ಸಿಎಂ ಸ್ಥಾನ ತ್ಯಜಿಸಿ ನಿತೀಶ್ ರಾಜ್ಯಸಭೆಗೆ? ಯಾರಾಗಲಿದ್ದಾರೆ ಬಿಹಾರದ ಮುಖ್ಯಮಂತ್ರಿ?
Views: 18
ಕನ್ನಡ ಕರಾವಳಿ ಸುದ್ದಿ: ನಿತೀಶ್ ಕುಮಾರ್ ತಮ್ಮ ಸ್ಥಾನವನ್ನು ಬಿಟ್ಟು ರಾಜ್ಯ ಸಭೆಗೆ ಆಯ್ಕೆಯಾಗಲಿದ್ದಾರೆ, ಅವರ ಪುತ್ರ ನಿಶಾಂತ್ ಕುಮಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಅವರ ಸ್ಥಾನಕ್ಕೆ ಬಿಜೆಪಿ ನಾಯಕರೊಬ್ಬರು ಏರಲಿದ್ದಾರೆ ಎನ್ನಲಾಗಿದೆ.
ನಿತೀಶ್ಗೆ ವಯಸ್ಸಾಗಿದ್ದು, ನೆನಪಿನ ಶಕ್ತಿ ಕುಗ್ಗಿರುವುದರಿಂದ ಅವರನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಕಳೆದ ವರ್ಷದ ಚುನಾವಣೆ ವೇಳೆಯೇ ಈ ಬದಲಾವಣೆ ನಡೆಯಬೇಕಾಗಿತ್ತಾದರೂ, ಅವರಿಗೆ ಭಾರೀ ಜನಪ್ರಿಯತೆ ಇದ್ದಿದ್ದರಿಂದ ಈ ಸಾಹಸಕ್ಕೆ ಎನ್ಡಿಎ ಕೈಹಾಕಿರಲಿಲ್ಲ. ಆಗ 75 ವರ್ಷದ ನಿತೀಶ್ ದಾಖಲೆಯ 10ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.ಬಿಜೆಪಿ 89 ಜೆಡಿಯು 85 ಸ್ಥಾನ ಗೆದ್ದಿದ್ದವು
ಸಿಎಂ ಬದಲಾವಣೆಯ ಊಹಾಪೋಹಕ್ಕೆ ಮತ್ತಷ್ಟು ಬಲ ತುಂಬುವ ರೀತಿಯಲ್ಲಿ ಜೆಡಿಯು ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಝಾ ಬುಧವಾರ ದೆಹಲಿಯಿಂದ ಪಾಟ್ನಾಗೆ ಆಗಮಿಸಿ ನಿತೀಶ್ ಕುಮಾರ್ ಅವರೊಂದಿಗೆ ಸುದೀರ್ಘ ರಹಸ್ಯ ಸಭೆ ನಡೆಸಿದರು. ಕೇಂದ್ರ ಸಚಿವ ಲಾಲನ್ ಸಿಂಗ್ ಎಂದೂ ಕರೆಯಲ್ಪಡುವ ರಾಜೀವ್ ರಂಜನ್ ಸಿಂಗ್ ಕೂಡ ದೆಹಲಿಯಿಂದ ಪಾಟ್ನಾಗೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಬಿಹಾರದ ಐದನೇ ರಾಜ್ಯಸಭಾ ಸ್ಥಾನ ರಾಜಕೀಯ ಚಟುವಟಿಕೆಯ ಕೇಂದ್ರಬಿಂದುವಾಗಿದೆ. ಒಂದೇ ಸ್ಥಾನವನ್ನು ಗೆಲ್ಲಲು 41 ಶಾಸಕರ ಬೆಂಬಲ ಬೇಕಾಗುತ್ತದೆ. ಬಿಜೆಪಿ, ಜೆಡಿಯು, ಎಲ್ ಜೆಪಿ (ರಾಮ್ ವಿಲಾಸ್), ಹೆಚ್ ಎಎಂ ಮತ್ತು ಆರ್ ಎಲ್ಜೆಎಂ ಶಾಸಕರನ್ನು ಒಳಗೊಂಡಿರುವ ಬಿಹಾರ ವಿಧಾನಸಭೆಯಲ್ಲಿ ಎನ್ಡಿಎಯ ಸಂಯೋಜಿತ ಬಲವು 202 ಆಗಿದ್ದು, ಐದು ಸ್ಥಾನಗಳಲ್ಲಿ ನಾಲ್ಕು ಮೈತ್ರಿಕೂಟದ ಗೆಲುವು ಬಹುತೇಕ ಖಚಿತವಾಗಿದೆ. ಆದರೆ, ಐದನೇ ಸ್ಥಾನದ ಬಗ್ಗೆ ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ. ಈ ಸ್ಥಾನಕ್ಕೆ ನಿತೀಶ್ ಸ್ಪರ್ಧಿಸುತ್ತಾರಾ ಎಂಬ ಕುತೂಹಲವಿದೆ.
ಯಾರಾಗಲಿದ್ದಾರೆ ಮುಖ್ಯಮಂತ್ರಿ?
ಪ್ರಸ್ತುತ ನಿತೀಶ್ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಿರುವ ಬಿಜೆಪಿಯ ಸಾಮ್ರಾಟ್ ಚೌಧರಿ ಅಥವಾ ವಿಜಯ್ ಕುಮಾರ್ ಸಿನ್ಹಾ ಅವರ ಹೆಸರುಗಳು ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿವೆ. ಆದರೆ, ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದು ಇನ್ನೂ ನಿಗೂಢವಾಗಿಯೇ ಇದೆ.






