ಸಾಗರ ಸಮೀಪ ಭೀಕರ ಅಪಘಾತ: ಯುವಕ, ಯುವತಿ ಸ್ಥಳದಲ್ಲೇ ಸಾವು
Views: 301
ಕನ್ನಡ ಕರಾವಳಿ ಸುದ್ದಿ: ಜಿಲ್ಲೆಯ ಸಾಗರ ಸಮೀಪದ ಉಳ್ಳೂರು ಗ್ರಾಮದ ಮುಂಡಿಗೆಮಟ್ಟೆ ರಸ್ತೆಯ ತಿರುವಿನಲ್ಲಿ ಕ್ಯಾಂಟರ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಯುವತಿ ಹಾಗೂ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ. ಆನಂದಪುರದಿಂದ ಸಾಗರಕ್ಕೆ ತೆರಳುತ್ತಿದ್ದ ಕಾರು ಹಾಗೂ ಸಾಗರದಿಂದ ಆನಂದಪುರದ ಕಡೆಗೆ ಬರುತ್ತಿದ್ದ ಕ್ಯಾಂಟರ್ ನಡುವೆ ಭಾನುವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ.
ಮೃತರನ್ನು ಪವಿತ್ರ (25) ತಂದೆ ಚನ್ನಬಸವಪ್ಪ, ಸೊರಬ ತಾಲೂಕಿನ ಮಳಲಗದ್ದೆ ಗ್ರಾಮದ ನಿವಾಸಿ ಹಾಗೂ ವೀರೇಶ್ (25) ತಂದೆ ಸತೀಶ್, ಸಾಗರ ತಾಲೂಕಿನ ತಡಗಳಲಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಪವಿತ್ರ ಹಾಗೂ ವೀರೇಶ್ ಇಬ್ಬರೂ ಸ್ನೇಹಿತರಾಗಿದ್ದು, ಭಾನುವಾರ ಸಂಜೆ ಆನಂದಪುರದಲ್ಲಿ ಸ್ನೇಹಿತರೊಬ್ಬರ ಕಾರ್ಯಕ್ರಮಕ್ಕೆ ಹಾಜರಾಗಿ, ವಾಪಸ್ ಸಾಗರಕ್ಕೆ ಕಾರಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಕ್ಯಾಂಟರ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






