ಮೂರು ದಿನದ ಹಿಂದಿನ ಸಾಂಬಾರ್ ಬಡಿಸಿದ್ದಕ್ಕೆ ಪತಿ ಮನಬಂದಂತೆ ಬೈದಿದಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ
Views: 94
ಕನ್ನಡ ಕರಾವಳಿ ಸುದ್ದಿ: ಮೂರು ದಿನದ ಹಳೇ ಸಾಂಬಾರ್ ಬಡಿಸಿದ ವಿಚಾರಕ್ಕೆ ಪತಿ ಕಿರಿಕ್ ತೆಗೆದಿದ್ದರಿಂದ ಮನನೊಂದ ಪತ್ನಿ ವಿಷ ಸೇವಿಸಿ ಪ್ರಾಣಬಿಟ್ಟಿದ್ದಾಳೆ.
ಮೃತ ಮಹಿಳೆಯನ್ನು ಕಾವ್ಯ (27) ಎಂದು ಗುರುತಿಸಲಾಗಿದೆ. ಈಕೆ ಕಳೆದ ಐದು ವರ್ಷಗಳ ಹಿಂದೆ ರಂಗಸ್ವಾಮಿ ಎಂಬುವವರನ್ನು ಮದುವೆಯಾಗಿದ್ದು, ಇವರಿಗೆ ನಾಲ್ಕು ವರ್ಷದ ಒಂದು ಮಗುವಿದೆ. ಗುರುವಾರ ಮನೆಯಲ್ಲಿ ಊಟದ ವಿಚಾರವಾಗಿ ದಂಪತಿ ನಡುವೆ ಜೋರು ಜಗಳ ನಡೆದಿದೆ.
ವರದಿಗಳ ಪ್ರಕಾರ, ಕಾವ್ಯ ಅವರು ಮೂರು ದಿನಗಳ ಹಿಂದೆ ತಯಾರಿಸಿದ್ದ ಸಾಂಬಾರ್ ಅನ್ನು ಬಿಸಿ ಮಾಡಿ ಪತಿಗೆ ಬಡಿಸಿದ್ದರು. ಇದೇ ವಿಷಯಕ್ಕೆ ರಂಗಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಪ್ರತಿದಿನ ಹಳೇ ಸಾಂಬಾರನ್ನೇ ಹಾಕುತ್ತೀಯಾ?’ ಎಂದು ಪ್ರಶ್ನಿಸಿ ಪತ್ನಿಯ ಜೊತೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ರಂಗಸ್ವಾಮಿ ಪತ್ನಿಯನ್ನು ಮನಬಂದಂತೆ ಬೈದಿದ್ದಲ್ಲದೆ, ಆಕೆಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಪತಿಯ ನಿಂದನೆ ಹಾಗೂ ಹಲ್ಲೆಯ ಯತ್ನದಿಂದ ತೀವ್ರವಾಗಿ ಮನನೊಂದ ಕಾವ್ಯ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






