ತರಗತಿಯಲ್ಲೇ ಕುಸಿದು ಬಿದ್ದ ವಿದ್ಯಾರ್ಥಿ: ಬಾಲಕನ ಸಾವಿಗೆ ಶಾಲಾ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರ ಆಕ್ರೋಶ
Views: 33
ಕನ್ನಡ ಕರಾವಳಿ ಸುದ್ದಿ: ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ ತರಗತಿ ಕೊಠಡಿಯೊಳಗೆಯೇ ಬಾಲಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೇವಲ 12 ವರ್ಷದ ಅರ್ಹಾನ್ ಪಾಷಾ ಎಂಬ ಬಾಲಕ ಕ್ಲಾಸ್ ರೂಮ್ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದು, ಸದ್ಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜೂನ್ 10 ರಂದು ನಡೆದ ದುರಂತ ಇದಾಗಿದ್ದು, ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಇದ್ದ ಮಗನನ್ನೂ ಕಳೆದುಕೊಂಡ ಪೋಷಕರಿಗೆ ಈಗ ದಿಕ್ಕುದೋಚದಂತಾಗಿದೆ. ಇತ್ತ ಶಾಲೆ ತನ್ನ ಗೌರವವನ್ನು ಉಳಿಸಿಕೊಳ್ಳಲು ಘಟನೆಯನ್ನು ಮುಚ್ಚಿಹಾಕಲು ಹಣದ ಆಮಿಷವನ್ನು ಒಡ್ಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ..
ಜೂನ್ 10 ರಂದು ಮಧ್ಯಾಹ್ನದ ಸುಮಾರಿಗೆ ಅರ್ಹಾನ್ ತರಗತಯಲ್ಲಿರುವಾಗಲೇ ಶಿಕ್ಷಕಿ ಬಳಿ ಸುಸ್ತಾಗುತ್ತಿದೆ ಎಂದು ಹೇಳಿದ್ದನಂತೆ. ಆದರೆ ಆ ವೇಳೆ ಶಿಕ್ಷಕಿ ಸಹಿತ ಶಾಲಾ ಸಿಬ್ಬಂದಿ ಯಾವುದೇ ಸೌಜನ್ಯ ತೋರದೆ ಏನಾಗಿದೆ ಅಂತಾನೂ ಕೇಳಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಕ್ಲಾಸ್ ರೂಮ್ ಗೆ ಬಂದು ಅರ್ಹಾನ್ ಕುಳಿತಾಗ ಬೆಂಚ್ ಮೇಲೆಯೇ ಕುಸಿದು ಬಿದ್ದಿದ್ದಾನೆ.
ಇನ್ನು ಬಾಲಕ ಅಲ್ಲಿ ಕುಸಿದು ಬಿದ್ದರೂ, ಕ್ಯಾರೇ ಅನ್ನದೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಶಾಲಾ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. 45 ನಿಮಿಷಗಳ ಕಾಲ ಶಾಲಾ ಕೊಠಡಿಯಲ್ಲೇ ಬಾಲಕನ ಮೃತದೇಹವನ್ನು ಸಿಬ್ಬಂದಿ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಶಿಕ್ಷಕರ ನಿರ್ಲಕ್ಷ್ಯ, ಶಾಲೆಯ ಕೊಠಡಿಯಲ್ಲಿ ಬಾಲಕನ ದೇಹ ಇಟ್ಟಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಸರಿಯಾದ ಚಿಕಿತ್ಸೆ ಸಿಗದೆ ಶಾಲೆಯಲ್ಲೇ ಅರ್ಹಾನ್ ಮೃತಪಟ್ಟಿದ್ದಾನೆ.
ದುರಂತ ಎಂದರೆ ಇಲ್ಲಿ ಶಾಲಾ ಸಿಬ್ಬಂದಿಗಳು ಬಾಲಕ ಕುಸಿದು ಬಿದ್ದಿದ್ದರೂ, ಯಾವುದೇ ಚಿಕಿತ್ಸೆ ನೀಡದೆ, ಆಸ್ಪತ್ರೆಗೂ ಕರೆದುಕೊಂಡು ಹೋಗದೇ 45 ನಿಮಿಷಗಳ ಕಾಲ ಕೊಠಡಿಯಲ್ಲೇ ಇಟ್ಟುಕೊಂಡು, ಆ ನಂತರ ಬಾಲಕನ ಕುಟುಂಬದವರಿಗೆ ಕರೆಮಾಡಿ ಮಾಹಿತಿ ತಿಳಿಸಿರುವುದು ದುರಂತವೇ ಸರಿ.
ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಶಾಲೆಯತ್ತ ಓಡಿ ಬಂದಿರುವ ಮಗುವಿನ ಕುಟುಂಬಸ್ಥರು, ಆಸ್ಪತ್ರೆಗೆ ಕರೆದೊಯ್ಯಲು ಶಾಲಾ ವ್ಯಾನ್ ಕೊಡುವಲ್ಲಿಯೂ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪರಿಣಾಮ ಕುಸಿದು ಬಿದ್ದಿದ್ದ ಮಗನನ್ನು ಹೆತ್ತವರು ಬೈಕಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತಾಗಿದೆ. ಆದರೆ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಅರ್ಧಗಂಟೆ ಮೊದಲೇ ಕರೆದುಕೊಂಡು ಬಂದಿದ್ದರೆ ಬಾಲಕನ ಬದುಕುಳಿಯುತ್ತಿದ್ದ ಎಂದು ವೈದ್ಯರು ಹೇಳಿದ್ದಾರೆ. ಇದೀಗ ಶಾಲಾ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಾಲಕನ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ಬಾಲಕನ ಸಾವಿಗೆ ಶಾಲೆಯ ಸಿಬ್ಬಂದಿ ನೇರ ಕಾರಣ ಎಂದು ಆರೋಪ ಮಾಡಿದ್ದಾರೆ. ಸದ್ಯ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕ ಕುಸಿದು ಬೀಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.






