ರಾಜ್ಯದಲ್ಲಿ ಡೆಂಗ್ಯೂ ಜ್ವರ ಏರಿಕೆ ; ಮತ್ತೆ 445 ಪಾಸಿಟಿವ್ ಪ್ರಕರಣಗಳು ಪತ್ತೆ

Views: 30
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಜ್ವರದ ಅಬ್ಬರ ಮುಂದುವರಿದಿದೆ. ಇದೇ ಅವಧಿಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬಂದಿದೆ. ಕಳೆದ ದಿನ ರಾಜ್ಯಾದ್ಯಂತ 445 ಜನರಿಗೆ ಡೆಂಗ್ಯೂ ಪಾಸಿಟಿವ್ ದಾಖಲಾಗಿವೆ. ಇದರಿಂದ ಒಟ್ಟೂ ಪ್ರಕರಣಗಳ ಸಂಖ್ಯೆ 9,527ಕ್ಕೆ ಏರಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದ್ದು, ಕಳೆದ 24 ಗಂಟೆಯಲ್ಲಿ 2,630 ಜನರನ್ನು ಡೆಂಗ್ಯೂ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 445 ಮಂದಿಗೆ ಡೆಂಗ್ಯೂ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 294, ತುಮಕೂರು 19, ಧಾರವಾಡ 12, ಬೀದರ್ 72, ಬಳ್ಳಾರಿ 3, ಮಂಡ್ಯ 33, ದಕ್ಷಿಣ ಕನ್ನಡ 62, ಉಡುಪಿ 5 ಹಾಗೂ ಚಿಕ್ಕಮಗಳೂರು 13 ಸೇರಿದಂತೆ 445 ಜನರಿಗೆ ಡೆಂಗ್ಯೂ ಪಾಸಿಟಿವ್ ಎಂದು ಪರೀಕ್ಷೆಯಿಂದ ತಿಳಿದು ಬಂದಿದೆ. ಒಟ್ಟಾರೆ ರಾಜ್ಯದಲ್ಲಿ, 308 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 7 ಮಂದಿ ಜ್ವರದಿಂದ ಮೃತಪಟ್ಟಿದ್ದಾರೆ.
ಭಾನುವಾರ ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಅತ್ಯಧಿಕ 294 ಜನರಿಗೆ ಡೆಂಗ್ಯೂ ದೃಢಪಟ್ಟಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎರಡನೇ ಅತಿಹೆಚ್ಚು 62 ಹಾಗೂ ಮಂಡ್ಯದಲ್ಲಿ 33 ಪ್ರಕರಣಗಳು ಪತ್ತೆಯಾಗಿವೆ.
ಎಚ್ಚರಿಕೆ ಇರಲಿ, ಭಯ ಬೇಡವೆಂದ ಅವಧೂತ ವಿನಯ್ ಗುರೂಜಿ: ಡೆಂಗ್ಯೂ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಭಾನುವಾರ ಮಹಾತ್ಮಾ ಗಾಂಧಿ ಸೇವಾ ಟ್ರಸ್ಟ್ ವತಿಯಿಂದ ಸ್ವಚ್ಛತಾ ಅಭಿಯಾನ ಹಾಗೂ ಸೊಳ್ಳೆಗಳ ಔಷಧ ಸಿಂಪಡಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವಧೂತ ವಿನಯ್ ಗುರೂಜಿ, ಡೆಂಗ್ಯೂ ಜ್ವರದ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಭಯಪಡುವ ಅಗತ್ಯವಿಲ್ಲ ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಮಳೆ ಪ್ರಮಾಣ ಜಾಸ್ತಿಯಾದ ಹಿನ್ನೆಲೆಯಲ್ಲಿ ಡೆಂಗ್ಯೂ ಜ್ವರವೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮ ಪಾಲಿಸಬೇಕು. ನಗರಗಳಲ್ಲಿ ಜನರು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ರೋಗಗಳಿಂದ ದೂರ ಇರಬೇಕು. ಜ್ವರದ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿರುವ ಬಿಬಿಎಂಪಿ ಕಾರ್ಯವು ಶ್ಲಾಘನೀಯ ಎಂದರು.