ಮಲಗಿದ್ದಾಗಲೇ ಆಯುಧದಿಂದ ಹೊಡೆದು ವೈದ್ಯನ ಕೊಲೆ : ಚಿನ್ನದ ಆಸೆಗೆ ಸ್ನೇಹಿತನಿಂದಲೇ ಕೃತ್ಯ
Views: 75
ಕನ್ನಡ ಕರಾವಳಿ ಸುದ್ದಿ: ಶಿರಸಿಯ ಕೆ.ಎಚ್.ಬಿ ಕಾಲೋನಿಯಲ್ಲಿ ಠಾಣೆ ಮದುವೆಗೆ ತಯಾರಾಗಿದ್ದ ವೈದ್ಯನನ್ನು ಹತ್ಯೆ ಮಾಡಿದ ಆರೋಪಿಯನ್ನು ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಿವಮೊಗ್ಗ ಮೂಲದ ಮಂಜುನಾಥ್ ಪಾಂಡುರಂಗ ನಾಯ್ಕ (68) ಎಂದು ಗುರುತಿಸಲಾಗಿದೆ. ಈತ ಡಾ.ರಮೇಶ್ ಕಲಗುಟಕರ (51) ಅವರನ್ನು ಹತ್ಯೆ ಮಾಡಿ ಚಿನ್ನ ಕದ್ದು ಪರಾರಿಯಾಗಿದ್ದ. ಆರೋಪಿ ಹತ್ಯೆಯಾದ ವೈದ್ಯರ ಸ್ನೇಹಿತನೇ ಆಗಿದ್ದು, ಚಿನ್ನದ ಆಸೆಗೆ ಕೊಲೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿ ಮಂಜುನಾಥ್ ಡಾ.ರಮೇಶ್ ಅವರ ಬಳಿ ಹಲವು ಬಾರಿ ಚಿಕಿತ್ಸೆಗಾಗಿ ಬಂದಿದ್ದ. ಇದರಿಂದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ವೈದ್ಯ ರಮೇಶ್ ಹಲವು ಬಾರಿ ಅವನನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಸೋಮವಾರ ವೈದ್ಯನ ವಿವಾಹ ಆಗಿದ್ದರಿಂದ ಶನಿವಾರ ಬ್ಯಾಂಕ್ಗೆ ತೆರಳಿ ಬಂಗಾರ ಬಿಡಿಸಿಕೊಂಡು ಬಂದಿದ್ದರು. ಆರೋಪಿಯನ್ನು ವಿಶ್ವಾಸದಲ್ಲಿ ಮನೆಯಲ್ಲಿ ಇರಿಸಿಕೊಂಡು ಬಂಗಾರದ ಒಡವೆಗಳನ್ನು ತೋರಿಸಿದ್ದರು. ರಾತ್ರಿ ವೇಳೆ ವೈದ್ಯರು ಮಲಗಿದ್ದಾಗ ಆರೋಪಿಯು ಆಯುಧದಿಂದ ಬಲವಾಗಿ ಹೊಡೆದು ಹತ್ಯೆ ಮಾಡಿ, ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ. ಹತ್ಯೆ ನಡೆದು 24 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಚಿನ್ನಾಭರಣ ಸಮೇತ ಬಂಧಿಸಿದ್ದಾರೆ.






