ಉಡುಪಿ-ಚಿಕ್ಕಮಗಳೂರು: ಸಮಬಲದ ಹೋರಾಟದ ಕಣದಲ್ಲಿರುವ ಅಭ್ಯರ್ಥಿಗಳು ಹೇಳಿದ್ದೇನು?
ಈ ಬಾರಿಯೂ ಬಿಜೆಪಿ ಮೋದಿ ವರ್ಚಸ್ಸು ಮತ್ತು ಹಿಂದುತ್ವದ ಬಲದ ಆಧಾರದ ಮೇಲೆ ಜನರ ಮುಂದೆ ಹೋದರೆ, ಕಾಂಗ್ರೆಸ್ ತನ್ನ ಸರ್ಕಾರದ ಗ್ಯಾರಂಟಿಗಳು ʼಕೈʼ ಹಿಡಿಯುವ ನಿರೀಕ್ಷೆಯಲ್ಲಿದೆ.

Views: 94
ಕರಾವಳಿಯಲ್ಲಿ ನಾಲ್ಕು, ಮಲೆನಾಡಿನಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಕೆಲವು ದಶಕಗಳಿಂದ ಬಿಜೆಪಿಯದ್ದೇ ಮೇಲುಗೈ. 2008 ರಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ಬಳಿಕ 2012 ರಲ್ಲಿ ನಡೆದ ಉಪಚುನಾವಣೆಯಲ್ಲಿ ಒಂದು ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಾಗಿದೆ ಬಿಟ್ಟರೆ, ಉಳಿದಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ.
ಈ ಬಾರಿ ಬಿಜೆಪಿ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರನ್ನು ಕಣಕ್ಕಿಳಿಸಿದೆ. ಈ ಇಬ್ಬರಿಗೂ ಇರುವ ಸಭ್ಯ ಮತ್ತು ಸರಳ ರಾಜಕಾರಣಿಗಳು ಎಂಬ ಹೆಗ್ಗಳಿಕೆಯ ಕಾರಣಕ್ಕೆ ಸಮಬಲದ ಕಣವಾಗಿದೆ. ಕಳೆದೊಂದು ದಶಕದಂತೆ ಈ ಬಾರಿಯೂ ಬಿಜೆಪಿ ಮೋದಿ ವರ್ಚಸ್ಸು ಮತ್ತು ಹಿಂದುತ್ವದ ಬಲದ ಆಧಾರದ ಮೇಲೆ ಜನರ ಮುಂದೆ ಹೋದರೆ, ಕಾಂಗ್ರೆಸ್ ತನ್ನ ಸರ್ಕಾರದ ಗ್ಯಾರಂಟಿಗಳು ʼಕೈʼ ಹಿಡಿಯುವ ನಿರೀಕ್ಷೆಯಲ್ಲಿದೆ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕೋಟ ಮತ್ತು ಹೆಗ್ಡೆ ಹೇಳಿದ್ದೇನು?
ಕೋಟ ಶ್ರೀನಿವಾಸ ಪೂಜಾರಿ ಹೀಗೆಂದರು…
*ಕ್ಷೇತ್ರದ ಎಲ್ಲಾ 1,838 ಬೂತ್ಗಳಲ್ಲಿ ಪಕ್ಷದ ಕಾರ್ಯಕರ್ತರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಯುವಕರು ಯಾವುದೇ ಜಾತಿ, ಮತ ಭೇದವಿಲ್ಲದೆ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ. ಮತದಾರರು ಬಿಜೆಪಿಯ ರಾಷ್ಟ್ರೀಯವಾದಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಕಾರ್ಯಸೂಚಿಯನ್ನು ಒಪ್ಪಿಕೊಂಡಿದ್ದಾರೆ.
*ಚಿಕ್ಕಮಗಳೂರಿಗೆ ರೈಲು ಸಂಪರ್ಕ ವಿಸ್ತರಣೆ,
*ಉಡುಪಿ-ಚಿಕ್ಕಮಗಳೂರು ನಡುವೆ ಉತ್ತಮ ರಸ್ತೆ ಸಂಪರ್ಕ, ಕ್ಷೇತ್ರಕ್ಕೆ ಅಗತ್ಯವಿರುವ ಅಭಿವೃದ್ಧಿ ಯೋಜನೆಗಳನ್ನು ಮತದಾರರು ನಿರೀಕ್ಷಿಸುತ್ತಿದ್ದಾರೆ.
*ಚಿಕ್ಕಮಗಳೂರಿನ ಕಾಫಿ ಬೆಳೆಗಾರರ ಸಮಸ್ಯೆಯನ್ನು ಮೊದಲು ಬಗೆಹರಿಸಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕಾಫಿ ಬೆಳೆಗಾರರು ಒತ್ತುವರಿ ಮಾಡಿಕೊಂಡಿರುವ 25 ಎಕರೆ ಸರ್ಕಾರಿ ಭೂಮಿಯನ್ನು 30 ವರ್ಷಗಳ ಕಾಲ ಗುತ್ತಿಗೆ ನೀಡಲು ನಿರ್ಧರಿಸಿತ್ತು. ಕಾಂಗ್ರೆಸ್ ಸರಕಾರ ಇದನ್ನು ಜಾರಿಗೊಳಿಸದೇ ಇರುವುದರಿಂದ ಸಣ್ಣ ಕಾಫಿ ಬೆಳೆಗಾರರಿಗೆ ತೊಂದರೆಯಾಗಿದೆ. ಮೀನುಗಾರರ ಅನುಕೂಲಕ್ಕಾಗಿ ಉಡುಪಿಯಲ್ಲಿ ಸಣ್ಣ ಜೆಟ್ಟಿಗಳನ್ನು ಅಭಿವೃದ್ಧಿಪಡಿಸಲು ಬಯಸುತ್ತಿದ್ದೇನೆ ಎಂದರು.
ಜಯಪ್ರಕಾಶ್ ಹೆಗ್ಡೆ ಹೇಳಿದ್ದೇನು
*ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರಕ್ಕೆ ನಿತ್ಯ ಭೇಟಿ ನೀಡಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜನರು ಬದಲಾವಣೆ ಬಯಸುತ್ತಿದ್ದಾರೆ.
*ಯುವಕರಿಗೆ ತಮ್ಮ ಊರಿನಲ್ಲಿ ಕೆಲಸ ಸಿಗುತ್ತಿಲ್ಲ. ಕೆಲವು ಪರಿಸರ ಸ್ನೇಹಿ ಕೈಗಾರಿಕೆಗಳನ್ನು ಇಲ್ಲಿಗೆ ತಂದು ಉದ್ಯೋಗಗಳನ್ನು ಸೃಷ್ಟಿಸಬೇಕಾಗಿದೆ. ಅಡಿಕೆ ಬೆಳೆಗಾರರಿಗೆ ಸಂಬಂಧಿಸಿದ ಸಮಸ್ಯೆಗಳು ಗಮನಹರಿಸಬೇಕಾದ ಮತ್ತೊಂದು ಪ್ರಮುಖ ಸಮಸ್ಯೆ ನಮ್ಮ ಮುಂದಿದೆ.. ಕ್ಷೇತ್ರದಲ್ಲಿ ನೀರಿನ ಕೊರತೆಯ ಸಮಸ್ಯೆಯೂ ಇದೆ. ನೀರಾವರಿ ಇಲಾಖೆ ಅಧಿಕಾರಿಗಳು ನೀರಿನ ಕೊರತೆ ನೀಗಿಸಲು ಯೋಜನೆಗಳನ್ನು ರೂಪಿಸಬೇಕು. ಆಯುಷ್ಮಾನ್ ಭಾರತ್ ಯೋಜನೆಯು ಅಷ್ಟೊಂದು ಪರಿಣಾಮಕಾರಿಯಾಗಿಲ್ಲದ ಕಾರಣ ಸರ್ಕಾರಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳು ಕ್ಷೇತ್ರಕ್ಕೆ ಬರಬೇಕು.
*ಪ್ರವಾಸೋದ್ಯಮದ ಅಭಿವೃದ್ಧಿಯತ್ತ ನನ್ನ ಗಮನವಿದೆ, ಏಕೆಂದರೆ ಇದು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತದೆ. ಕರಾವಳಿ ಮತ್ತು ದೇವಾಲಯ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಉಡುಪಿ ಮತ್ತು ಚಿಕ್ಕಮಗಳೂರಿನಲ್ಲೂ ರೈಲ್ವೆ ಸಂಪರ್ಕ ಸುಧಾರಿಸಬೇಕು ಎಂದರು.






