ಮಾತು ಬಾರದ, ಕಿವಿ ಕೇಳದ, ಕಣ್ಣು ಕಾಣದ ಮಕ್ಕಳಿಗೆ ಲೈಂಗಿಕ ಕಿರುಕುಳ:ವಾರ್ಡನ್ ವಿರುದ್ಧ ದೂರು
Views: 167
ಕನ್ನಡ ಕರಾವಳಿ ಸುದ್ದಿ: ಮಾತು ಬಾರದ, ಕಿವಿ ಕೇಳದ, ಕಣ್ಣು ಕಾಣದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸೇರಿದಂತೆ ಅನೇಕ ವಿದ್ಯಾರ್ಥಿಗಳು ತಮ್ಮ ಪುರುಷ ವಾರ್ಡನ್ ಮೇಲೆ ದೈಹಿಕ ಹಲ್ಲೆ ಮತ್ತು ಲೈಂಗಿಕ ಕಿರುಕುಳ ಆರೋಪ ಮಾಡಿರುವ ಘಟನೆ ಒಡಿಶಾದ ಶಾಲೆಯೊಂದರಲ್ಲಿ ನಡೆದಿದೆ.
ಆರೋಪಿಯನ್ನು ಸಂಧ್ಯಾ ದರ್ಶನ್ ಮಹಾಪಾತ್ರ ಎಂದು ಗುರುತಿಸಲಾಗಿದೆ. ಈತ ಒಡಿಶಾದ ಕಾಳಹಂದಿ ಜಿಲ್ಲೆಯ ಪರಮಾನಂದಪುವಿನಲ್ಲಿರುವ ವಾಕ್, ಶ್ರವಣ ಮತ್ತು ದೃಷ್ಟಿ ದೋಷವುಳ್ಳ ಮಕ್ಕಳಿಗಾಗಿ ಇರುವ ರೆಡ್ ಕ್ರಾಸ್ ಶಾಲೆಯಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದ. ಮಕ್ಕಳನ್ನು ಅನುಚಿತವಾಗಿ ಸ್ಪರ್ಶಿಸುವುದು ಮತ್ತು ಬಲವಂತಾವಾಗಿ ಮಕ್ಕಳನ್ನು ಎಳೆದಾಡುತ್ತಿದ್ದ ಎಂಬ ಆರೋಪವಿದೆ. ಇದಿಷ್ಟೇ ಅಲ್ಲದೆ, ಇಂತಹ ಘಟನೆಗಳ ಬಗ್ಗೆ ಯಾರಿಗಾದರೂ ದೂರು ನೀಡಿದರೆ, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗುತ್ತಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಸದ್ಯ ವಿದ್ಯಾರ್ಥಿಗಳು ವಿಡಿಯೋ ಮತ್ತು ಲಿಖಿತ ದೂರುಗಳನ್ನು ದಾಖಲಿಸಿದ್ದಾರೆ. ವಿಡಿಯೋದಲ್ಲಿ ದೈಹಿಕವಾಗಿ ಅಸ್ವಸ್ಥ ವಿದ್ಯಾರ್ಥಿಗಳು, ಸನ್ನೆಗಳ ಮೂಲಕವೇ ತಾವು ಎದುರಿಸಿದ ತೊಂದರೆಯನ್ನು ಬಹಿರಂಗಪಡಿಸಿದ್ದಾರೆ. ಸದ್ಯ ವಾರ್ಡನ್ ವಿರುದ್ಧ ಕೇಳಿಬಂದಿರುವ ದೂರುಗಳ ತನಿಖೆಗಾಗಿ ಜಿಲ್ಲೆಯ ಅಧಿಕಾರಿಗಳು ಸಮಿತಿಯನ್ನು ರಚನೆ ಮಾಡಿದ್ದಾರೆ.
ಕಾಳಹಂದಿ ಜಿಲ್ಲೆಯ ಮಕ್ಕಳ ರಕ್ಷಣಾ ಅಧಿಕಾರಿ ಶೈಲೆಂದು ಮಹಾಪಾತ್ರಾ ಅವರು ದೂರು ಸ್ವೀಕರಿಸಿರುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೆ, ತನಿಖೆಗಾಗಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿರುವುದಾಗಿಯೂ ತಿಳಿಸಿದ್ದಾರೆ.
ಮಕ್ಕಳ ಮೇಲಿನ ಕಿರುಕುಳ ಮತ್ತು ಲೈಂಗಿಕ ಶೋಷಣೆಗೆ ಸಂಬಂಧಿಸಿದಂತೆ ಕೆಲವು ಉದ್ಯೋಗಿಗಳ ವಿರುದ್ಧ ನಮಗೆ ದೂರುಗಳು ಬಂದಿವೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಆನಂತರ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಸದ್ಯ, ಪ್ರಾಥಮಿಕ ತನಿಖೆ ಪೂರ್ಣಗೊಂಡಿದೆ. ಸಂಬಂಧಪಟ್ಟ ವ್ಯಕ್ತಿಯ ವಿರುದ್ಧದ ಆರೋಪಗಳು ನಿಜವೆಂದು ಸಾಬೀತಾದರೆ, ಕಾನೂನಿನ ಪ್ರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಸಮಯದಲ್ಲಿ, ವಿವರವಾದ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಸಮಿತಿಯು ಅಂತಿಮ ವರದಿಯನ್ನು ಸಲ್ಲಿಸಿದ ನಂತರವೇ ಸತ್ಯಗಳು ಬೆಳಕಿಗೆ ಬರುತ್ತವೆ ಎಂದು ಹೇಳಿದರು,






