ಮದುವೆಯಾಗಿ ಎರಡೇ ತಿಂಗಳಿಗೆ ಬಾಯ್ಫ್ರೆಂಡ್ ಜೊತೆ ಓಡಿಹೋಗಿ ಪತಿ, ಮಾವನ ಸಾವಿಗೆ ಕಾರಣಳಾದ ಮಹಿಳೆ ಆರೆಸ್ಟ್
Views: 185
ಕನ್ನಡ ಕರಾವಳಿ ಸುದ್ದಿ: ಮದುವೆಯಾದ ಎರಡೇ ತಿಂಗಳಿಗೆ ಬಾಯ್ಫ್ರೆಂಡ್ ಜೊತೆ ಓಡಿಹೋಗಿ ಇಬ್ಬರ ಸಾವಿಗೆ ಕಾರಣವಾಗಿದ್ದವಳನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ.
ಮೃತ ಹರೀಶ್ ಪತ್ನಿ ಸರಸ್ವತಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆಯ ಎಲೆಬೇತೂರಿನಲ್ಲಿ ಸಂಬಂಧಿಕರ ಮನೆಯಲ್ಲಿದ್ದ ಸರಸ್ವತಿಯನ್ನು ಬಂಧಿಸಿ ದಾವಣಗೆರೆ ಗ್ರಾಮಾಂತರ ಠಾಣೆಗೆ ಪೊಲೀಸರು ಕರೆತಂದಿದ್ದಾರೆ. ಅತ್ತ ಸರಸ್ವತಿ ಪ್ರಿಯಕರ ಶಿವಕುಮಾರ್ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
ದಾವಣಗೆರೆಯ ಗುಮ್ಮನೂರು ಗ್ರಾಮದ ಹರೀಶ್ನನ್ನು ಮದುವೆಯಾಗಿದ್ದ ಸರಸ್ವತಿ ಮದುವೆಯಾದ ಎರಡೇ ತಿಂಗಳಿಗೆ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಳು. ಈ ಘಟನೆಯಿಂದ ತೀವ್ರವಾಗಿ ಮನನೊಂದಿದ್ದ ಪತಿ ಹರೀಶ್, ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದ. ಅತ್ತ, ಇವರಿಬ್ಬರಿಗೂ ಮದುವೆ ಮಾಡಿಸಿದ್ದ ಸರಸ್ವತಿಯ ಸೋದರ ಮಾವ ಸಹ ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆ ಇಡೀ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಸರಸ್ವತಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಸದ್ಯ, ಇಬ್ಬರ ಸಾವಿಗೆ ಕಾರಣವಾಗಿದ್ದವಳನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಪ್ರಾಥಮಿಕ ವಿಚಾರಣೆ ನಂತರ ಮೆಡಿಕಲ್ ಚೆಕ್ ಅಪ್ ಮಾಡಿಸಿ ಬಳಿಕ ಆಕೆಯನ್ನು ಜಡ್ಜ್ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. ನಂತರ ಶಿವಮೊಗ್ಗ ಅಥವಾ ಚಿತ್ರದುರ್ಗ ಮಹಿಳಾ ಸೆಲ್ಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸರಸ್ವತಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಪ್ರಿಯಕರ ಶಿವಕುಮಾರ್ ನಾಪತ್ತೆಯಾಗಿದ್ದಾನೆ. ಸರಸ್ವತಿ ಪ್ರಿಯಕರ ಶಿವಕುಮಾರ್ ಜೊತೆ ಸೋದರ ಮಾವ ಗಣೇಶ್, ಸರಸ್ವತಿ ಚಿಕ್ಕಮ್ಮ ಅಂಜಿನಮ್ಮ ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ ಶಿವಕುಮಾರಗಾಗಿ ದಾವಣಗೆರೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಿಯಕರ ಶಿವಕುಮಾರ್ ಮೇಲೆ ಎರಡು ಪ್ರತ್ಯೇಕ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಮೃತ ಹರೀಶ್ ತಂದೆ ಮಹಾರುದ್ರಪ್ಪ ಅವರ ಕಡೆಯಿಂದ ಒಂದು ಅಟ್ರಾಸಿಟಿ ಕೇಸ್, ಮೃತ ರುದ್ರೇಶ್ ಪತ್ನಿ ಪೂರ್ಣಿಮಾ ಅವರಿಂದ ಒಂದು ಅಟ್ರಾಸಿಟಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಶಿವಕುಮಾರ್ ಪತ್ತೆಗೆ ಹುಡುಕಾಟ ಮುಂದುವರೆಸಿದ್ದಾರೆ.






