ಬ್ಯಾನರ್ ವಿಚಾರಕ್ಕೆ ಜನಾರ್ದನ ರೆಡ್ಡಿ ಮನೆ ಮುಂದೆ 2 ಗುಂಪುಗಳ ನಡುವೆ ಘರ್ಷಣೆ: ಒಬ್ಬ ಸಾವು
Views: 59
ಕನ್ನಡ ಕರಾವಳಿ ಸುದ್ದಿ: ಮಾಜಿ ಸಚಿವ ಜನಾರ್ದನ ರೆಡ್ಡಿಯವರ ನಿವಾಸದ ಸಮೀಪ ಗುರುವಾರ ಸಂಜೆಯ ಹೊತ್ತಿಗೆ ಎರಡು ಗುಂಪುಗಳ ಭಾರೀ ಘರ್ಷಣೆ ಸಂಭವಿಸಿ, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬಾತ ಮೃತಪಟ್ಟಿದ್ದಾರೆ.
ಜ.3ರಂದು ವಾಲ್ಮೀಕಿ ಪುತ್ಥಳಿ ಅನಾವರಣವಿರುವುದರಿಂದ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್ ಕಟ್ಟಲು ಒಂದು ಗುಂಪು ಮುಂದಾಗಿತ್ತು. ಇದಕ್ಕೆ ರೆಡ್ಡಿ ಆಪ್ತರು ಅಡ್ಡಿಪಡಿಸಿದಾಗ, ಎರಡೂ ಗುಂಪುಗಳ ನಡುವೆ ತೀವ್ರ ಚಕಮಕಿ ಶುರುವಾಗಿ ಕಲ್ಲುತೂರಾಟ ಸಂಭವಿಸಿದೆ.
ಈ ವೇಳೆ ಸ್ಥಳಕ್ಕೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಬಂದಿದ್ದಾರೆ. ಮತ್ತೊಂದು ಕಡೆ ಜನಾರ್ದನ್ ರೆಡ್ಡಿ ಆಪ್ತ ಶ್ರೀರಾಮುಲು ಕೂಡ ಬಂದಿದ್ದಾರೆ. ಭಾರೀ ತಳ್ಳಾಟ, ನೂಕಾಟ ಸಂಭವಿಸಿದೆ. ತಾನು ಕಾರಿನಿಂದ ಕೆಳಗಿಳಿಯುತ್ತಿದ್ದಾಗ, ಸತೀಶ್ ರೆಡ್ಡಿ ಗನ್ಮ್ಯಾನ್ ಗಾಳಿಯಲ್ಲಿ 4 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಜನಾರ್ದನ್ ರೆಡ್ಡಿ ಆರೋಪಿಸಿದ್ದಾರೆ.
ಪ್ರಾಥಮಿಕ ಮೂಲಗಳ ಪ್ರಕಾರ ಸತೀಶ್ ರೆಡ್ಡಿ ಗನ್ ಮ್ಯಾನ್ ಗಾಳಿಯಲ್ಲಿ ಹಾರಿಸಿದ ಗುಂಡು ಆಕಸ್ಮಿಕವಾಗಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ಗೆ ತಾಗಿ ಬಲಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಬೆನ್ನಲ್ಲೇ ಭಾರೀ ವಾಗ್ವಾದಗಳು ನಡೆದಿವೆ. ಕೊಪ್ಪಳ ಜಿಲ್ಲೆ ಗಂಗಾವತಿ ಶಾಸಕ ಜನಾರ್ದನ್ ರೆಡ್ಡಿ ಮಾತನಾಡಿ, ಇದು ಶಾಸಕ ಭರತ್ ರೆಡ್ಡಿ ಸಂಚು ಎಂದಿದ್ದಾರೆ. ಭರತ್ ರೆಡ್ಡಿ ಪ್ರತಿಕ್ರಿಯಿಸಿ, ವಾಲ್ಮೀಕಿ ಪುತ್ಥಳಿ ಅನಾವರಣ ಹಾಳು ಮಾಡಲು ಜನಾರ್ದನ್ ರೆಡ್ಡಿ ಹೀಗೆ ಮಾಡಿಸಿದ್ದಾರೆಂದು ಪ್ರತ್ಯಾರೋಪ ಮಾಡಿದ್ದಾರೆ.






