ಇತರೆ
ಕುಂದಾಪುರ: ಕುಂಭಾಶಿ ಅಪಘಾತದಲ್ಲಿ ಇಬ್ಬರ ಸಾವಿಗೆ ಕಾರಣನಾದ ಬಸ್ ಚಾಲಕನಿಗೆ ಜೈಲು ಶಿಕ್ಷೆ

Views: 253
ಕನ್ನಡ ಕರಾವಳಿ ಸುದ್ದಿ: ಕುಂಭಾಶಿ ಸ್ವಾಗತ ಗೋಪುರದ ಹತ್ತಿರ ಹೆದ್ದಾರಿಯಲ್ಲಿ 2014ರಲ್ಲಿ ಅಪಘಾತ ಎಸಗಿ ಇಬ್ಬರ ಸಾವಿಗೆ ಕಾರಣನಾದ ಬಸ್ ಚಾಲಕ ಹೈದರ್ ಬ್ಯಾರಿಗೆ ಜೆಎಂಎಫ್ಸಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
ಖಾಸಗಿ ಬಸ್ಸನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸುತ್ತಿದ್ದಾಗ ಗೂಡ್ಸ್ ವಾಹನಕ್ಕೆ ಎದುರಿನಿಂದ ಢಿಕ್ಕಿ ಹೊಡೆದು ಅದರ ಚಾಲಕ ಚಂದ್ರ ಬಿಲ್ಲವ ಹಾಗೂ ಸಹಪ್ರಯಾಣಿಕ ಪ್ರಕಾಶ ಯಾನೆ ಮಂಜುನಾಥ ಮೃತಪಟ್ಟಿದ್ದರು. ಅಂದಿನ ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ ತನಿಖೆ ನಡೆಸಿ ಆರೋಪಿ ಬಸ್ಸಿನ ಚಾಲಕ ಹೈದರ್ ಬ್ಯಾರಿ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಶ್ರುತಿಶ್ರೀ ಅವರು ಆರೋಪಿಗೆ 1 ವರ್ಷ 6 ತಿಂಗಳು ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದ್ದಾರೆ. ಸಹಾಯಕ ಸರಕಾರಿ ಅಭಿಯೋಜಕಿ ಉಮಾ ದಾಮೋದರ ನಾಯ್ಕ ವಾದ ಮಂಡಿಸಿದ್ದರು.






