ಪರಪ್ಪನ ಅಗ್ರಹಾರದಿಂದ ದರ್ಶನ್ ಸ್ಥಳಾಂತರಕ್ಕೆ ನ್ಯಾಯಾಲಯ ಒಪ್ಪಿಗೆ:ಯಾವ ಜೈಲಿಗೆ?

Views: 69
ಬೆಂಗಳೂರು:ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಯಮಗಳನ್ನು ಉಲ್ಲಂಘಿಸಿ ರಾಜಾತಿಥ್ಯ ಪಡೆದುಕೊಂಡ ದರ್ಶನ್ ಗೆ ಈಗ ಸಂಕಷ್ಟ ಹೆಚ್ಚಾಗಿದೆ.ಬೇರೆ ಜೈಲಿಗೆ ಶಿಫ್ಟ್ ಆಗಬೇಕಾದ ಪರಿಸ್ಥಿತಿ ಬಂದಿದೆ.
ಇನ್ಮುಂದೆ ಕುಟುಂಬದವರನ್ನು ಭೇಟಿಯಾಗುವುದು ಕಷ್ಟವಾಗಲಿದೆ. ಅಲ್ಲದೇ, ಜೈಲುವಾಸ ಇನ್ನಷ್ಟು ಕಟ್ಟುನಿಟ್ಟು ಆಗಲಿದೆ. ಹಾಗಾದ್ರೆ ದರ್ಶನ್ ಈಗ ಶಿಫ್ಟ್ ಆಗಲಿರುವುದು ಯಾವ ಜೈಲಿಗೆ?
ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ದರ್ಶನ್ ಗೆ ರಾಜಾತಿಥ್ಯ ನೀಡಿರುವುದು ಸಾಬೀತಾಗಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದರು. ಅದರಂತೆ ಈಗ ದರ್ಶನ್ ಅವರನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವುದು ಖಚಿತ ಆಗಿದೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲು ನ್ಯಾಯಾಲಯದ ಅನುಮತಿ ಸಿಕ್ಕಿದೆ. ಈ ಬಗ್ಗೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ.
ದರ್ಶನ್ ಮಾತ್ರವಲ್ಲದೇ, ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿನ ಎಲ್ಲ ಆರೋಪಿಗಳು ಬೇರೆ ಬೇರೆ ಜೈಲಿಗೆ ಶಿಫ್ಟ್ ಆಗಲಿದ್ದಾರೆ. ಈ ಬಗ್ಗೆ ಪೊಲೀಸರಿಗೆ ನ್ಯಾಯಾಲಯದಿಂದ ಆದೇಶ ಬಂದಿದೆ. ಆರೋಪಿಗಳ ಸ್ಥಳಾಂತರಕ್ಕೆ ಚೀಫ್ ಸೂರ್ಪಡೆಂಟ್ ಅವರಿಂದ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಆದೇಶ ಸಿಕ್ಕಿರುವುದರಿಂದ ಎಲ್ಲ ಆರೋಪಿಗಳ ಸ್ಥಳಾಂತರ ಪ್ರಕ್ರಿಯೆ ಆರಂಭಿಸಲಾಗಿದೆ.
ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿದ್ದು, ಪವನ್ , ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ ಶಿಫ್ಟ್ ಆಗಬೇಕಿದೆ. ಜಗದೀಶ್ಗೆ ಶಿವಮೊಗ್ಗ ಜೈಲು,
ಧನರಾಜ್ಗೆ ಧಾರವಾಡ ಜೈಲು ಗತಿಯಾಗಿದೆ. ವಿಜಯಪುರ ಜೈಲಿಗೆ ವಿನಯ್ ಸ್ಥಳಾಂತರ ಆಗಬೇಕಿದೆ. ನಾಗರಾಜ್ ಕಲಬುರಗಿ ಜೈಲು, ಲಕ್ಷ್ಮಣ ಶಿವಮೊಗ್ಗ ಜೈಲು, ಪ್ರದೂಶ್ ಬೆಳಗಾವಿ ಜೈಲಿಗೆ ಶಿಫ್ಟ್ ಆಗಲಿದ್ದಾರೆ.
ಇನ್ನುಳಿದ ಆರೋಪಿಗಳಾದ ಪವಿತ್ರಾ ಗೌಡ, ಅನುಕುಮಾರ್, ದೀಪಕ್ ಪರಪ್ಪನ ಅಗ್ರಹಾರದಲ್ಲೇ ಮುಂದುವರಿಯಲಿದ್ದಾರೆ.
ಜಾಮೀನುಗಾಗಿ ಪವಿತ್ರಾ ಗೌಡ ಅರ್ಜಿ ಸಲ್ಲಿಸಿದ್ದು ಆಗಸ್ಟ್ 28ಕ್ಕೆ ಅದರ ವಿಚಾರಣೆ ಮುಂದಕ್ಕೆ ಹೋಗಿದೆ. ಆರೋಪಿಗಳಾದ ರವಿ, ಕಾರ್ತಿಕ್, ನಿಕಿಲ್, ಕೇಶವಮೂರ್ತಿ ಈಗಾಗಲೇ ತುಮಕೂರು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.






