ಸಾಂಸ್ಕೃತಿಕ

ಯೋಗೀಂದ್ರ ಮರವಂತೆ “ನೀಲಿ ಫಲಕಗಳಲ್ಲಿ ನೆನಪಾಗಿ ನಿಂತವರು’ ಪುಸ್ತಕ ಲಂಡನ್‌ನಲ್ಲಿ ಬಿಡುಗಡೆ

Views: 34

ಲಂಡನ್: ಲೇಖಕ ಯೋಗೀಂದ್ರ ಮರವಂತೆ ಅವರ ಹೊಸ ಪುಸ್ತಕ ‘ನೀಲಿ ಫಲಕಗಳಲ್ಲಿ ನೆನಪಾಗಿ ನಿಂತವರು’ ಸೆ.21ರಂದು ಯು.ಕೆ ಪ್ರವಾಸದಲ್ಲಿರುವ ಕನ್ನಡದ ಖ್ಯಾತ ಲೇಖಕ, ವಿಮರ್ಶಕ ಎಸ್. ದಿವಾಕರ್ ಅವರಿಂದ ಶನಿವಾರ ಬಿಡುಗಡೆಗೊಂಡಿತು.

ಲಂಡನ್‌ನ ವೇಲ್ ಆಫ್ ಹೀತ್ ಬೀದಿಯಲ್ಲಿನ ನೋಬೆಲ್ ಪ್ರಶಸ್ತಿ ಪುರಸ್ಕೃತ ಭಾರತದ ಕವಿ ರವೀಂದ್ರನಾಥ ಟ್ಯಾಗೋರ್ 1912 ರಲ್ಲಿ ಕೆಲಕಾಲ ನೆಲೆಸಿದ್ದ ಮನೆಯ ಎದುರು ಕಾರ್ಯಕ್ರಮ ನಡೆಯಿತು. 

ಬಿಡುಗಡೆಯ ಬಳಿಕ ಮಾತನಾಡಿದ ದಿವಾಕರ್, ಲಂಡನ್ ಪ್ರಾಚೀನತೆ, ಆಧುನಿಕತೆಗಳ ವಿರೋಧಾಭಾಸವಾಗಿರುವ, ಜನಜಂಗುಳಿಯ ಮಾರುಕಟ್ಟೆಗಳ, ಅತ್ಯಂತ ಪ್ರಶಾಂತ ಪಾರ್ಕುಗಳ, ಅರಮನೆಗಳ ಮತ್ತು ಪಬ್ಬುಗಳ ಮಹಾನಗರ. ಇತಿಹಾಸ ಪ್ರಸಿದ್ಧರು ಇಲ್ಲಿ ಹಿಂದೊಮ್ಮೆ ವಾಸಿಸಿದ್ದ ಕಟ್ಟಡಗಳ ಗೋಡೆಯ ಮೇಲೆ ಬ್ಲೂಫ್ಲೇಕ್ ಅಥವಾ ನೀಲಿಫಲಕ ಅಳವಡಿಸುವ ಪರಂಪರೆ ಇದೆ. ಈ ಫಲಕಗಳಲ್ಲಿ ಅಲ್ಲಿ ವಾಸಿಸಿದ್ದ ವ್ಯಕ್ತಿಯ ಹೆಸರು, ಅವನ ಜೀವಮಾನ, ಸಾಧನೆಯ ಕ್ಷೇತ್ರದ ಸಂಕ್ಷಿಪ್ತ ಮಾಹಿತಿ ಇರುತ್ತದೆ. ಹಾಗೆ ನೋಡಿದರೆ ಈ ಒಂದೊಂದು ನೀಲಿ ಫಲಕದ್ದೂ ಒಂದೊಂದು ಕತೆಯ ಆಯ್ದ 28 ಅಂತಹ ಸಾಧಕರ ಕುರಿತಾದ ನಿರೂಪಣೆ ಈ ಪುಸ್ತಕದಲ್ಲಿದೆ ಎಂದರು. 

ಇಂತಹ ನಗರದ ಕತೆಯನ್ನು ಸೂಚ್ಯವಾಗಿ, ಧ್ವನಿಪೂರ್ಣವಾಗಿ ನಿರೂಪಿಸ ಬಯಸುವ ಲೇಖಕನಿಗೆ ಇತಿಹಾಸದ, ಅಪೂರ್ವ ಸಾಹಸಿಗಳ, ರಾಜಕೀಯ, ಕಲೆ, ಸಂಸ್ಕೃತಿಗಳ ಜ್ಞಾನವಿರಬೇಕು. ಲಂಡನ್ ಸಮೀಪದ ಬ್ರಿಸ್ಟಲ್ ನಗರದ ಏರ್‌ಬಸ್ ವಿಮಾನ ನಿರ್ಮಾಣ ಸಂಸ್ಥೆಯಲ್ಲಿ ಹದಿನೈದು ವರ್ಷಗಳಿಂದ ತಂತ್ರಜ್ಞ ಆಗಿ ದುಡಿಯುತ್ತಿರುವ ಯೋಗೀಂದ್ರ ತಮಗೆ ಈ ಜ್ಞಾನ, ಸೂಕ್ಷ್ಮ ನಿರೀಕ್ಷಣಾ ಕೌಶಲ ಮತ್ತು ವಿಶಿಷ್ಟ ಭಾಷಾಶೈಲಿ ಇರುವುದನ್ನು ಈ ವರೆಗೆ ಪ್ರಕಟವಾದ ತಮ್ಮ ‘ಲಂಡನ್ ಡೈರಿ’, ‘ಮುರಿದ ಸೈಕಲ್ ಹುಲಾಹೂಪ್ ಹುಡುಗಿ’, ‘ನನ್ನ ಕಿಟಕಿ’, ‘ಏರೋ ಪುರಾಣ’ ಪ್ರಬಂಧ ಸಂಕಲನಗಳ ಮೂಲಕ ಸಾದರಪಡಿಸಿದ್ದಾರೆ. ಧಾರವಾಡದ ಮನೋಹರ ಗ್ರಂಥಮಾಲೆ ಪ್ರಕಟಿಸಿದ ಈ ಪುಸ್ತಕವೂ ಓದುಗರ ಮೆಚ್ಚುಗೆ ಗಳಿಸಲಿದೆ ಎಂದು ಹಾರೈಸಿದರು. 

ದಿವಾಕರ ಅವರ ಪತ್ನಿ, ಪ್ರಾಧ್ಯಾಪಕಿ, ಲೇಖಕಿ ಜಯಶ್ರೀ ಕಾಸರವಳ್ಳಿ, ಲಂಡನ್ ವಾಸಿ ಹಿರಿಯ ಮನೋವೈದ್ಯ ಡಾ. ಗೋಪಾಲಕೃಷ್ಣ ಹೆಗಡೆ, , ಅವರ ಪುತ್ರಿ ಪೂರ್ಣಿಮಾ ಹೆಗಡೆ, ಬ್ರಿಸ್ಟಲ್‌ವಾಸಿ ತಂತ್ರಜ್ಞ ದೀಪಕ್ ಬಿ. ಜೆ, ಕನ್ನಡದ ಗೆಳೆಯರು ಇದ್ದರು. ಠಾಗೋರ್ ಮನೆಯ ಅಕ್ಕಪಕ್ಕದ ಕವಿ ಕೀಟ್ಸ್, ಕಾದಂಬರಿಕಾರ ಡಿ. ಎಚ್ ಲಾರೆನ್ಸ್ ನೆಲೆಸಿದ್ದ ಮನೆಗಳನ್ನು ನೋಡಲು ಬಂದಿದ್ದ ಪ್ರವಾಸಿಗಳು ಕೂಡ ಪುಸ್ತಕ ಬಿಡುಗಡೆಗೆ ಸಾಕ್ಷಿಯಾದರು.

Related Articles

Back to top button
error: Content is protected !!