ಪೂಜೆಯ ನೆಪ ಹೇಳಿ ಯುವತಿ ಮೇಲೆ ದೇವಸ್ಥಾನ ಅರ್ಚಕನಿಂದ ಅತ್ಯಾಚಾರ!
Views: 142
ಕನ್ನಡ ಕರಾವಳಿ ಸುದ್ದಿ: ಚಿಕ್ಕಮಗಳೂರು ತಾಲೂಕಿನ ಬಾಸ್ಕಲ್ ಸಮೀಪದ ನೆರಡಿ ಗ್ರಾಮದ ಪಂಜುರ್ಲಿ ದೇವಸ್ಥಾನದ ಅರ್ಚಕನಿಂದ ಯುವತಿಯ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.
ತಾಲೂಕಿನ ಬಾಸ್ಕಲ್ ಸಮೀಪದ ನೆರಡಿ ಗ್ರಾಮದ ಪಂಜುರ್ಲಿ ದೇವಸ್ಥಾನದ ಅರ್ಚಕನಾಗಿರುವ ಶ್ರೀಧರ್ (54), ಎಂಬಾತನೇ ಈ ಕೃತ್ಯ ಎಸಗಿರುವ ಆರೋಪಿ ಎನ್ನಲಾಗಿದೆ.
ನಗರದಲ್ಲಿರುವ ತನ್ನ ಬಾಡಿಗೆ ಮನೆಗೆ ಪೂಜೆಯ ನೆಪ ಹೇಳಿ ಯುವತಿಯನ್ನು ಕರೆಸಿಕೊಂಡಿದ್ದ ಈತ, ಯಾರಿಗಾದರೂ ವಿಷಯ ತಿಳಿಸಿದರೆ ಮನೆಯವರಿಗೆ ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿಯ ನಿರಂತರ ದೈಹಿಕ ಸಂಪರ್ಕ ಹಾಗೂ ಬೆದರಿಕೆಯಿಂದಾಗಿ ನೊಂದ ಯುವತಿ ಈಗ 7 ತಿಂಗಳ ಗರ್ಭಿಣಿಯಾಗಿದ್ದು, ಇತ್ತೀಚೆಗೆ ಈ ವಿಷಯ ಕುಟುಂಬದವರಿಗೆ ತಿಳಿದಿದೆ. ತಕ್ಷಣವೇ ಎಚ್ಚೆತ್ತ ಯುವತಿಯ ಕುಟುಂಬಸ್ಥರು ಚಿಕ್ಕಮಗಳೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಯುವತಿಯ ದೂರಿನ ಆಧಾರದ ಮೇಲೆ ಅರ್ಚಕ ಶ್ರೀಧರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ, ಆರೋಪಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.






