀಸರು ಬಂಧಿಸಿದ್ದಾರೆ.






