ಧಾರ್ಮಿಕ

ಕೋಟೇಶ್ವರ ಶ್ರೀ ಕೋದಂಡ ರಾಮ ಮಂದಿರ – ಅಮೃತೋತ್ಸವ – ಶ್ರೀ ರಾಮೋತ್ಸವ ಆಚರಣೆ

Views: 39

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕೋಟೇಶ್ವರದ ರಥಬೀದಿಯಲ್ಲಿನ ಶ್ರೀ ಕೋದಂಡ ರಾಮ ಮಂದಿರದ 75ನೇ ವರ್ಷಾಚರಣೆ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ.

ಶ್ರೀ ಸೀತಾ, ಲಕ್ಷ್ಮಣ, ಹನುಮಂತ ಸಮೇತ ಶ್ರೀ ಕೋದಂಡ ರಾಮಚಂದ್ರ ದೇವರ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ಬ್ರಹ್ಮಕಲಶೋತ್ಸವ, ರಾಮ ಭಜನಾ ಪೂರ್ವಕ ಶ್ರೀ ರಾಮೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ತಯಾರಿಗಳನ್ನು ಮಾಡಲಾಗುತ್ತಿದೆ.

ಇದೇ ಮಾ.30 ರ ಭಾನುವಾರದಿಂದ ಎ.7 ರ ಸೋಮವಾರದ ವರೆಗೆ ಈ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ.

ಮಾ.30 ರಿಂದ ಎ. 6ರವರೆಗೆ ವಿವಿಧ ಭಜನಾ ತಂಡಗಳವರಿಂದ ಅಖಂಡ ಭಜನೆ, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಶ್ರೀ ರಾಮ ನವಮಿಯಂದು ಸಂಜೆ 7 ರಿಂದ ನೂತನ ಶ್ರೀ ರಾಮ ರಥದಲ್ಲಿ ದೇವರ ವೈಭವೊಪೇತ ಪುರಮೆರವಣಿಗೆ ನಡೆಯುಲಿದೆ.

ಶ್ರೀ ರಾಮೋತ್ಸವದ ಆಹ್ವಾನ ಪತ್ರಿಕೆಗಳನ್ನು ಈಗಾಗಲೇ ಎಲ್ಲೆಡೆ ವಿತರಿಸಲಾಗಿದ್ದು, ಸಮಾರಂಭದ ಪೂರ್ವ ತಯಾರಿಗಳ ಬಗ್ಗೆ ಶ್ರೀ ರಾಮ ಮಂದಿರದಲ್ಲಿ ಅಮೃತೋತ್ಸವ ಆಚರಣಾ ಸಮಿತಿಯ ಸಭೆ ನಡೆಸಿ ಚರ್ಚಿಸಲಾಯಿತು.

ಸಭೆಯಲ್ಲಿ ಆಹ್ವಾನ ಪತ್ರಿಕೆ ವಿತರಣೆ, ಬ್ರಹ್ಮ ಕಲಶ ತಯಾರಿ, ದೇವಳ ಅಲಂಕಾರ, ಉಟೋಪಚಾರ, ನೈರ್ಮಲ್ಯ, ಸ್ವಯಂ ಸೇವೆ, ಅತಿಥಿ – ಗಣ್ಯರು, ಆಹ್ವಾನಿತರ ನಿಭಾವಣೆ, ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳು, ಪುರ ಮೆರವಣಿಗೆ ಇತ್ಯಾದಿ ವಿಷಯಗಳ ತಯಾರಿ ಮತ್ತು ಕಾರ್ಯ ಪ್ರಗತಿಗಳ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು.

ದೇವಳ ಆಡಳಿತ ಸಮಿತಿ ಅಧ್ಯಕ್ಷ ಕೆ.ಎಸ್. ಸತ್ಯಮೂರ್ತಿ ಮಾತನಾಡಿ, ದಾನಿಗಳು ದೇವರಿಗೆ ಸುಂದರ ರಾಮ ರಥವನ್ನು ನೀಡಿದ್ದು, ರಾಮೋತ್ಸವದ ಸಂದರ್ಭದಲ್ಲಿ ಶ್ರೀ ಕಾಣಿಯೂರು ಮಠಾಧೀಶರು ರಥವನ್ನು ಶ್ರೀ ಕೋದಂಡ ರಾಮನಿಗೆ ಸಮರ್ಪಿಸುವರು. ನಂತರ ನೂತನ ರಾಮ ರಥದಲ್ಲಿ ದೇವರ ಉತ್ಸವ, ಪುರ ಮೆರವಣಿಗೆ ನಡೆಯಲಿದೆ ಎಂದು ವಿವರಿಸಿದರು. ದೇವಾಲಯ ಅಭಿವೃದ್ಧಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯರು, ನಿರಂತರ ಭಜಕರು, ದಾನಿಗಳನ್ನು ಉತ್ಸವದ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ತಿಳಿಸಿದ ಅವರು, ಎಲ್ಲ ಗ್ರಾಮಸ್ಥರೂ ಸ್ವಯಂ ಸ್ಫೂರ್ತಿಯಿಂದ ಶ್ರೀ ರಾಮನ ಸೇವೆಯಲ್ಲಿ ಕೈ ಜೋಡಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಅಮೃತೋತ್ಸವ ಆಚರಣಾ ಸಮಿತಿ ಪ್ರಧಾನ ಸಂಚಾಲಕ ಎಚ್. ರಾಮಚಂದ್ರ ವರ್ಣ, ದೇವಳ ಸಮಿತಿಯ ಉಪಾಧ್ಯಕ್ಷ ಜಗದೀಶ್ ರಾವ್, ಕಾರ್ಯದರ್ಶಿ ವೈ ಎನ್ ವೆಂಕಟೇಶಮೂರ್ತಿ ಭಟ್, ಜೊತೆ ಕಾರ್ಯದರ್ಶಿ ಕೆ. ಗಜೇಂದ್ರ ಹೆಬ್ಬಾರ್, ಖಜಾಂಚಿ ಬಿ. ಸತ್ಯನಾರಾಯಣ ವರ್ಣ, ತಂತ್ರಿ ನಾಗರಾಜ ಭಟ್, ಗೌತಮ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಾದಿರಾಜ ಅಡಿಗ, ದೇವೇಂದ್ರ ಬುಧ್ಯ, ವಾದಿರಾಜ ಹೆಬ್ಬಾರ್, ಧ್ರುವ ಪುರಾಣಿಕ, ಸೀತಾರಾಮ ಧನ್ಯ, ಕೃಷ್ಣಮೂರ್ತಿ ಕಡೇಕಾರ್, ನಾಗರಾಜ ಅಡಿಗ, ರಾಮಮೂರ್ತಿ ಪುರಾಣಿಕ ಮೊದಲಾದವರು ಉಪಸ್ಥಿತರಿದ್ದು, ಸಲಹೆ – ಸೂಚನೆಗಳನ್ನು ನೀಡಿದರು

ಶ್ರೀ ರಾಮೋತ್ಸವ ಕಾರ್ಯಕ್ರಮಗಳ ವಿವರ 

ಎ.1 ರ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ದೇವತಾ ಪಾರ್ಥನೆ, ತೋರಣ ಪ್ರತಿಷ್ಠೆ, ಪುಣ್ಯಾಹ, ಪಂಚಗವ್ಯ, ವಿಷ್ಣು ಸಂಬಂಧಿ ಹೋಮ, ಬಿಂಬಶುದ್ದಿ, ಗಣಹೋಮ.

ಸಂಜೆ 6.00ಕ್ಕೆ ಪುಣ್ಯಾಹ, ಸಪ್ತಶುದ್ದಿ ಪ್ರಾಸಾದ ಹೋಮ,ವಾಸ್ತುಪೂಜೆ,ರಾಕ್ಷೋಘ್ನ ಹೋಮ.

ಎ. 2 ರ ಬುಧವಾರ ಬೆಳಿಗ್ಗೆ 8 ಕ್ಕೆ ಶಾಂತಿ ಪ್ರಾಯಶ್ಚಿತ್ತ ಹೋಮಗಳು, ತತ್ವ ಹೋಮ, ಕಲಾಭಿವೃದ್ಧಿ ಹೋಮಗಳು.

ಸಂಜೆ 6.00ಕ್ಕೆ ಚಕ್ರಾಬ್ಜ ಮಂಡಲ ಪೂಜೆ, ಮಹಾಸುದರ್ಶನ ಹೋಮ, ಮಂಡಲ ರಚನೆ (108 ಕಲಶ).

ಎ.3 ರ ಗುರುವಾರ ಬೆಳಿಗ್ಗೆ 8 ಕ್ಕೆ ಶ್ರೀ ನಾಗದೇವರಿಗೆ ಕಲಾಭಿವೃದ್ಧಿ ಹೋಮ, ಶ್ರೀ ರಾಮ ದೇವರಿಗೆ ಬ್ರಹ್ಮ ಕಲಶಾಭಿಷೇಕ

ಇದೇ ದಿನ ಬೆಳಿಗ್ಗೆ 8.00ರಿಂದ ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರ ಆಗಮನ, ಶ್ರೀಗಳಿಂದ ಪಟ್ಟದ ದೇವರ ಪೂಜೆ, ಮಹಾ ಮಂಗಳಾರತಿ, ಶ್ರೀಗಳವರಿಗೆ ಭಿಕ್ಷೆ, ಅನ್ನ ಸಂತರ್ಪಣೆ, ದಾನಿಗಳಿಗೆ ಗೌರವಾರ್ಪಣೆ.

ಮಾ. 30ರ ಭಾನುವಾರ ಸೂರ್ಯೋದಯಕ್ಕೆ ದೇವತಾ ಪ್ರಾರ್ಥನೆ, ದೀಪ ಸ್ಥಾಪನೆ ಮಾಡಿ, ಅಖಂಡ ಭಜನೆ ಪ್ರಾರಂಭ. ಎ.6 ರ ಭಾನುವಾರದ *ಶ್ರೀ ರಾಮ ನವಮಿಯ* ಸೂರ್ಯೋದಯದವರೆಗೂ, ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದಾಗಮಿಸುವ ಭಜನಾ ತಂಡಗಳವರಿಂದ ಅಖಂಡ ಭಜನೆ ನಡೆಯಲಿದೆ.

 ಭಾನುವಾರ ಬೆಳಿಗ್ಗೆ 9 ಕ್ಕೆ ಶ್ರೀ ಸೀತಾ – ರಾಮ ಕಲ್ಯಾಣೋತ್ಸವ.10ರಿಂದ ಶ್ರೀ ಲಕ್ಷ್ಮೀಶೋಭಾನೆ ಪಠಣ. ಶ್ರೀ ರಾಮ ರಕ್ಷಾ ಸ್ತೋತ್ರ ಪಠಣ, ರಾಮರಕ್ಷಾ ಮಂತ್ರ ಹೋಮ,ನಂತರ ಮಹಾಪೂಜೆ, ಅನ್ನ ಸಂತರ್ಪಣೆ.ಸಂಜೆ 7 ಕ್ಕೆ ನೂತನ ಶ್ರೀ ರಾಮರಥದಲ್ಲಿ, ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ ವೈಭವೋಪೇತ ಪುರಮೆರವಣಿಗೆ. ರಾತ್ರಿ 9ಕ್ಕೆ ಮಹಾ ಮಂಗಳಾರತಿ, ಅಷ್ಟಾವಧಾನ, ವಸಂತಪೂಜೆ, ಪ್ರಸಾದ ವಿತರಣೆ, ಉಪಾಹಾರ.

ಎ.7 ರ ಸೋಮವಾರ ಬೆಳಿಗ್ಗೆ 8ಕ್ಕೆ ಅವಭ್ರತ ತೀರ್ಥ ಸ್ನಾನ, ಪಟ್ಟಾಭಿಷೇಕ ಹೋಮ, ಸಂಪ್ರೂಕ್ಷಣೆ, ಮಹಾಮಂಗಳಾರತಿ. ಇದರೊಂದಿಗೆ ಬ್ರಹ್ಮ ಕಲಶೋತ್ಸವ ಮತ್ತು ಶ್ರೀ ರಾಮೋತ್ಸವಗಳು ಸಮಾಪನಗೊಳ್ಳುವುವು.

ಶ್ರೀ ರಾಮೋತ್ಸವದ ಹಿನ್ನೆಲೆ 

ಧರ್ಮ ರಕ್ಷಣೆಗಾಗಿ ಭಗವಂತನ ನಾಮಗಳನ್ನು ನಿರಂತರ ಸ್ಮರಣೆ ಮಾಡುತ್ತಾ ಹರಿದಾಸ ಸಾಹಿತ್ಯವನ್ನು ಮನೆಮನೆಗಳಲ್ಲಿ ಪಠಿಸುತ್ತಾ ಭಜನಾ ರೂಪದಲ್ಲಿ ಬೆಳೆಸಿಕೊಂಡು ಬಂದವರು ಕೋಟೇಶ್ವರ ಮಾಗಣೆ ಹಿರಿಯರು. ನಲವತ್ತರ ದಶಕದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಶ್ರೀ ಗೋಪಾಲಕೃಷ್ಣ ಗುಡಿಯಲ್ಲಿ ಮೂಡುಹಂಗಳೂರು ನಾರಣಪ್ಪಯ್ಯ ಹಾಗೂ ಅರೆಬೈಲ್ ಸೀತಾರಾಮ ತವಳರ ನೇತೃತ್ವದಲ್ಲಿ ಭಜನಾ ಸಪ್ತಾಹ ನಡೆಯುತ್ತಿತ್ತು. ನಂತರ ಅಮಾಸೆಬೈಲು ಶ್ರೀ ರಾಮ ಐತಾಳರು ದಾನವಾಗಿ ನೀಡಿದ ಭೂಮಿಯು ಮೂಡುಹಂಗಳೂರು ನಾರಣಪ್ಪಯ್ಯನವರ ನೇತೃತ್ವದ ಟ್ರಸ್ಟ್‌ಗೆ ಹಸ್ತಾಂತರವಾಗಿ, ಮಾಗಣೆ ಬಂಧುಗಳ ಸಹಕಾರದಲ್ಲಿ 1950ರಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಾಲಯ ಸಮೀಪವೇ ಶ್ರೀ ಕೋದಂಡರಾಮ ಮಂದಿರವನ್ನು ಸ್ಥಾಪಿಸಲಾಯಿತು. ನಂತರ ಕುಂಭಾಸಿ ಪಾಟಾಳಿ ಕುಟುಂಬದವರು ದಾನವಾಗಿ ನೀಡಿದ ಜಾಗವನ್ನು ಸೇರಿಸಿಕೊಂಡು ಒಂದು ಸುಸಜ್ಜಿತ ಮಂದಿರ ನಿರ್ಮಾಣವಾಯಿತು. ತೆಕ್ಕಟ್ಟೆ ಚಾತ್ರ ಸಹೋದರರಾದ ಶ್ರೀರಾಮಕೃಷ್ಣ ಚಾತ್ರ, ಶ್ರೀ ರಾಘವೇಂದ್ರ ಚಾತ್ರ ಹಾಗೂ ಶ್ರೀ ಗೋಪಾಲ ಚಾತ್ರರು ಉತ್ತರ ಭಾರತದ ರಾಜಸ್ತಾನದಿಂದ ಅಮೃತ ಶಿಲೆಯಲ್ಲಿ ನಿರ್ಮಿತವಾದ ಹನುಮದ್ಸಮೇತ ಶ್ರೀ ರಾಮ – ಲಕ್ಷ್ಮಣ – ಸೀತಾ ಮೂರ್ತಿಗಳನ್ನು ತಂದು ಶ್ರೀ ವಿಶ್ವೋತ್ತಮ ತೀರ್ಥ ಸ್ವಾಮಿಗಳ ಕರಕಮಲಗಳಿಂದ ಪ್ರತಿಷ್ಠಾಪಿಸಿ ಇತಿಹಾಸವನ್ನೇ ನಿರ್ಮಿಸಿದರು.

ಅಂದಿನಿಂದ ಪ್ರತೀ ವರ್ಷ ರಾಮನವಮಿ ಸಮಯದಲ್ಲಿ ಏಳು ದಿನಗಳ ಕಾಲ ಅಖಂಡ ಭಜನೋತ್ಸವವನ್ನು ನಡೆಸಿಕೊಂಡು ಬಂದಿರುವ ನಮ್ಮ ಹಿರಿಯರು, ಈ ಭಾಗದಲ್ಲಿ ಧಾರ್ಮಿಕ ಚಟುವಟಿಕೆಗಳ ಪುನರುತ್ಥಾನಕ್ಕೆ ಕಾರಣರಾದರು. ಅಂದಿನಿಂದ ಇದುವರೆಗೂ ಕೋಟೇಶ್ವರ ಮಾಗಣೆಯ ಈ ಏಕೈಕ ರಾಮಮಂದಿರವನ್ನು ಪೋಷಿಸಿಕೊಂಡು ಬಂದಿರುವವರು ರೈತಾಪಿ ವರ್ಗದ ನಮ್ಮ ಹಿರಿಯರು, ವಿವಿಧೆಡೆಗಳಲ್ಲಿ ಹರಡಿರುವ ನಮ್ಮ ಹೋಟೆಲ್ ಉದ್ದಿಮೆದಾರರು, ಉದ್ಯೋಗನಿರತ ನಮ್ಮ ಸಮಸ್ತ ಮಾಗಣೆ ಬಂಧುಗಳು. 3 ದಶಕಗಳ ಕಾಲ ಆಡಳಿತ ನಡೆಸಿದ ಬೀಜಾಡಿ ಬಿಳಿಯರ ಕುಟುಂಬ, 2 ದಶಕಗಳ ಕಾಲ ಪೂಜಾ ಕೈಂಕರ್ಯ ನಡೆಸಿದ ಹಿರಿಯರಾದ ಹರಿದಾಸ ಆಚಾರ್ಯರು, ಬೀಜಾಡಿ ನಾಗರಾಜ ಅಡಿಗರು, ಹೀಗೆ ಹಲವಾರು ಮೂಲಗಳಿಂದ ಶ್ರೀರಾಮ ಸೇವೆಗೈದ ಹಲವಾರು ದಾನಿಗಳು ಪ್ರಾತಃ ಸ್ಮರಣೀಯರಾಗಿದ್ದಾರೆ. ಮಾಗಣೆ ಬಂಧುಗಳ ಬಹುತೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ಆಧಾರ ಸ್ತಂಭ ವಾಗಿದ್ದ ಈ ದೇವಾಲಯದ ನವೀಕೃತ ಕಟ್ಟಡ ಇತ್ತೀಚೆಗೆ ಸಮಸ್ತ ಭಗವದ್ ಭಕ್ತರ ಸಹಕಾರದಿಂದ ಪರಿಪೂರ್ಣವಾಗಿದ್ದು, ಇದೀಗ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ.

Related Articles

Back to top button