ಬೈಂದೂರು: ಬಿಜೂರಿನಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು, ಆಹಾರ ನಿರೀಕ್ಷಕರಿಂದ ದಾಳಿ
Views: 71
ಕನ್ನಡ ಕರಾವಳಿ ಸುದ್ದಿ: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದನ್ನು ಪತ್ತೆ ಹಚ್ಚುವಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಯಶಸ್ವಿ ಆಗಿದ್ದಾರೆ,
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಹರಕೇರಿ ಎಂಬಲ್ಲಿ ಭರ್ಜರಿ ದಾಳಿ ನಡೆಸಿದ್ದಾರೆ.
ಬೈಂದೂರಿನ ಆಹಾರ ನಿರೀಕ್ಷಕರಾದ ವಿನಯ್ ಕುಮಾರ್ (49) ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಬಿಜೂರು ಗ್ರಾಮದ ಹರಕೇರಿ ನಿವಾಸಿ ಅಬ್ದುಲ್ ಬಿನ್ ಅಬ್ಬಾಸ್ ಎಂಬುವವರ ಮನೆಯಲ್ಲಿ ಸರ್ಕಾರದಿಂದ ಉಚಿತವಾಗಿ ವಿತರಿಸಲಾಗುವ ಅನ್ನಭಾಗ್ಯ ಯೋಜನೆಯ ಕುಚ್ಚಲಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಲಾಗಿತ್ತು.
ಜನವರಿ 30 ರಂದು ಬೆಳಿಗ್ಗೆ 09:40 ಗಂಟೆಗೆ ಪಂಚರ ಸಮಕ್ಷಮದಲ್ಲಿ ಅಧಿಕಾರಿಗಳು ದಾಳಿ ನಡೆಸಿದಾಗ, ಒಟ್ಟು 16 ಪಾಲಿಥಿನ್ ಚೀಲಗಳಲ್ಲಿ ತುಂಬಿಸಿಟ್ಟಿದ್ದ 7.14 ಕ್ವಿಂಟಾಲ್ ತೂಕದ ಕುಚ್ಚಲಕ್ಕಿ ಪತ್ತೆಯಾಗಿದೆ ಇದರ ಒಟ್ಟು ಮೌಲ್ಯ ರೂ. 16,422/- ಎಂದು ಅಂದಾಜಿಸಲಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ,






