ರೇವಣ್ಣನಂತೆ ಕುಮಾರಸ್ವಾಮಿ ಶೀಘ್ರ ಜೈಲಿಗೆ..!

Views: 155
ಬೆಂಗಳೂರು: ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಜೈಲಿಗೆ ಹೋಗುವ ಕಾಲ ಹತ್ತಿರ ಬಂದಿದೆ ಎಂದು ಮದ್ದೂರಿನ ಕಾಂಗ್ರೆಸ್ ಶಾಸಕ ಕದಲೂರು ಉದಯಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಂಡ್ಯದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಕದಲೂರು ಉದಯಗೌಡ ಕುಮಾರಸ್ವಾಮಿ ಏನು ಸಾಚಾ ಅಲ್ಲ, ರೇವಣ್ಣನಂತೆ ಕುಮಾರಸ್ವಾಮಿ ಸಹ ಜೈಲಿಗೆ ಹೋಗುವ ಕಾಲ ಹತ್ತಿರ ಬಂದಿದೆ.ಕುಮಾರಸ್ವಾಮಿ ಅವರ ವಿರುದ್ಧವೂ ಮಹಿಳೆಯರು ಲೈಂಗಿಕ ದೌರ್ಜನ್ಯದ ದೂರು ಕೊಡುತ್ತಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ಹೊರ ಬಂದ ಮೇಲೆ ಮಹಿಳೆಯರು ಕುಮಾರಸ್ವಾಮಿ ವಿರುದ್ಧವೂ ದೂರು ಕೊಡುವ ಧೈರ್ಯ ಮಾಡಲಿದ್ದಾರೆ. ಕುಮಾರಸ್ವಾಮಿ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂಬ ಮಾತುಗಳು ಇವೆ. ನಟಿ ರಾಧಿಕಾ ಅವರನ್ನು ಇವರು ಪತ್ನಿಯ ರೀತಿ ಕಾಣುತ್ತಿದ್ದಾರಾ, ಅವರ ಆಪ್ತರೇ ಹಲವಾರು ಬಾರಿ ಕುಮಾರಸ್ವಾಮಿ ವಿರುದ್ಧ ನಮ್ಮ ಬಳಿ ಮಾತನಾಡಿದ್ದಾರೆ. ಕುಮಾರಸ್ವಾಮಿ ಸಾಚಾ ಅಲ್ಲ ಎಂದರು.
ಕುಮಾರಸ್ವಾಮಿ ಅವರು ಜೀವನದುದ್ದಕ್ಕೂ ಬ್ಲ್ಯಾಕ್ಮೇಲ್, ಅಪಪ್ರಚಾರ ಮಾಡುತ್ತ ಬೇರೆಯವರನ್ನು ಮುಳುಗಿಸಿದ್ದೇ ಇವರ ಸಾಧನೆ ಎಂದು ವಾಗ್ದಾಳಿ ನಡೆಸಿದರು.
ಪ್ರಜ್ವಲ್ರೇವಣ್ಣ ಪ್ರಕರಣದಲ್ಲಿ ರಾಜ್ಯಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಂಸದ ಪ್ರಜ್ವಲ್ ರೇವಣ್ಣ ವೀಡಿಯೊವನ್ನು ಸರ್ಕಾರ ಮಾಡಿಸಿತ್ತಾ, ಪ್ರಜ್ವಲ್ರೇವಣ್ಣನೇ ವೀಡಿಯೋ ಮಾಡಿಕೊಂಡಿದ್ದನು. ಇದು ಕುಟುಂಬಕ್ಕೆ ಸೇರಿದ ವಿಚಾರ, ಕುಮಾರಸ್ವಾಮಿ ಜನರ ಮುಂದೆ ಕ್ಷಮೆ ಕೇಳಬೇಕು. ಆದರೆ, ಕಾರ್ಯಕರ್ತರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಜ್ವಲ್ ಪ್ರಕರಣದಲ್ಲಿ ಹೆಣ್ಣುಮಕ್ಕಳಿಗೆ ಅನ್ಯಾಯವಾಗಿದೆ. ಸಂತ್ರಸ್ಥೆಯರ ಪರ ಜೆಡಿಎಸ್ ನಾಯಕರು ಧ್ವನಿ ಎತ್ತಿಲ್ಲ. ಅವರಿಗೆ ಧೈರ್ಯ ಹೇಳಿ ಸಾಂತ್ವನ ಹೇಳುವ ಕೆಲಸವನ್ನೂ ಮಾಡಿಲ್ಲ. ಇವರ ಮನೆಯ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದ್ದರೆ ಹೀಗೆ ಮಾಡುತ್ತಿದ್ದರಾ. ಯಾವ ನೈತಿಕತೆ ಇಟ್ಟುಕೊಂಡು ಜೆಡಿಎಸ್ ಪ್ರತಿಭಟನೆ ಮಾಡುತ್ತಿದೆ ಎಂದು ಹರಿಹಾಯ್ದರು.






