ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವಂತೆ ಅನಂತಕುಮಾರ ಹೆಗಡೆಗೆ ಆಹ್ವಾನಿಸಿದ ಪ್ರತಾಪ್ ಸಿಂಹ

Views: 121
ಕನ್ನಡ ಕರಾವಳಿ ಸುದ್ದಿ: ಕಳೆದ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಟಿಕೆಟ್ ಕೈತಪ್ಪಿದ ಬಳಿಕ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದ ಉತ್ತರಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ರಾಜಕೀಯಕ್ಕೆ ಮರಳುವಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಆಹ್ವಾನಿಸಿದ್ದಾರೆ.
ಪ್ರತಾಪ್ ಸಿಂಹ್ ತಮ್ಮ ಫೇಸ್ಬಕ್ ಖಾತೆ ಮೂಲಕ ಅನಂತಕುಮಾರ ಹೆಗಡೆ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದು, ಜೊತೆಗೆ ಸಕ್ರಿಯ ರಾಜಕೀಯಕ್ಕೆ ಆಗಮಿಸುವಂತೆ ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಇಬ್ಬರೂ ನಾಯಕರು ಕೂಡ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ್ ತಮ್ಮ ಮೈಸೂರು ಕ್ಷೇತ್ರ ಹಾಗೂ ಅನಂತಕುಮಾರ ಹೆಗಡೆ ಉತ್ತರ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಈ ಇಬ್ಬರೂ ನಾಯಕರನ್ನು ಪಕ್ಷ ಬದಿಗಿಟ್ಟು ಬೇರೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು.
ಪ್ರತಾಪ್ ಸಿಂಹ್ ತಮಗೆ ಟಿಕೆಟ್ ಕೈ ತಪ್ಪಿಸಿದರೂ ಪಕ್ಷದ ಚಟುವಟಿಕೆಗಳಿಂದ ದೂರವಾಗಿರಲಿಲ್ಲ. ಆದರೆ ಯಾವಾಗ ಅನಂತಕುಮಾರ ಹೆಗಡೆ ಬದಲಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಪಕ್ಷ ಕಣಕ್ಕಿಳಿಸಿತ್ತೋ ಆವತ್ತಿನಿಂದ ಫೈರ್ ಬ್ರಾಂಡ್ ಎಂದು ಕರೆಸಿಕೊಂಡಿದ್ದ ಅನಂತಕುಮಾರ ಹೆಗಡೆ ಸಂಪೂರ್ಣವಾಗಿ ರಾಜಕೀಯದಿಂದ ದೂರ ಉಳಿದುಕೊಂಡಿದ್ದಾರೆ. ಇದೀಗ ಅನಂತಕುಮಾರ ಅಪ್ತರಾಗಿರುವ ಪ್ರತಾಪ್ ಸಿಂಹ್ ಹುಟ್ಟು ಹಬ್ಬದ ಶುಭಾಶಯ ಹೇಳಿ, ವಾಪಸ್ ರಾಜಕೀಯಕ್ಕೆ ಮರಳವಂತೆ ಆಹ್ವಾನಿಸಿದ್ದು ತೀವ್ರ ಕುತೂಹಲ ಕೆರಳಿಸಿದೆ.