ರಾಜಕೀಯ

ಪಕ್ಷದ ಶುದ್ಧೀಕರಣ, ಅಪ್ಪ-ಮಕ್ಕಳಿಂದ ರಾಜ್ಯ ಬಿಜೆಪಿಯನ್ನು ಮುಕ್ತಗೊಳಿಸುವುದೇ ನನ್ನ ಪ್ರಣಾಳಿಕೆ: ಈಶ್ವರಪ್ಪ 

Views: 29

ಶಿವಮೊಗ್ಗ: ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಬಿಜೆಪಿಯಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾದ ಸಂದರ್ಭದಲ್ಲಿ ಹಿಂದುತ್ವದ ಉಳಿವು, ಪಕ್ಷದ ಶುದ್ಧೀಕರಣ, ಅಪ್ಪ-ಮಕ್ಕಳಿಂದ ರಾಜ್ಯ ಬಿಜೆಪಿಯನ್ನು ಮುಕ್ತಗೊಳಿಸುವುದೇ ನನ್ನ ಚುನಾವಣಾ ಪ್ರಣಾಳಿಕೆ ಎಂದು ಟ್ವೀಟ್ ಮಾಡಿದ್ದರು.

ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಅವರೆ, ಅಪಪ್ರಚಾರ ಮಾಡಿ ರಾಷ್ಟ್ರಭಕ್ತರಲ್ಲಿ ಗೊಂದಲ ಮೂಡಿಸುವುದನ್ನು ನಿಲ್ಲಿಸಿ, ನರೇಂದ್ರ ಮೋದಿ, ಅಮಿತ್ ಶಾ ಅಥವಾ ಬೇರೆ ಯಾರೇ ಹೇಳಿದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕೂಡ ಬರೆದು ಮತ್ತೆ ಬಿ ಎಸ್ ಯಡಿಯೂರಪ್ಪ ಕುಟುಂಬ ವಿರುದ್ಧ ಗುಡುಗಿದ್ದಾರೆ.

ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಸಿದ್ದ ಈಶ್ವರಪ್ಪನವರು ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ಮೋದಿಯವರನ್ನು ಹೋಲುವ ವ್ಯಕ್ತಿಯನ್ನು ಕರೆತಂದಿದ್ದು ಮಾತ್ರವಲ್ಲದೆ, ಮೋದಿಯವರ ಭಾವಚಿತ್ರವನ್ನು ಕೂಡ ಬಳಸಿದ್ದರು.

ಈ ಬಗ್ಗೆ ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ, ಪಾಪಾ 15 ದಿನದಿಂದ ಈ ರೀತಿ ಅನಿಸಿದೆ, ಮೊದಲು ಹೀಗೆ ಅನಿಸಿರಲಿಲ್ಲ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ಗೆ ಟಿಕೆಟ್ ಸಿಕ್ಕಿಲ್ಲ. ಹೀಗಾಗಿ ನಮ್ಮ ಕುಟುಂಬದ ಬಗ್ಗೆ ಈಶ್ವರಪ್ಪ ಟೀಕಾ ಪ್ರಹಾರ ಮಾಡುತ್ತಿದ್ದಾರೆ. ಕೆ.ಇ.ಕಾಂತೇಶ್ಗೆ ಟಿಕೆಟ್ ಕೊಡದಿರುವುದು ಹೈಕಮಾಂಡ್ ನಿರ್ಧಾರ. ಹೈಕಮಾಂಡ್ ತೀರ್ಮಾನವನ್ನು ಕೆ.ಎಸ್.ಈಶ್ವರಪ್ಪ ಗೌರವಿಸಬೇಕಿತ್ತು. ನಮ್ಮ ಕುಟುಂಬದ ವಿರುದ್ಧ ಈಶ್ವರಪ್ಪ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಈಶ್ವರಪ್ಪ ಏನೇ ಮಾತನಾಡಿದರೂ ಆಶೀರ್ವಾದ ಅಂದುಕೊಳ್ಳುತ್ತೇನೆ ಎಂದರು.

ಜನರು ಮತದಾನದ ಮೂಲಕ ಉತ್ತರ ಕೊಡುತ್ತಾರೆ. ರಾಘವೇಂದ್ರ ಗೆಲ್ಲಿಸಿ ಎಂದು ಮೋದಿ ಪ್ರಚಾರ ಮಾಡಿ ಹೋಗಿದ್ದಾರೆ. ಈಶ್ವರಪ್ಪ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಈಶ್ವರಪ್ಪಗೆ ನಮ್ಮ ಕುಟುಂಬ ಯಾವುದೇ ಅನ್ಯಾಯ ಮಾಡಿಲ್ಲ ಎಂದರು.

ಇದೇ ವೇಳೆ ಈಶ್ವರಪ್ಪ ಪ್ರಚಾರಕ್ಕೆ ಮೋದಿ ಫೋಟೋ ಬಳಸುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ರಾಘವೇಂದ್ರ, ನಾನು ಪಕ್ಷದ ಅಧಿಕೃತ ಅಭ್ಯರ್ಥಿ, ಯಾವುದೇ ಗೊಂದಲ ಇಲ್ಲ. ನಾನು ಈಶ್ವರಪ್ಪ ಅವರ ಬಗ್ಗೆ ಮಾತಾಡಬಾರದು ಎಂದುಕೊಂಡಿದ್ದೆ. ಆದರೆ ಈಗ ಅನಿವಾರ್ಯವಾಗಿ ಮಾತಾಡಬೇಕಾಯ್ತು. ಯಡಿಯೂರಪ್ಪ ಎಲ್ಲಾ ಸವಾಲು, ಹೋರಾಟ ಮಾಡಿ ಬಂದವರು. ಬಿಎಸ್ವೈರನ್ನು ರಾಜಕೀಯವಾಗಿ ಮುಗಿಸಬೇಕೆಂದು ಹಲ್ಲೆಯಾಗಿತ್ತು. ಶಿಕಾರಿಪುರದಲ್ಲಿ ಈ ಹಿಂದೆ ಯಡಿಯೂರಪ್ಪ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು ಎಂದು ಹೇಳಿದರು.

ಹಿಂದುತ್ವ, ಪಕ್ಷದ ವಿಚಾರದಲ್ಲಿ ನಮ್ಮ ಕುಟುಂಬ ರಾಜಿ ಮಾಡಿಕೊಳ್ಳಲ್ಲ. ಕೆ.ಎಸ್.ಈಶ್ವರಪ್ಪ ಪಕ್ಷ ಕಟ್ಟಿದವರು, ಪರಿಸ್ಥಿತಿ ಅರ್ಥ ಮಾಡಿಕೊಳ್ಳಲಿ. ಹೈಕಮಾಂಡ್ ಮೇಲೆ ಈಶ್ವರಪ್ಪಗೆ ಸಿಟ್ಟು ಇದೆ, ಹೇಳಿಕೊಳ್ಳಲು ಆಗುತ್ತಿಲ್ಲ ಎಂದರು.

Related Articles

Back to top button
error: Content is protected !!