ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮುಚ್ಚಿ ಹಾಕಲು ಹೊಂದಾಣಿಕೆ ಮಾಡಿಕೊಳ್ಳುವ ರಾಜಕಾರಣಿಗಳ ಉದ್ದೇಶ:ಯತ್ನಾಳ್ ಸ್ಫೋಟಕ ಹೇಳಿಕೆ

Views: 156
ದಾವಣಗೆರೆ: ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ಮುಚ್ಚಿಹಾಕಲು ವ್ಯವಸ್ಥಿತವಾಗಿ ಯತ್ನ ನಡೆದಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಇದ್ದಾಗ ಪ್ರಜ್ವಲ್ ಸಂಸದನಾಗಿದ್ದು, ಬಿಜೆಪಿಗೂ ಇದಕ್ಕೂ ಏನು ಸಂಬಂಧ? ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಯಾರು? ತನಿಖೆ ಮಾಡೋರು ಯಾರು? ಪರಾರಿ ಆಗುವವರೆಗೆ ಸರ್ಕಾರ ಮಲಗಿಕೊಂಡಿತ್ತಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮುಚ್ಚಿ ಹಾಕಲು ಹೊಂದಾಣಿಕೆ ಮಾಡಿಕೊಳ್ಳುವ ರಾಜಕಾರಣಿಗಳ ಉದ್ದೇಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ಸಂಬಂಧ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ನಾವು ಒತ್ತಾಯಿಸಿದ್ದೇವೆ. ಆದರೂ ರಾಜ್ಯ ಸರ್ಕಾರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಈ ಷಡ್ಯಂತ್ರ ಮಾಡಲಾಗಿದೆ. ರಾಜ್ಯದಲ್ಲಿ ಎರಡು ಫ್ಯಾಕ್ಟರಿ ಇವೆ, ಅದರಲ್ಲೊಬ್ಬರ ಹೆಸರು ಕುಮಾರಸ್ವಾಮಿ. ಇನ್ನೊಂದು ಫ್ಯಾಕ್ಟರಿ ಹೆಸರು ಮೇನಲ್ಲಿ ನಾನು ಹೇಳುತ್ತೇನೆ. ಆ ಎರಡು ಫ್ಯಾಕ್ಟರಿಗಳ ಕೆಲಸನೇ ಅದು. ಇಬ್ಬರು ಬೇರೆ ಬೇರೆ ಪಕ್ಷದಲ್ಲಿದ್ದಾರೆ. ಇಬ್ಬರದ್ದೂ ಸಿಡಿ ಬಿಸಿನೆಸ್ ಒಂದೇ ಎಂದು ಕಿಡಿಕಾರಿದರು.
ಇಬ್ಬರೂ ರಾಜಕಾರಣಿಗಳು ಹಲ್ಕಾ ರಾಜಕಾರಣ ಮಾಡುತ್ತಿದ್ದಾರೆ. ಎರಡು ಕುಟುಂಬಗಳು ರಾಜ್ಯದ ರಾಜಕಾರಣವನ್ನು ಹಾಳು ಮಾಡ್ತಿವೆ. ಎಸ್ಐಟಿ ತನಿಖೆಗೆ ಪ್ರಜ್ವಲ್ ರೇವಣ್ಣ ಕೇಸ್ ವಹಿಸಲಾಗಿದೆ. ತನಿಖೆಯಿಂದ ಪೆನ್ಡ್ರೈವ್ ಯಾರು ಬಿಡುಗಡೆ ಮಾಡಿದ್ದು ಅಂತಾ ಗೊತ್ತಾಗಲಿದೆ ಎಂದರು.
ಮಹಿಳೆಯರ ಗೌರವ ದೃಷ್ಟಿಯಿಂದ ಗೌಪ್ಯವಾಗಿಡಬೇಕಿತ್ತು. ಉದ್ದೇಶಪೂರ್ವಕವಾಗಿ ಚುನಾವಣೆ ವೇಳೆ ಬ್ಲಾಕ್ ಮೇಲ್ ಮಾಡಲು ಬಳಕೆ ಮಾಡಿದ್ದಾರೆ. ಭಯ ಬೀಳಿಸಿ ಆ ಕುಟುಂಬದ ಮರ್ಯಾದೆ ಕಳೆಯಲು ವಿಡಿಯೋಗಳನ್ನು ಹರಿಬಿಡಲಾಗಿದೆ. ಚುನಾವಣೆ ಮುಂಚಿತವಾಗಿಯೇ ಬಿಡುಗಡೆ ಮಾಡಬೇಕಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇದ್ದಾಗ ಬಿಡುಗಡೆ ಮಾಡಬೆಕಿತ್ತು. ಈಗ ಯಾಕೆ ಪೆವ್ಡ್ರೈವ್ನಲ್ಲಿ ಹಾಕಿ ಹಂಚಬೇಕಿತ್ತು ಎಂದು ಪ್ರಶ್ನಿಸಿದರು.






