ಹೆಂಡತಿಯ ತಂಗಿಯ ಜೊತೆ ನಾಳೆ ಹಸೆಮಣೆ ಏರಬೇಕಿದ್ದ ವೈದ್ಯರ ಹತ್ಯೆ
Views: 102
ಕನ್ನಡ ಕರಾವಳಿ ಸುದ್ದಿ: ಹೆಂಡತಿಯ ತಂಗಿಯ ಜೊತೆಗೆ ಎರಡನೇ ಮದುವೆಗಾಗಿ ಹಸೆಮಣೆ ಏರಬೇಕಿದ್ದ ವರ ನಿನ್ನೆ ಕೊಲೆಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೆಎಚ್ಬಿ ಕಾಲೋನಿಯಲ್ಲಿ ಈ ಭೀಕರ ಘಟನೆ ನಡೆದಿದೆ. ಡಾ.ರಮೇಶ ಎಫ್.ಕಲ್ಗುಟರ್ ಮೃತ ದುರ್ದೈವಿ. ವಾಸವಿದ್ದ ಮನೆಯಲ್ಲೇ ವೈದ್ಯರ ಹತ್ಯೆಯಾಗಿರುವುದು ತಿಳಿದುಬಂದಿದೆ.
ಹತ್ಯೆಯಾದ ವೈದ್ಯ ಡಾ.ರಮೇಶ ಶಿರಸಿಯಲ್ಲಿ ಆಯುರ್ವೇದಿಕ್ ಕ್ಲಿನಿಕ್ ನಡೆಸುತ್ತಿದ್ದರು. ಆರು ತಿಂಗಳ ಹಿಂದಷ್ಟೆ ಅವರ ಪತ್ನಿಯ ಸಾವು ಸಂಭವಿಸಿತ್ತು. ಈ ಹಿನ್ನೆಲೆಯಲ್ಲೇ ಅವರು ಎರಡನೇ ಮದುವೆಗೆ ತಯಾರಾಗುತ್ತಿದ್ದರು.
ಎಂದಿನಂತೆ ಡಾ.ರಮೇಶ ಅವರನ್ನು ನೋಡಲು ಬಂದ ಸಂಬಂಧಿಕರೇ ವೈದ್ಯರ ಶವ ಕಂಡು ಬೆಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಾಳೆ ಶಿರಸಿಯ ದೇವಸ್ಥಾನ ಒಂದರಲ್ಲಿ ರಮೇಶರ ಎರಡನೇ ಮದುವೆ ನಿಗದಿಯಾಗಿತ್ತು. ಮದುವೆಗೂ ಒಂದು ದಿನ ಮೊದಲೆ ವೈದ್ಯನ ಕೊಲೆಯಾಗಿದ್ದು, ಹಲವು ಅನುಮಾನಗಳಿಗೂ ಕಾರಣವಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳ ಮಹಜರು ಮಾಡಿ, ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೊಲೆ ಆರೋಪಿಗಳ ಬೆನ್ನು ಹತ್ತಿದ್ದಾರೆ.






