ಮೊಬೈಲ್ ಬಿಟ್ಟು ಓದಲು ಬುದ್ದಿವಾದ ಹೇಳಿದ ತಾಯಿ: ಮನನೊಂದು ನೇಣು ಬಿಗಿದು ಆತ್ಮಹತ್ಯೆಗೈದ ಮಗಳು
Views: 74
ಕನ್ನಡ ಕರಾವಳಿ ಸುದ್ದಿ: ಉಡುಪಿ ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಿರೇಬೆಟ್ಟು ನಿವಾಸಿ ಸಮನ್ವಿ (17) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆತ್ತವರ ಏಕೈಕ ಮಗಳು ಆಗಿದ್ದರು. ಮೃತರು ತಂದೆ ಮತ್ತು ತಾಯಿಯನ್ನು ಅಗಲಿದ್ದಾರೆ.
ಡಿ. 26ರಂದು ಸಂಜೆ ಮನೆಯಲ್ಲಿರುವಾಗ ಆಕೆಯ ತಾಯಿ ಮುಂಬರುವ ಪರೀಕ್ಷೆಗೆ ತಯಾರಿ ನಡೆಸುವಂತೆ ತಿಳಿಸಿದ್ದರು. ಆದರೂ ಆಕೆ ಓದದೇ ಫೋನ್ನಲ್ಲಿ ಮಾತನಾಡುತ್ತಿದ್ದರು. ಆಗ ತಾಯಿ ಬುದ್ದಿವಾದ ಹೇಳಿ ಓದುವಂತೆ ತಿಳಿಸಿದ್ದರು.
ಅನಂತರ ಸ್ವಲ್ಪ ಹೊತ್ತಿನಲ್ಲಿ ಸಮನ್ವಿ ಮಲಗುವ ಕೊಠಡಿಗೆ ಹೋಗಿ ಚಿಲಕ ಹಾಕಿಕೊಂಡಿದ್ದರು. ಮಗಳು ಓದುತ್ತಿದ್ದಾಳೆ ಎಂದು ಭಾವಿಸಿದ ತಾಯಿ ಸುಮ್ಮನಿದ್ದರು. ಸ್ವಲ್ಪ ಹೊತ್ತಿನ ಬಳಿಕ ಆಕೆಯನ್ನು ಕರೆದಾಗ ಒಳಗಿನಿಂದ ಪ್ರತ್ಯುತ್ತರ ಬಾರದ ಕಾರಣ ಬಾಗಿಲನ್ನು ತಳ್ಳಿ ಒಳಗೆ ಹೋಗಿ ನೋಡಿದಾಗ ಫ್ಯಾನಿಗೆ ಸೀರೆಯನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದರು.
ಕೂಡಲೇ ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಷ್ಟರಲ್ಲಿ ಕೊನೆಯುಸಿರೆಳೆದಿದ್ದರು. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






