ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ವೀರಪ್ಪ ಮೊಯ್ಲಿ

Views: 72
ಚುನಾವಣಾ ರಾಜಕೀಯಕ್ಕೆ ಮಾಜಿ ಸಂಸದ ವೀರಪ್ಪ ಮೊಯ್ಲಿ ಅವರು ನಿವೃತ್ತಿ ಘೋಷಿಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ವೀರಪ್ಪ ಮೊಯ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿತ್ತು. ಇದೀಗ ಚುನಾವಣೆ ರಾಜಕೀಯದಿಂದ ದೂರ ಉಳಿದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಘೋಷಿಸಿದ್ದಾರೆ.
ನಗರದ ಪ್ರಶಾಂತನಗರದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಕ್ಷಾ ರಾಮಯ್ಯರನ್ನು ಅಭ್ಯರ್ಥಿಯನ್ನಾಗಿ ಮಾಡಿದ ಎಐಸಿಸಿಗೆ ಅಭಿನಂಧನೆಗಳು. ನಮ್ಮ ಅಭ್ಯರ್ಥಿ ಈ ಬಾರಿ ಗೆದ್ದೇ ಗೆಲ್ಲುತ್ತಾರೆ. ಕಳೆದ ಬಾರಿ ಜೆಡಿಎಸ್ ನಂಬಿ ನಾವು ಕೆಟ್ಟೆವು, ಈಗ ಜೆಡಿಎಸ್ ಸಹವಾಸ ಮಾಡಿ ಬಿಜೆಪಿಯವರು ಕೆಡುತ್ತಾರೆ. ಜಿಲ್ಲೆಯಲ್ಲಿ ಐವರು ಶಾಸಕರು ನಮ್ಮವರಿದ್ದಾರೆ. ಇದು ಸುಸಂದರ್ಭ, ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಗೆಲ್ಲುವಂಥಹ ಎಲ್ಲಾ ಅವಕಾಶ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಕ್ಷೇತ್ರ ಗೆದ್ದರೆ ಜಾತ್ಯತೀತತೆ ಜಯಭೇರಿ ಬಾರಿಸಿದಂತೆ. ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನನ್ನ ಅಭ್ಯರ್ಥಿ ಸ್ಥಾನ ಬಿಟ್ಟಿದ್ದೇನೆ, ಆದರೆ ಕ್ಷೇತ್ರದ ಜನರ ಮನಸ್ಸಿನಲ್ಲಿ ಉಳಿದಿದ್ದೇನೆ. ನಾನು ಏನೇ ಆಗಿರಲಿ ಸಾಯುವರೆಗೂ ಕಾಂಗ್ರೆಸ್ನಲ್ಲೇ ಇರುತ್ತೇನೆ ಎಂದು ತಿಳಿಸಿದರು.
ಹತ್ತು ವರ್ಷದ ಮೋದಿ ಆಡಳಿತದಲ್ಲಿ ಜನ ಕಂಗಾಲಾಗಿದ್ದಾರೆ, ದೇಶದಲ್ಲಿ ಆರ್ಥಿಕ ಕುಸಿತ ಆಗಿದೆ. ನರೇಂದ್ರ ಮೋದಿ ಅಪಪ್ರಚಾರ ಮಾಡಿಕೊಂಡು ಚುನಾವಣೆ ಮಾಡುತ್ತಿದ್ದಾರೆ. ಮೋದಿ ಹಾಗೂ ಅವರ ಬೆಂಬಲಿಗರು ಬಿಟ್ಟರೆ ಭಾರತದಲ್ಲಿ ಜನ ಅಸಂತುಷ್ಟರಾಗಿದ್ದಾರೆ. ಈ ಚುನಾವಣೆಯಲ್ಲಿ ಜನರಲ್ಲಿ ಅಸಂತುಷ್ಟತೆ ಸ್ಫೋಟ ಆಗುತ್ತದೆ. ಡಾ.ಕೆ. ಸುಧಾಕರ್ ಅವರನ್ನು ಜನರೇ ದೂರ ಇಟ್ಟಿದ್ದಾರೆ, ಅವರು ಜನರಿಂದ ದೂರ ಹೋಗಿಲ್ಲ. ನೀವು ಎಲ್ಲಿ ಕುಳಿತುಕೊಳ್ಳಬೇಕೋ ಅಲ್ಲಿ ಕುಳಿತುಕೊಳ್ಳಿ ಎಂದು ಕೂರಿಸಿದ್ದಾರೆ.






