ಸಂಜೆ ಬಹಿರ್ದೆಸೆಗೆ ತೆರಳಿದ್ದ ಯುವತಿ ಮರುದಿನ ಶವವಾಗಿ ಪತ್ತೆ, ಸಾಮೂಹಿಕ ಅತ್ಯಾಚಾರಗೈದು, ಕೊಲೆ ಶಂಕೆ!
Views: 39
ಕನ್ನಡ ಕರಾವಳಿ ಸುದ್ದಿ: ಸಂಜೆ ಬಹಿರ್ದೆಸೆಗೆ ತೆರಳಿದ್ದ ಯುವತಿ ಮರುದಿನ ಶವವಾಗಿ ಪತ್ತೆಯಾಗಿದ್ದು, ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪದ ಮೇಲೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಸಿರವಾರ ತಾಲೂಕಿನ ಗ್ರಾಮವೊಂದರ 21 ವರ್ಷದ ಯುವತಿ ಮೃತಪಟ್ಟಿದ್ದಾರೆ. ಬುಧವಾರ ಸಂಜೆ 7 ಗಂಟೆ ಸಮಯದಲ್ಲಿ ಮನೆಯಿಂದ ಬಹಿರ್ದೆಸೆಗೆಂದು ಯುವತಿ ಹೊರಬಂದಿದ್ದರು. ಈ ವೇಳೆ ಯುವತಿಯನ್ನು ಅಪಹರಣಗೈದು ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಬಾವಿಯಲ್ಲಿ ಎಸೆಯಲಾಗಿದೆ ಎಂದು ಯುವತಿಯ ತಂದೆ ಸಿರವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಂಜೆಯ ವೇಳೆ ಬಹಿರ್ದೆಸೆಗೆ ತೆರಳಿದ್ದ ಯುವತಿ ಸುಮಾರು ಸಮಯ ಕಳೆದರೂ ಮನೆಗೆ ಮರಳಿ ಬರಲಿಲ್ಲ. ಆತಂಕಗೊಂಡು ಆಕೆ ತೆರಳಿದ್ದ ಕಡೆ ಹೋಗಿ ಹುಡುಕಿದರೂ ಪತ್ತೆಯಾಗಿಲ್ಲ. ಮರುದಿನ ಬೆಳಗ್ಗೆ ಗ್ರಾಮದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಗಳ ಶವ ನೋಡಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ತಂದೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಸಿರವಾರ ಠಾಣೆ ಪೊಲೀಸರು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.






