ರಾಜಕೀಯ

ಗೆಲ್ಲಲಿ.. ಸೋಲಲಿ.. ನಾನು ಇಟ್ಟ ಹೆಜ್ಜೆ ಹಿಂದೆ ಇಡೋದಿಲ್ಲ:  ರಘುಪತಿ ಭಟ್

Views: 94

ಮಂಗಳೂರು :ರಾಜ್ಯ ಬಿಜೆಪಿಯಲ್ಲಿ ಈ ಹಿಂದೆ ಯಾವುದೇ ಚುನಾವಣೆ ಟಿಕೆಟ್ ನೀಡಬೇಕೆಂದರೂ ಬೂತ್ ಮಟ್ಟದಲ್ಲಿ ಹೆಸರು ಚರ್ಚೆಯಾಗಿ ಮೇಲ್ಮಟ್ಟಕ್ಕೆ ಹೋಗುತ್ತಿತ್ತು. ಆದರೆ, ಈಗ ಕಾಂಗ್ರೆಸ್ ಮಾದರಿಯಲ್ಲಿಯೇ ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೂ ಬಂದಿದೆ ಎಂದು ಮಾಜಿ ಶಾಸಕ ಹಾಗೂ ವಿಧಾನ ಪರಿಷತ್ ಚುನಾವಣೆ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೂನ್ 3ರ ಚುನಾವಣೆಯಲ್ಲಿ ನನಗೆ ಮತ ಹಾಕಿ ಕೆಲಸ ಮಾಡಲು ಅವಕಾಶ ಕೊಡಿ. ಜನಪ್ರತಿನಿಧಿಯಾಗಿ 2001ರಿಂದ 2018ರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಉಡುಪಿ 2004ರ ಮುಂಚೆ ಹೇಗಿತ್ತು, ಈಗ ಹೇಗಿದೆ ಅನ್ನೋದೇ ನನ್ನ ಕೆಲಸಕ್ಕೆ ಸಾಕ್ಷಿ.

2004ರ ಪೂರ್ವ ಉಡುಪಿಯ ರಸ್ತೆಗಳಲ್ಲಿ ಎರಡು ಬಸ್ ಗಳು ಒಟ್ಟಿಗೆ ಪಾಸ್ ಆಗುವ ವ್ಯವಸ್ಥೆಯಿರಲಿಲ್ಲ. ವಿ. ಎಸ್. ಆಚಾರ್ಯ ಮಾರ್ಗದರ್ಶನದಲ್ಲಿ ಚತುಷ್ಪತ ರಸ್ತೆ ಮೊದಲು ಆರಂಭ ಮಾಡಿದ್ದು ನಾನು. ಈ ಸಾಧನೆಯ ಆಧಾರದಲ್ಲಿ ಮತ ಯಾಚಿಸುತ್ತಿದ್ದೇನೆ ಎಂದು ಹೇಳಿದರು.

ರಾಜ್ಯದ 224 ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಕಲೆಗೆ ಹೆಚ್ಚು ಪ್ರೋತ್ಸಾಹ ನೀಡಿದ ಕ್ಷೇತ್ರ ಉಡುಪಿ ಕ್ಷೇತ್ರವಾಗಿದೆ. ನಾನು ಶಾಸಕನಾಗಿದ್ದಾಗ ಈ ಕೆಲಸಗಳಿಗೆ ಒತ್ತು ನೀಡಿದ್ದೇನೆ. 2023 ವಿಧಾನ ಸಭಾ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಎಲ್ಲಾ ತಯಾರಿ ಮಾಡಿದ್ದೆ. ನನಗೆ ಟಕೆಟ್ ನಿರಾಕರಿಸಲಾಯಿತು, ಆದರೆ ನಾನು ಪಕ್ಷ ನಿಷ್ಠೆ ಮರೆಯಲಿಲ್ಲ. ಟಿಕೆಟ್ ನೀಡದೆ ನನ್ನನ್ನ ನಡೆಸಿಕೊಂಡ ರೀತಿ ನನಗೆ ಬೇಸರ ತರಿಸಿತ್ತು. ಆದರೂ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮ ವಹಿಸಿದ್ದೆ, ಅ ನಂತರವೂ ನಾನು ಬಿಜೆಪಿ ಪಕ್ಷದಲ್ಲಿದ್ದೆ ಎಂದರು.

ರಾಜ್ಯದಲ್ಲಿ ಎರಡೆರಡು ಚುನಾವಣೆಯಲ್ಲಿ ಸೀಟ್ ನಿರಾಕರಿಸಿದಾಗ ಪಕ್ಷದ ಪರವಾಗಿ ಕೆಲಸ ಮಾಡಿದ್ದು ನಾನೊಬ್ಬನೇ. ಮೊನ್ನೆ ವಿಧಾನ ಪರಿಷತ್ ಚುನಾವಣೆ ಘೋಷಣೆ ಯಾಗುವವರೆಗೂ ಜೀವ ಬಿಟ್ಟು ಕೆಲಸ ಮಾಡಿದ್ದೇನೆ. ನಮ್ಮ ಪಕ್ಷದಲ್ಲಿ ಮುಂಚೆ ಬೂತ್ ಮಟ್ಟದಲ್ಲಿ ಹೆಸರು ಚರ್ಚೆಯಾಗಿ ಹೋಗುತ್ತಿತ್ತು. ಆದರೆ ಈಗ ಕಾಂಗ್ರೆಸ್ ಪಕ್ಷದಂತೆ ಗಾಡ್ ಫಾದರ್ ಸಂಸ್ಕೃತಿ ಬಿಜೆಪಿ ಗೆ ಬಂದಿದೆ. ಕಾಂಗ್ರೆಸ್ ನ ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೂ ಬಂದಿದೆ. ನಾನು ಲೀಡರ್ ಗಳನ್ನು ಹಿಡಿದುಕೊಂಡಿರಲಿಲ್ಲ, ನಾನು ಕಾರ್ಯಕರ್ತರನ್ನು ಹಿಡಿದುಕೊಂಡಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವವರು ಬೇಕಾಗಿದೆ. ನಾನು ಚುನಾವಣೆಯಲ್ಲಿ ಗೆಲ್ಲಲಿ ಅಥವಾ ಸೋಲಲಿ ನಾನು ಇಟ್ಟ ಹೆಜ್ಜೆ ಹಿಂದೆ ಇಡೋದಿಲ್ಲ. ಒಟ್ಟಾರೆ ಕರಾವಳಿಯವರು ಹೇಗೂ ವೋಟ್ ಹಾಕ್ತಾರೆ ಎಂದು ನಿರ್ಲಕ್ಷ್ಯ ಮಾಡೋದಲ್ಲ. ನನ್ನನ್ನು ಒಂದು ವೇಳೆ ಪಕ್ಷದಿಂದ ಉಚ್ಚಾಟನೆ ಮಾಡಿದರೂ ನಾನು ಕಾರ್ಯಕರ್ತನಾಗಿರುತ್ತೇನೆ ಎಂದು ರಘುಪತಿ ಭಟ್ ಹೇಳಿದರು.

Related Articles

Back to top button
error: Content is protected !!