ಚಿಕ್ಕಬಳ್ಳಾಪುರದಲ್ಲಿ ಮೋದಿ ಅಬ್ಬರ!

Views: 44
ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಮೂರನೇ ಬಾರಿ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ರೈತರಿಗೆ ಯಾವ ರೀತಿಯ ಮೋಸ ಮಾಡುತ್ತದೆ ಎನ್ನುವುದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ಸಾಕ್ಷಿ. ನಾವು ರೈತರ ಬಗ್ಗೆ ಕಳಕಳಿಯಿಂದ ಯೋಜನೆಯಿಂದ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಇದಕ್ಕೆ ಈ ಹಿಂದಿನ ಸರ್ಕಾರವು ಕೇಂದ್ರ ಸರ್ಕಾರ ಕೊಡುತ್ತಿದ್ದ 6 ಸಾವಿರ ರೂಪಾಯಿ ಜತೆಗೆ 4 ಸಾವಿರ ರೂಪಾಯಿಯನ್ನು ಕೊಡುತ್ತಲಿತ್ತು. ಆದರೆ, ಈ ಸರ್ಕಾರ ಅದನ್ನು ನಿಲ್ಲಿಸಿದೆ. ಹೀಗಾಗಿ ರೈತ ವಿರೋಧಿ ಸರ್ಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.
ಚಿಕ್ಕಬಳ್ಳಾಪುರದಲ್ಲಿ ಶನಿವಾರ (ಏಪ್ರಿಲ್ 20) ಏರ್ಪಡಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಹಾಗೂ ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಪರವಾಗಿ ಮತಯಾಚಿಸಿದರು.
ಈ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 150 ಅಮೃತ ಸರೋವರ ಯೋಜನೆ ಮಾಡಲಾಗಿದೆ. 2.70 ಲಕ್ಷ ಕುಟುಂಬಕ್ಕೆ ಕುಡಿಯುವ ನೀರನ್ನು ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಆದರೆ, ಕಾಂಗ್ರೆಸ್ ಸರ್ಕಾರವು ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಇಂಥ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುತ್ತೀರಿ ಎಂಬುದಾಗಿ ಭಾವಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಬಗ್ಗೆ 24×7 ಕೆಲಸ ದೇಶದ ಜನತೆಗೆ ನನ್ನ ಕೆಲಸದ ಬಗ್ಗೆ ತಿಳಿಸಿದ್ದೇನೆ. ನಾನು ನಿಮ್ಮ ನಡುವೆ ನಮ್ಮ ರಿಪೋರ್ಟ್ ಕಾರ್ಡ್ ಹಿಡಿದು ಆಶೀರ್ವಾದ ಪಡೆಯಲು ಬಂದಿದ್ದೇನೆ. ನಾನು ಎಲ್ಲರನ್ನೂ ಪರಿವಾರ ಅಂತ ತಿಳಿದಿದ್ದೇನೆ. ನಿಮ್ಮ ಕನಸು, ಮೋದಿಯ ಸಂಕಲ್ಪವಾಗಿದೆ. ಪ್ರತಿ ಕ್ಷಣದಲ್ಲೂ ನಿಮ್ಮ ಹಾಗೂ ದೇಶದ ಬಗ್ಗೆ 24×7 ಕೆಲಸ ಮಾಡಲು ಬಂದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ಮಾಡಿದರು.
ದೇಶದ ಜನ ಎಂದೂ ಉಚಿತ ರೇಷನ್ ಸಿಗುತ್ತದೆ ಅಂತ ಅನ್ನಿಸಿರಲಿಲ್ಲ. ನಿಮ್ಮ ಮೋದಿ ಅದನ್ನು ಈಡೇರಿಸಿದ್ದಾರೆ. ಇಂದು ಚಿಕ್ಕಬಳ್ಳಾಪುರದ ಎಂಟು ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ರೇಷನ್ ಕೊಡುತ್ತಿದ್ದೇವೆ. ಇದೇ ರೀತಿ ಮುಂದಿನ ಐದು ವರ್ಷವೂ ಉಚಿತ ಅಕ್ಕಿ ನಿಮಗೆ ಸಿಗಲಿದೆ. ಕರ್ನಾಟಕದ ಲಕ್ಷಾಂತರ ಜನರಿಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಆಯುಷ್ಮಾನ್ ಯೋಜನೆ ಮೂಲಕ ಐದು ಲಕ್ಷ ರೂಪಾಯಿವರೆಗೂ ಚಿಕಿತ್ಸೆ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮೋದಿ ಸರ್ಕಾರದ ಯೋಜನೆ ಮೂಲಕ ಕೋಟ್ಯಂತರ ಮಂದಿ ಲಾಭ ಪಡೆದಿದ್ದಾರೆ. ಎಸ್ಸಿ, ಎಸ್ಟಿ, ಒಬಿಸಿ ಕುಟುಂಬದವರಿಗೆ ಭರಪೂರ ಯೋಜನೆ ನೀಡಲಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಮೊದಲು ಕೊಳಗೇರಿಯಲ್ಲಿ ವಾಸ ಮಾಡುವಂತಾಗಿತ್ತು. ವಿದ್ಯುತ್, ನೀರು ಕೂಡ ಸಿಗುತ್ತಿರಲಿಲ್ಲ. ಜನರೂ ಹಿಂದಿನ ಸರ್ಕಾರದ ಮೇಲೆ ಭರವಸೆ ಕೂಡ ಬಿಟ್ಟುಬಿಟ್ಟಿದ್ದರು. ಆದರೆ, ನಿಮ್ಮ ಭರವಸೆಯನ್ನು ಮೋದಿ ಗ್ಯಾರಂಟಿ ನಿಜ ಮಾಡಿದೆ. 25 ಕೋಟಿ ಜನ ಬಡತನದಿಂದ ಹೊರ ಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.






