21 ಬರಪೀಡಿತ, 22 ಸಾಧಾರಣ ಹೆಚ್ಚುವರಿ ಬರಪೀಡಿತ ತಾಲ್ಲೂಕುಗಳ ಪಟ್ಟಿ ಘೋಷಿಸಿದ ಸರ್ಕಾರ

Views: 0
ಬೆಂಗಳೂರು, ರಾಜ್ಯದಲ್ಲಿ ಮುಂಗಾರು ಮುನಿಸಿಕೊಂಡ ಕಾರಣ ಭೀಕರ ಬರದ ಛಾಯೆ ಆವರಿಸಿದೆ. ರಾಜ್ಯ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸ್ಸಿನಂತೆ ಸರ್ಕಾರವು ಇತ್ತೇಚೆಗೆ ರಾಜ್ಯದ 195 ತಾಲೂಕುಗಳು ಬರ ಪೀಡಿತ ಎಂದು ಅಧಿಕೃತವಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿತ್ತು. ಇದೀಗ 21 ಬರಪೀಡಿತ, 22 ಸಾಧಾರಣ ಹೆಚ್ಚುವರಿ ಬರಪೀಡಿತ ತಾಲ್ಲೂಕುಗಳ ಪಟ್ಟಿ ಘೋಷಿಸಿ ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಜಂಟಿ ಕಾರ್ಯದರ್ಶಿ ಟಿ.ಸಿ.ಕಾಂತರಾಜ್ ಸೋಮವಾರ ಆದೇಶ ಹೊರಡಿಸಿದ್ದಾರೆ.
ಬರಪೀಡಿತ ತಾಲ್ಲೂಕುಗಳ ಪಟ್ಟಿ ಹೀಗಿದೆ
ಚಾಮರಾಜನಗರ, ಯಳಂದೂರು, ಕೆ.ಆರ್.ನಗರ, ಬೆಳಗಾವಿ, ಖಾನಾಪುರ, ಮುಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾಂ, ಕಲಘಟಗಿ, ಅಳ್ನಾವರ,ಅಣ್ಣಿಗೇರಿ, ಆಲೂರು, ಅರಸಿಕೆರೆ, ಹಾಸನ, ಮೂಡಿಗೆರೆ, ತರೀಕೆರೆ, ಪೊನ್ನಂಪೇಟೆ, ಹೆಬ್ರಿ, ಸಿದ್ದಾಪುರ, ದಾಂಡೇಲಿ.
ಸಾಧಾರಣ ಬರಪೀಡಿತ ತಾಲ್ಲೂಕುಗಳ ಪಟ್ಟಿ ಹೀಗಿದೆ
ಬೆಂಗಳೂರು ಉತ್ತರ, ಚನ್ನಪಟ್ಟಣ, ಮಾಗಡಿ, ಮಾಲೂರು, ತುಮಕೂರು, ಗುಂಡ್ಲುಪೇಟೆ, ಹನೂರು, ಕೊಳ್ಳೆಗಾಲ, ದೇವದುರ್ಗ, ಮಸ್ಕಿ, ಬೇಲೂರು, ಹೊಳೆನರಸೀಪುರ, ಸಕಲೇಶಪುರ, ಚನ್ನರಾಯಪಟ್ಟಣ, ಸೋಮವಾರಪೇಟೆ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ,ಮಂಗಳೂರು, ಮೂಡಬಿದಿರೆ, ಬ್ರಹ್ಮಾವರ, ಕಾರವಾರ.
ಪರಿಷ್ಕೃತ ಬರ ಕೈಪಿಡಿ -2020ರಲ್ಲಿ ಹಂತ-1 ಮತ್ತು ಹಂತ-2ರಲ್ಲಿ ಸೂಚಿಸಿರುವ ಮಾನದಂಡಗಳನ್ವಯ ಪ್ರಸಕ್ತ ಮುಂಗಾರು ಅವಧಿಯಲ್ಲಿ ರಾಜ್ಯದ 236 ತಾಲೂಕಗಳ ಪೈಕಿ ಈಗಾಗಲೇ 195 ತಾಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ. ಉಳಿದಿರುವ 41 ತಾಲೂಕುಗಳ ಪೈಕಿ ಹೆಚ್ಚುವರಿಯಾಗಿ 21 ತಾಲ್ಲೂಕುಗಳಲ್ಲಿ ತೀವ್ರತೆಯನ್ನು ಆಧರಿಸಿ 21 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿಯನ್ನು ನಿರ್ಧರಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಇಂದು ಸಚಿವ ಸಂಪುಟದ ಉಪ ಸಮಿತಿಯ ಶಿಫಾರಸ್ಸಿನಂತೆ ಅನುಬಂಧ-1ರಲ್ಲಿ ಹೊಸದಾಗಿ ಪ್ರಸ್ತಾಪಿಸಿರುವ 21 ತಾಲೂಕುಗಳಲ್ಲಿ ಶೇಕಡ 10 ರಷ್ಟು ಗ್ರಾಮಗಳನ್ನು ಯಾದೃಚ್ಛಿಕ ಆಗಿ ಆಯ್ಕೆ ಮಾಡಿ, ಪ್ರಮುಖ ಬೆಳೆಗಳನ್ನು ಗುರುತಿಸಿ ಪ್ರತಿ ಬೆಳೆಗಳ ಸುಮಾರು 5 sites ಇ-ಆಡಳಿತ ಅಭಿವೃದ್ಧಿ ಪಡಿಸಿರುವ ಆ್ಯಪ್ ಮೂಲಕ ಪರೀಕ್ಷೆ ಮಾಡಿ, ಬರ ಪಿಡಿಯಲ್ಲಿ ನಮೂದಿಸಿರುವ Form No.11 ರಲ್ಲಿ ದೃಢೀಕೃತ ವರದಿಯನ್ನು ಸಂಬಂಧ ಪಟ್ಟಿ ಜಿಲ್ಲಾಧಿಕಾರಿಗಳು ಸಲ್ಲಿಸಿದ್ದರು.






