20 ಲಕ್ಷ ಇನ್ಶೂರೆನ್ಸ್ ಹಣಕ್ಕಾಗಿ ಪ್ರಿಯಕರನ ಜೊತೆಗೆ ಹೊಸ ಬದುಕು ಕಟ್ಟಿಕೊಳ್ಳಲು ಪತಿಯನ್ನೇ ಕೊಂದ ಪತ್ನಿ!
Views: 237
ಕನ್ನಡ ಕರಾವಳಿ ಸುದ್ದಿ: 20 ಲಕ್ಷ ಇನ್ಶೂರೆನ್ಸ್ ಹಣಕ್ಕಾಗಿ ಹಾಗೂ ಪ್ರಿಯಕರನ ಜೊತೆಗೆ ಹೊಸ ಬದುಕು ಕಟ್ಟಿಕೊಳ್ಳುವ ಸಲುವಾಗಿ ಪತಿಗೆ ನಿದ್ದೆ ಮಾತ್ರೆ ಕೊಟ್ಟು, ವಿಷಪೂರಿತ ಹಾವನ್ನು ಬಳಸಿ ತನ್ನ ಪತಿಯನ್ನು ಕೊಂದ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ಬೆಳಕಿಗೆ ಬಂದಿದೆ.
ಈ ಪ್ರಕರಣವನ್ನು ಪೊಲೀಸರು 24 ಗಂಟೆಗಳ ಬೇಧಿಸಿದ್ದಾರೆ. ಸದ್ಯ ಕೊಲೆಯಾದ ಅತುಲ್ನ ಪತ್ನಿ ಮತ್ತು ಇತರ ಮೂವರನ್ನು ಮೀರತ್ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ದಾಮಿನಿ ಹಾಗೂ ಅತುಲ್ ಪನ್ವರ್ಗೆ ಒಂದು ಮಗುವಿದೆ. ಕೃಷ್ಣ ಕಿಡ್ಸ್ ಸ್ಕೂಲ್ ಎಂಬ ಪ್ಲೇ-ಸ್ಕೂಲ್ ಅನ್ನು ಆಕೆ ನಡೆಸುತ್ತಿದ್ದಳು. ಇದೇ ವೇಳೆಗೆ ಶಾಲೆಯ ಡ್ರೈವರ್ ಆದ ತುಷಾರ್ ಜೊತೆಗೆ ಪ್ರೇಮಾಂಕುರವಾಗುತ್ತದೆ. ಆತನೊಂದಿಗೆ ಹೊಸ ಬದುಕು ಕಟ್ಟಿಕೊಳ್ಳುವ ಸಲುವಾಗಿ ಹಾಗೂ ಪತಿಯ ಜೀವ ವಿಮೆ ಹಣಕ್ಕಾಗಿ ಇಬ್ಬರು ಕೊಲ್ಲಲು ಪ್ಲ್ಯಾನ್ ಮಾಡುತ್ತಾರೆ.
ಪ್ಲ್ಯಾನ್ ಪ್ರಕಾರ, ಪತಿ ಅತುಲ್ ಪನ್ವರ್ಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಹಾಕಿ ಕುಡಿಯಲು ಕೊಟ್ಟಿದ್ದಾಳೆ. ಹೆಂಡತಿಯ ಕುತಂತ್ರ ಅರಿಯದ ಆತ ಅದನ್ನು ಕುಡಿದು ನಿದ್ರಾಲೋಕದಲ್ಲಿರುವಾಗ ತುಷಾರ್ ವಿಷಪೂರಿತ ಹಾವನ್ನು ತಂದು ಕೊಟ್ಟಿದ್ದಾನೆ. ಅತುಲ್ ಹಾಸಿಗೆ ಮೇಲೆ ಹಾವನ್ನು ಬಿಟ್ಟು ಕೊಂದಿದ್ದಾರೆ. ಅತುಲ್ ಸಾವು ಸಹಜ ಎಂದು ಬಿಂಬಿಸಲು ಈ ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದೆ. ದಾಮಿನಿಯ ಪ್ರಿಯಕರ ತುಷಾರ್ಗೆ ಹಾವನ್ನು ತರಲು ಸೋನು ಮತ್ತು ಉದಯ್ ಎಂಬ ಇಬ್ಬರು ಸಹಾಯ ಮಾಡಿದ್ದರು ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಪೊಲೀಸರು ಈ ಘಟನೆಯನ್ನು ಅನುಮಾನಾಸ್ಪದವೆಂದು ಪರಿಗಣಿಸಿ ತನಿಖೆ ಆರಂಭಿಸಿದರು. ತನಿಖೆಯ ಸಮಯದಲ್ಲಿ, ದಾಮಿನಿ ಮತ್ತು ತುಷಾರ್ ಅವರ ಮೊಬೈಲ್ ಫೋನ್ಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಇಬ್ಬರು ದೀರ್ಘ ಕಾಲ ಮಾತನಾಡಿದ್ದರು. ತುಷಾರ್ ಅವರ ಮೊಬೈಲ್ ಫೋನ್ನಲ್ಲಿ ಹಾವುಗಳ ಛಾಯಾಚಿತ್ರಗಳು ಸಹ ಪೊಲೀಸರಿಗೆ ಸಿಕ್ಕಿವೆ. ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಮೀರತ್ ಎಸ್ಎಸ್ಪಿ ಅವಿನಾಶ್ ಪಾಂಡೆ ಹೇಳಿದ್ದಾರೆ,






