ನಾಪತ್ತೆಯಾಗಿದ್ದ ಹರಿಯಾಣದ ಯುವಕನನ್ನು ತ್ರಾಸಿಯಲ್ಲಿ ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿದ ಗಂಗೊಳ್ಳಿ ಪೊಲೀಸರು
Views: 144
ಕನ್ನಡ ಕರಾವಳಿ ಸುದ್ದಿ: ಹರಿಯಾಣ ಯಮುನಾ ನಗರದಿಂದ ನಾಪತ್ತೆಯಾಗಿದ್ದ ಯುವಕನೋರ್ವನನ್ನು ಉಡುಪಿ ಜಿಲ್ಲೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಾಸಿ ಎಂಬಲ್ಲಿ ಗಂಗೊಳ್ಳಿ ಪೊಲೀಸರು ಸಾರ್ವಜನಿಕರ ಸಹಕಾರದಲ್ಲಿ ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ.
ಹರಿಯಾಣ ಮೂಲದ ಶಿವಮ್(22) ಎಂಬ ಯುವಕ ಇತ್ತೀಚೆಗೆ ಮನೆಯಿಂದ ಕಾಣೆಯಾಗಿದ್ದು, ಈ ಬಗ್ಗೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಯುವಕ ಶಿವಮ್ ರೈಲು ಹತ್ತಿದ್ದು ಈತ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ತ್ರಾಸಿಯ ಯುವಕರ ತಂಡವೂ ಇತ್ತು. ಶಿವಂ ಚಹರೆ ಬಗ್ಗೆ ಇವರು ಪೊಲೀಸರಿಗೆ ಮಾಹಿತಿ ನೀಡಿದ್ದು ಯುವಕ ತ್ರಾಸಿಯಲ್ಲಿದ್ದ ಬಗ್ಗೆ ಖಚಿತ ವರ್ತಮಾನ ಪಡೆದು ಗಂಗೊಳ್ಳಿ ಠಾಣೆ ಪಿಎಸ್ಐ ಪವನ್ ನಾಯಕ್, ಅಪರಾಧ ವಿಭಾಗದ ಪಿಎಸ್ಐ ಸುನೀಲ್, ಹೆಡ್ ಕಾನ್ಸ್ಟೇಬಲ್ ಚಂದ್ರ ಹಾಗೂ ಸಿಬ್ಬಂದಿಗಳು ವಿಚಾರಿಸಿ ಯುವಕನ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಗಂಗೊಳ್ಳಿ ಪೊಲೀಸರ ಜೊತೆ ಸಮನ್ವಯತೆ ಸಾಧಿಸಿದ ಶಿವಂ ಪೋಷಕರು ಹರಿಯಾಣ ರಾಜ್ಯದಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ ಗಂಗೊಳ್ಳಿ ಠಾಣೆಗೆ ಬಂದು ಮಗನನ್ನು ಕರೆದೊಯ್ದಿದ್ದಾರೆ. ಪೊಲೀಸರು ಮತ್ತು ಸಾರ್ವಜನಿಕರ ಸಮಯಪ್ರಜ್ಞೆಗೆ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.






