ಕೃಷಿ

ಮಹಿಳೆ ಬಲಿ ಪಡೆದಿದ್ದ ಹುಲಿ ಸೆರೆ: 200 ಸಿಬ್ಬಂದಿ, 3 ಆನೆ, ಕ್ಯಾಮೆರಾ ಟ್ರ‍್ಯಾಪ್, ಡ್ರೋನ್ ಬಳಸಿ ಹುಲಿ ಸೆರೆ

Views: 0

ಹುಲಿ ದಾಳಿಗೆ ಮಹಿಳೆ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಡೀಪುರದ ಅರಣ್ಯಾಧಿಕಾರಿಗಳು ಮಿಡ್‌ನೈಟ್ ಆಪರೇಷನ್ ನಡೆಸಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ.ಸೆರೆಸಿಕ್ಕ ಹುಲಿ ಮಹಿಳೆಯ ಮೇಲೆ ದಾಳಿ ನಡೆಸಿ ಆಕೆಯನ್ನು ಬಲಿ ಪಡೆದಿತ್ತು. ಮಹಿಳೆ ಮಾತ್ರವಲ್ಲದೇ ಈ ಹುಲಿ ಎರಡು ಜಾನುವಾರುಗಳನ್ನೂ ಕೊಂದಿತ್ತು. ಹುಲಿ ಸೆರೆಹಿಡಿಯುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅಧಿಕಾರಿಗಳ ಸಭೆ ನಡೆಸಿ ಶೀಘ್ರವೇ ಹುಲಿ ಸೆರೆಗೆ ಸೂಚಿಸಿದ್ದರು. ಇದೀಗ ಬಂಡೀಪುರದ ಅರಣ್ಯಾಧಿಕಾರಿಗಳ ಹಾಗೂ ಗ್ರಾಮಸ್ಥರ ನಿದ್ದೆಗೆಡಿಸಿದ ಹುಲಿಯನ್ನು ರಾತ್ರಿ ಕಾರ್ಯಾಚರಣೆ ಮೂಲಕ ಸೆರೆಹಿಡಿದಿದ್ದಾರೆ.

ಈ ಹುಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬಳ್ಳೂರ್ ಹುಂಡಿ ಬಳಿ ಮಹಿಳೆಯೊಬ್ಬರನ್ನು ಬಲಿ ಪಡೆದಿತ್ತು. ರಾತ್ರಿ 2 ಗಂಟೆ ಸಮಯದಲ್ಲಿ ಅಧಿಕಾರಿಗಳು ಹುಲಿಯನ್ನು ಸೆರೆಹಿಡಿದಿದ್ದಾರೆ. ಸುಮಾರು 10 ವರ್ಷ ವಯಸ್ಸಿನ ಹುಲಿ ಸೆರೆಯಾಗಿದೆ. ಜಾನುವಾರು ಮಾಂಸ ತಿನ್ನಲು ಕಳೆದ ಎರಡು ದಿನದಿಂದ ಜಾನುವಾರು ಸತ್ತ ಸ್ಥಳದ ಬಳಿ ಹುಲಿಯ ಚಲನವಲನ ಪತ್ತೆಯಾಗಿತ್ತು. ಕ್ಯಾಮೆರಾ ಟ್ರ್ಯಾಪ್‌ನಲ್ಲೂ ಹುಲಿಯ ಚಲನವಲನ ಪತ್ತೆಯಾಗಿತ್ತು. ರಾತ್ರಿ ಬೋನಿನೊಳಗೆ ಸಿಬ್ಬಂದಿ ಇರಿಸಿ, ಮರೆಮಾಚಿ ನೈಟ್ ಆಪರೇಷನ್ ಮಾಡಲಾಗಿದೆ. ಪಶುವೈದ್ಯ ವಾಸೀಂ ಮಿರ್ಜಾ ಹಾಗೂ ಸಿಬ್ಬಂದಿಯನ್ನು ಅಧಿಕಾರಿಗಳು ಬೋನಿನೊಳಗೆ ಇರಿಸಿದ್ದರು. ರಾತ್ರಿ ಜಾನುವಾರು ಕೊಂದ ಸ್ಥಳಕ್ಕೆ ಮಾಂಸ ತಿನ್ನಲು ಹುಲಿ ಬಂದ ವೇಳೆ ವೈದ್ಯರು ಬೋನಿನಲ್ಲೇ ಕುಳಿತು ಅರವಳಿಕೆ ಚುಚ್ಚುಮದ್ದು ಕೊಟ್ಟಿದ್ದಾರೆ.

ಜನರಲ್ಲಿ ಆತಂಕ ಮೂಡಿಸಿದ್ದ ಹುಲಿ ಕೊನೆಗೂ ಸೆರೆಯಾಗಿದೆ. ಹುಲಿ ಸೆರೆಗೆ 200 ಸಿಬ್ಬಂದಿ, 3 ಆನೆ, ಕ್ಯಾಮೆರಾ ಟ್ರ‍್ಯಾಪ್, ಡ್ರೋನ್ ಬಳಸಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಬಂಡೀಪುರ ಅರಣ್ಯದ ಹೆಡಿಯಾಲ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಹುಲಿ ಸೆರೆಯಿಂದ ಕಾಡಂಚಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆಹಿಡಿದ ಹುಲಿಯನ್ನು ಅಧಿಕಾರಿಗಳು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಬಿಟ್ಟಿದ್ದಾರೆ.

Related Articles

Back to top button
error: Content is protected !!