ರಾಜಕೀಯ

ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ

Views: 77

ಮಂಗಳೂರು: ಮಂಗಳೂರಿನಲ್ಲಿ ಭಾನುವಾರ ನಡೆದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋಗೆ ಅಪಾರ ಜನಸ್ತೋಮವೇ ಹರಿದು ಬಂದಿತ್ತು. ಸಂಜೆ 7.15ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯವರು ನೇರವಾಗಿ ನಗರದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ ತೆರಳಿ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದರು.

ಸಮಾಜ ಸುಧಾರಕ ನಾರಾಯಣ ಗುರುಗಳ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದ ನಂತರ ಶ್ಲೋಕಗಳ ಪಠಣದೊಂದಿಗೆ ರೋಡ್ ಶೋ ಆರಂಭಿಸಿದರು. ಕೇಸರಿ ಟೋಪಿ ಮತ್ತು ಶಾಲುಗಳನ್ನು ಹಾಕಿಕೊಂಡು ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ ಸಾವಿರಾರು ಜನರು ಬಿಜೆಪಿ ಧ್ವಜ, ಕೇಸರಿ ಶಾಲು ಬೀಸುವ ಮೂಲಕ ಹೂಮಳೆ ಸೂಸಿ ಅದ್ದೂರಿಯಾಗಿ ಸ್ವಾಗತಿಸಿದರು.

ತೆರೆದ ವಾಹನದಲ್ಲಿ ರೋಡ್ ಶೋನಲ್ಲಿ ಪಾಲ್ಗೊಂಡ ಪ್ರಧಾನಿ, ಕೇಸರಿ ಟೋಪಿ ಧರಿಸಿ, ಕೈಯಲ್ಲಿ ಬಿಜೆಪಿ ಚಿಹ್ನೆಯಾದ ಕಮಲದೊಂದಿಗೆ ಉತ್ಸಾಹಭರಿತ ಪ್ರೇಕ್ಷಕರತ್ತ ಕೈ ಬೀಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕೋಟಾ ಶ್ರೀನಿವಾಸ್ ಪೂಜಾರಿ ಅವರ ಪಕ್ಕದಲ್ಲಿದ್ದರು. ನಾರಾಯಣ ಗುರು ವೃತ್ತದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ನವಭಾರತ್ ವೃತ್ತದಲ್ಲಿ ರಾತ್ರಿ 8.45 ಕ್ಕೆ ರೋಡ್ ಶೋ ಮುಕ್ತಾಯಗೊಂಡಿತು. ನವಭಾರತ ಸರ್ಕಲ್‌ನಲ್ಲಿ ಎಸ್‌ಯುವಿ ಹತ್ತಿದ ಅವರು ಹಂಪನಕಟ್ಟೆ ವೃತ್ತದವರೆಗೆ ರಸ್ತೆಬದಿಯಲ್ಲಿ ನಿಂತಿದ್ದ ಜನರತ್ತ ಕೈ ಬೀಸಿದರು.

ಯಕ್ಷಗಾನ, ಹುಲಿ ಕುಣಿತ ಮತ್ತಿತರ ತಂಡಗಳಿಂದ ಡೋಲು ಹಾಗೂ ಇತರೆ ಸಂಗೀತ ವಾದ್ಯಗಳ ವಾದನ ನೆರೆದಿದ್ದವರಿಗೆ ಚೈತನ್ಯ ತುಂಬಿತು. ರೋಡ್ ಶೋ ಉದ್ದಕ್ಕೂ ಜನರು ‘ಜೈ ಜೈ ಮೋದಿ’ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ನೆಚ್ಚಿನ ನಾಯಕನನ್ನು ಹುರಿದುಂಬಿಸಿದರು. ಮೋದಿ ಕಾರ್ಯಕ್ರಮಕ್ಕಾಗಿ ಮಂಗಳೂರು ಬಿಜೆಪಿ ಬಾವುಟ, ಬಂಟಿಂಗ್ಸ್‌ಗಳಿಂದ ಕೇಸರಿಮಯವಾಗಿತ್ತು. ಬೆಳಗ್ಗೆಯಿಂದಲೇ ಪಥಸಂಚಲನ ನಡೆಯುವ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಮತ್ತು ಉಡುಪಿಯ ಬಿಜೆಪಿ ಶಾಸಕರು ಮತ್ತು ಇತರ ಬಿಜೆಪಿ ನಾಯಕರು ರೋಡ್ ಶೋ ಆರಂಭಕ್ಕೂ ಮುನ್ನ ಮೋದಿ ಅವರನ್ನು ಸ್ವಾಗತಿಸಿದರು. ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು ಪ್ರಧಾನಮಂತ್ರಿ ಅವರಿಗೆ ದೇವಿಯ ಭಾವಚಿತ್ರವನ್ನು ನೀಡಿದರು.

Related Articles

Back to top button
error: Content is protected !!