ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ‘ಹಿಂದೂ ಫೈರ್ ಬ್ರಾಂಡ್’ ಅನಂತಕುಮಾರ್ ಹೆಗಡೆ?
Views: 30
ಕನ್ನಡ ಕರಾವಳಿ ಸುದ್ದಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸತತ ಆರು ಬಾರಿ ಸಂಸತ್ ಪ್ರವೇಶ ಮಾಡಿರುವ, ‘ಹಿಂದೂ ಫೈರ್ ಬ್ರಾಂಡ್’ ಖ್ಯಾತಿಯ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಈ ನಡುವೆ ಕೇಂದ್ರ ರಾಜಕಾರಣ ಬಿಟ್ಟು ರಾಜ್ಯ ರಾಜಕಾರಣದತ್ತ ಅವರು ಮುಖ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಪ್ಲಾನ್ ಏನು?
ಬಿಜೆಪಿ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇ ಬೇಕು ಎಂದು ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದು, ಈ ಬಾರಿ ಗೆಲುವಿಗಾಗಿ ಹೊಸ ಪ್ಲ್ಯಾನ್ ಹೆಣೆಯುತ್ತಿದೆ.ಸದ್ಯ ರಾಜ್ಯದಲ್ಲಿ ಬಿಜೆಪಿಯನ್ನು ಸಮರ್ಥವಾಗಿ ತೆಗೆದುಕೊಂಡು ಹೋಗಲು ಪ್ರಭಾವಿ ನಾಯಕರ ಕೊರತೆ ಇರುವ ಹಿನ್ನಲೆಯಲ್ಲಿ ಹಿಂದುತ್ವದ ‘ಫೈರ್ ಬ್ರಾಂಡ್’ ಎಂದೇ ಪ್ರಸಿದ್ಧಿಯಾಗಿರುವ ಅನಂತಕುಮಾರ್ ಹೆಗಡೆಗೆ ವಿಧಾನಸಭಾ ಚುನಾವಣೆಯಲ್ಲಿ ಅವಕಾಶ ಕೊಟ್ಟು, ಹಿಂದುತ್ವದ ಮಾತುಗಳನ್ನು ಹೆಚ್ಚಾಗಿ ಗಳಿಸುವ ಪ್ಲ್ಯಾನ್ ಸಹ ಬಿಜೆಪಿ ಮಾಡಿದೆ ಎನ್ನಲಾಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ಕಾದುನೋಡಬೇಕಿದೆ.
ವರಿಷ್ಠರು ಅವರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ ಎಂಬ ವದಂತಿ ದಟ್ಟವಾಗಿದೆ.ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರನ್ನು ಮರಳಿ ರಾಜಕಾರಣಕ್ಕೆ ಕರೆ ತರಬೇಕೆಂಬ ಪ್ರಸ್ತಾವ ಸಂಘದ ಪ್ರಮುಖರ ಸಭೆಯಲ್ಲಿ ಆಗಾಗ ನಡೆದಿದೆ. ಹೆಗಡೆ ಸಂಘವೇ ಬೆಳೆಸಿದ ರಾಜಕೀಯ ಕೂಸಾಗಿರುವುದರಿಂದ ಅವರನ್ನು ಪಕ್ಷಕ್ಕೆ ಬಳಕೆ ಮಾಡಿಕೊಳ್ಳದೇ ಇರುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಇದೆ. ಆದರೆ ಹೆಗಡೆಯವರ ಈ ಹಿಂದಿನ ಕೆಲ ಹೇಳಿಕೆ ಹಾಗೂ ಅದು ಪಕ್ಷದ ಮೇಲೆ ಬೀರಿದ ಪರಿಣಾಮಗಳ ವಿಚಾರದಲ್ಲಿ ರಾಷ್ಟ್ರೀಯ ನಾಯಕರಿಗೆ ಸದಭಿಪ್ರಾಯ ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಈಗ ಹರಿದಾಡುತ್ತಿರುವ ಸುದ್ದಿಯನ್ನು ದೃಢೀಕರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.






