ಸಿಎಂ ಪಟ್ಟಕ್ಕೆ ಪಟ್ಟು, ತಂತ್ರಗಾರಿಕೆ; ದೆಹಲಿಯಲ್ಲಿ ಬೀಡು ಬಿಟ್ಟಿರುವ ಡಿಕೆ ಬ್ರದರ್ಸ್
Views: 15
ಕನ್ನಡ ಕರಾವಳಿ ಸುದ್ದಿ: ಸಹೋದರ ಡಿ.ಕೆ.ಸುರೇಶ್ ಜತೆ ದೆಹಲಿ ಪ್ರವಾಸ ದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಸ್ಪಷ್ಟನೆ’ಗಾಗಿ ಕಾದು ಕೂತಿದ್ದಾರೆ.
ಪಂಚ ರಾಜ್ಯ ಚುನಾವಣೆಯ ಮತದಾನ ಕೊನೆಯ ಹಂತಕ್ಕೆ ತಲುಪಿರುವ ಬೆನ್ನಲ್ಲೇ, ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಜತೆ ದೆಹಲಿಗೆ ತೆರಳಿದ್ದಾರೆ. ಮೂರು ದಿನಗಳಿಂದ ದೆಹಲಿಯಲ್ಲಿರುವ ಡಿಕೆಶಿ, ಸರಕಾರಿ ಕಾರ್ಯಕ್ರಮಗಳೊಂದಿಗೆ ರಾಜಕೀಯವಾಗಿಯೂ ಲಭ್ಯ ವಿರುವ ಹೈಕಮಾಂಡ್ ನಾಯಕರೊಂದಿಗೆ ಗೌಪ್ಯ ಮಾತುಕತೆ ಮುಂದುವರೆಸಿದ್ದಾರೆ. ಮೊದಲ ದಿನವೇ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದ ಡಿಕೆಶಿ, ಶುಕ್ರವಾರ ರಾತ್ರಿ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ವೇಳೆ ರಾಜ್ಯದಲ್ಲಿ ನಾಯಕತ್ವ ವಿಷಯದಲ್ಲಿ ಉಂಟಾಗಿರುವ ಗೊಂದಲಗಳಿಗೆ ಸ್ಪಷ್ಟನೆ ನೀಡುವ ಹಾಗೂ ಚುನಾವಣೆಯ ಬಳಿಕ ನೀಡಿದ್ದ ‘ಮಾತ’ನ್ನು ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಖರ್ಗೆ ಹಾಗೂ ವೇಣುಗೋಪಾಲ್ ಅವರೊಂದಿಗೆ ಚರ್ಚಿಸಿರುವ ಡಿಕೆ, ಶನಿವಾರ ತಡರಾತ್ರಿ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎನ್ನಲಾಗಿದ್ದರೂ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ
ಚುನಾವಣೆ ಮುಗಿದ ಬಳಿಕ ಬನ್ನಿ: ಈ ನಡುವೆ ಮಲ್ಲಿಕಾ ರ್ಜುನ ಖರ್ಗೆ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಡಿ.ಕೆ.ಶಿವಕುಮಾರ್ ಅವರು ತಮ್ಮ ವಾದವನ್ನು ಮಂಡಿಸಿದ್ದಾರೆ. ಈ ವೇಳೆ ಇಬ್ಬರೂ ನಾಯಕರು, ಹೈಕಮಾಂಡ್ ಮನಸ್ಸಿನಲ್ಲಿಯೂ ಕೆಲ ವಿಚಾರಗಳಿವೆ. ಆ ಬಗ್ಗೆಯೂ ಚರ್ಚಿಸುವ ಅಗತ್ಯವಿದೆ. ಆದ್ದರಿಂದ ಏ.29ರಂದು ಕೊನೆಯ ಹಂತದ ಚುನಾವಣೆ ಮುಗಿಯುತ್ತಿದ್ದಂತೆಯೇ ಅವರೊಂದಿಗೆ ಚರ್ಚಿಸಿ ಸಮಯ ನಿಗದಿಪಡಿಸುವುದಾಗಿ ತಿಳಿಸಿದ್ದಾರೆ. ಮೇ 4ರ ಅವಧಿಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ರಾಜ್ಯದ ನಾಯಕತ್ವ ಅಥವಾ ಇತರ ಪ್ರಮುಖ ವಿಚಾರಗಳ ಬಗ್ಗೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವುದಾಗಿ ಹೈಕಮಾಂಡ್ ಹೇಳಿದೆ ಎಂದು ತಿಳಿದುಬಂದಿದೆ.






