ಇತರೆ

ಕಡಲತೀರದಲ್ಲಿ ಬಿಳಿ ಬಣ್ಣದ ನೊರೆ ಕುಂದಾಪುರದ ನಂತರ ಸಸಿಹಿತ್ಲುವಿನಲ್ಲೂ ಪತ್ತೆ.. ತೀವ್ರ ಆತಂಕ!?

Views: 119

ಕನ್ನಡ ಕರಾವಳಿ ಸುದ್ದಿ: ಮಂಗಳೂರು ನಗರದ ಹೊರವಲಯ ಸಸಿಹಿತ್ಲು ಕಡಲತೀರದಲ್ಲಿ ಬಿಳಿ ಬಣ್ಣದ ನೊರೆ ಕಾಣಿಸಿಕೊಳ್ಳುತ್ತಿದೆ ಎಂದು ಪ್ರವಾಸಿಗರು ಮಾಹಿತಿ ನೀಡಿದ್ದು, ಈ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಕುಂದಾಪುರ ಕರಾವಳಿಯಲ್ಲಿ ಕೂಡಾ ಇದೇ ರೀತಿಯ ಬಿಳಿ ನೊರೆ ಕಾಣಿಸಿಕೊಂಡಿತ್ತು. ಇದೀಗ ಸಸಿಹಿತ್ಲು ಕರಾವಳಿಯಲ್ಲೂ ಇದೇ ವಿದ್ಯಮಾನ ಮರುಕಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಮುದ್ರದ ಅಲೆಗಳೊಂದಿಗೆ ಕರಾವಳಿಗೆ ಹರಿದುಬರುತ್ತಿರುವ ಈ ನೊರೆ ಬಲವಾದ ಗಾಳಿಯಿಂದ ಗಾಳಿಯಲ್ಲಿ ತೇಲುತ್ತಿರುವ ದೃಶ್ಯಗಳು ಕುತೂಹಲ ಮೂಡಿಸಿದ್ದು ಕೆಲ ಮಕ್ಕಳು ಅದನ್ನು ಹಿಡಿದು ಆಟವಾಡುತ್ತಿರುವುದೂ ಕಂಡುಬಂದಿದೆ. ತಜ್ಞರ ಪ್ರಾಥಮಿಕ ಅಭಿಪ್ರಾಯದ ಪ್ರಕಾರ, ಇದು ಸಮುದ್ರದಲ್ಲಿ ನಡೆಯುವ ನೈಸರ್ಗಿಕ ಪ್ರಕ್ರಿಯೆಗಳ ಪರಿಣಾಮವಾಗಿರಬಹುದು. ಮಳೆಗಾಲದಲ್ಲಿ ನದಿಗಳ ಮೂಲಕ ಸಮುದ್ರಕ್ಕೆ ಸೇರುವ ಸಾವಯವ ಪದಾರ್ಥಗಳು, ಪಾಚಿ, ಸಸ್ಯಗಳ ಅವಶೇಷಗಳು ಹಾಗೂ ಪ್ರಬಲ ಅಲೆಗಳ ಚಲನೆಯಿಂದ ಇಂತಹ ನೊರೆ ರೂಪುಗೊಳ್ಳುವುದು ಸಾಮಾನ್ಯ ವಿದ್ಯಮಾನವಾಗಿದೆ.

ಸದ್ಯ ಕರಾವಳಿ ಭಾಗದಲ್ಲಿ ಮೀನುಗಳ ಸಾಮೂಹಿಕ ಸಾವು, ಸಮುದ್ರದ ನೀರಿನ ಬಣ್ಣ ಬದಲಾವಣೆ ಅಥವಾ ದುರ್ವಾಸನೆ ಸೇರಿದಂತೆ ಯಾವುದೇ ಅಸಾಮಾನ್ಯ ಬೆಳವಣಿಗೆಗಳು ವರದಿಯಾಗಿಲ್ಲ. ಸ್ಥಳೀಯ ಮೀನುಗಾರರೂ ಸಹ ಇಂತಹ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ತಜ್ಞರ ಪ್ರಕಾರ, ಸದ್ಯಕ್ಕೆ ಈ ವಿದ್ಯಮಾನದಿಂದ ಆತಂಕಪಡುವ ಅಗತ್ಯವಿಲ್ಲ. ಆದರೆ ನೊರೆಯ ನಿಖರ ಕಾರಣ ತಿಳಿಯುವವರೆಗೆ ಸಾರ್ವಜನಿಕರು ಅನಗತ್ಯವಾಗಿ ಅದನ್ನು ಸ್ಪರ್ಶಿಸುವುದು ತಪ್ಪಿಸುವುದು ಉತ್ತಮ. ವಿಶೇಷವಾಗಿ ಮಕ್ಕಳು ಹಾಗೂ ಚರ್ಮದ ಅಲರ್ಜಿ ಇರುವವರು ನೊರೆಯೊಂದಿಗೆ ಆಟವಾಡದಂತೆ ಎಚ್ಚರಿಕೆ ವಹಿಸಬೇಕಾಗಿದೆ.

Related Articles

Back to top button
error: Content is protected !!