ಹೈಕಮಾಂಡ್ ಅವಕಾಶ ಕೊಟ್ಟರೆ ಮುಂದೆಯೂ ಬಜೆಟ್ ಮಂಡಿಸುತ್ತೇನೆ..ಅಧಿಕಾರ ಬಿಡಿ ಅಂದ್ರೆ ಬಿಡ್ತೀನಿ, ಮುಂದುವರೆಯಿರಿ ಅಂದ್ರೆ ಮುಂದುವರಿಯುತ್ತೇನೆ: ಸಿಎಂ
Views: 28
ಕನ್ನಡ ಕರಾವಳಿ ಸುದ್ದಿ: ಹೈಕಮಾಂಡ್ ಅಧಿಕಾರ ಬಿಡಿ ಅಂದ್ರೆ ಬಿಡುತ್ತೇನೆ, ಮುಂದುವರೆಯಿರಿ ಅಂದ್ರೆ ಮುಂದುವರೆಯುತ್ತೇನೆ. ಎಲ್ಲವೂ ಹೈಕಮಾಂಡ್ ನಿರ್ಧಾರ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವರುಣಾ ಕ್ಷೇತ್ರದ ಪಿಳ್ಳಾಹಳ್ಳಿ ಹೆಲಿಪ್ಯಾಡ್ನಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಈಗ 17ನೇ ಬಜೆಟ್ ಮಂಡಿಸಿದ್ದೇನೆ. ಕರ್ನಾಟಕದಲ್ಲಿ ಹೆಚ್ಚು ಬಜೆಟ್ ಮಂಡಿಸಿರುವುದು ನಾನೇ. ಹೈಕಮಾಂಡ್ ಅವಕಾಶ ಕೊಟ್ಟರೆ ಇನ್ನು ಮುಂದೆಯೂ ಬಜೆಟ್ ಮಂಡಿಸುತ್ತೇನೆ. ಅವರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಹೈಕಮಾಂಡ್ ಮೇಲೆ ವಿಶ್ವಾಸ ಇದೆ. ಅವರ ಮೇಲೆ ವಿಶ್ವಾಸ ಇರಲೇಬೇಕು. ಅದನ್ನು ಬಿಟ್ಟು ನಿಮ್ಮ ಮೇಲೆ ವಿಶ್ವಾಸ ಇಡುವುದಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಅಲ್ಲದೇ, ಬಜೆಟ್ ಮಂಡನೆ ಮೂಲಕ ರೆಕಾರ್ಡ್ ಮುರಿಯುವುದು ಮುಖ್ಯವಲ್ಲ. ಜನರು ಅವಕಾಶ ಕೊಟ್ಟರೆ ಮುಂದೆಯೂ ಬಜೆಟ್ ಮಂಡಿಸುತ್ತೇನೆ. ನೀವು ಏನೇ ಪ್ರಶ್ನೆ ಕೇಳಿದರೂ ನಾನು ವಾಸ್ತವ ಬಿಟ್ಟು ಮಾತನಾಡುವುದಿಲ್ಲ. ಇಡೀ ರಾಜ್ಯದ ಜನರಿಗೆ ಆಸೆ ಇದೆ. ಯಾರು ಏನೇ ಹೇಳಿದರೂ ಕೊನೆಯದಾಗಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದರು.






