ಉಪನ್ಯಾಸಕನ ಕಿರುಕುಳಕ್ಕೆ ಬೇಸತ್ತು ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ
Views: 84
ಕನ್ನಡ ಕರಾವಳಿ ಸುದ್ದಿ: ಡೆಂಟಲ್ ಕಾಲೇಜಿನಲ್ಲಿ ಉಪನ್ಯಾಸಕನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ.
ಡೆಂಟಲ್ ವಿದ್ಯಾರ್ಥಿನಿ ಯಶಸ್ವಿನಿ (23) ನೇಣಿಗೆ ಶರಣಾಗಿದ್ದಾಳೆ. ಪರಿಮಳ ಹಾಗೂ ಭೂದೇವಯ್ಯ ದಂಪತಿಯ ಏಕೈಕ ಪುತ್ರಿಯಾಗಿರುವ ಯಶಸ್ವಿನಿ ಮೃತ ವಿದ್ಯಾರ್ಥಿನಿ.
ಕಾಲೇಜಿನಲ್ಲಿ ಉಪನ್ಯಾಸಕನ ಕಿರುಕುಳದಿಂದ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಬೊಮ್ಮನಹಳ್ಳಿಯ ಆಕ್ಸ್ಫರ್ಡ್ ಡೆಂಟಲ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಯಶಸ್ವಿನಿ, ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿ ವಿಭಾಗದಲ್ಲಿ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿ ಓದುತ್ತಿದ್ದಳು.
ಕಣ್ಣು ನೋವಾಗಿದ್ದರಿಂದ ಯಶಸ್ವಿನಿ ಬುಧವಾರ ಕಾಲೇಜಿಗೆ ರಜೆ ಹಾಕಿದ್ದಳು. ಗುರುವಾರ ಕಾಲೇಜಿಗೆ ಹೋದಾಗ ವಿದ್ಯಾರ್ಥಿಗಳ ಮುಂದೆ ಆಕೆಗೆ ಅವಮಾನ ಮಾಡಲಾಗಿದೆ. ಕಣ್ಣಿಗೆ ಯಾವ ಡ್ರಾಪ್ಸ್ ಬಳಸಿದೆ, ಎಷ್ಟು ಹನಿ ಹಾಕಿಕೊಂಡೆ ಎಂದು ಪ್ರಶ್ನಿಸಿದ್ದಾರೆ. ಇಡೀ ಬಾಟಲಿ ಸುರಿದುಕೊಂಡ್ರಾ ಎಂದು ಉಪನ್ಯಾಸಕ ಅವಮಾನಿಸಿದ್ದಾರೆ. ಅಲ್ಲದೇ ಸೆಮಿನಾರ್ಗೆ ಅವಕಾಶ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ಮನನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಪರಿಮಳ ಆರೋಪಿಸಿದ್ದಾರೆ.
ಕಿರುಕುಳ ಕೊಟ್ಟ ಉಪನ್ಯಾಸಕ ಹಾಗೂ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಶವಾಗಾರದ ಮುಂದೆ ಯಶಸ್ವಿನಿ ಪೋಷಕರ ಜತೆಗೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ.






