ಕಾರ್ಕಳ: ಬಾವಿಗೆ ಬಿದ್ದು ಸುರಂಗಕ್ಕೆ ಜಾರಿದ್ದ ವ್ಯಕ್ತಿಯ ರಕ್ಷಣೆ
Views: 85
ಕನ್ನಡ ಕರಾವಳಿ ಸುದ್ದಿ: 50 ಅಡಿ ಬಾವಿಗೆ ಬಿದ್ದು ಸುರಂಗಕ್ಕೆ ಜಾರಿದ್ದ ವ್ಯಕ್ತಿಯನ್ನು ಕಾರ್ಕಳ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಜ. 15ರಂದು ನಡೆದಿದೆ.
ಮೂಡುಬಿದಿರೆ ತಾಲೂಕಿನ ಕಾರ್ಕಳ ಗಡಿಭಾಗದ ಪುತ್ತಿಗೆ ಪದವಿನ ಬಂಗ್ಲೆ ನಿವಾಸಿ ರಾಧಾಕೃಷ್ಣ ಬಾವಿಗೆ ಬಿದ್ದವರು. ಅವರು ರಾತ್ರಿ ಮನೆಗೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ 30 ಅಡಿಯ ಬಾವಿಗೆ ಬಿದ್ದಿರುತ್ತಾರೆ. ಈ ವೇಳೆ ಕತ್ತಲು ಆವರಿಸಿದ್ದ ಬಾವಿಯಲ್ಲಿ ಸಿಕ್ಕ ದಾರಿಯಲ್ಲಿ ಮೇಲೆ ಬರುತ್ತಿದ್ದೇನೆಂದು ಸಾಗಿದ ಅವರು ಸುಮಾರು 20 ಅಡಿಯ ಸುರಂಗದೊಳಗೆ ಒಳಗೆ ಹೋಗಿ ಅಲ್ಲಿನ ಗುಂಡಿಗೆ ಬಿದ್ದಿರುತ್ತಾರೆ. ಅದೃಷ್ಟವಶಾತ್ ಅಲ್ಲಿ ಮುಳುಗುವಷ್ಟು ನೀರಿರದ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಿಗ್ಗೆ ಆ ದಾರಿಯಲ್ಲಿ ಸಾಗುತ್ತಿದ್ದವರಿಗೆ ಬಾವಿಯಲ್ಲಿ ಶಬ್ದ ಕೇಳಿ ಬರುತ್ತಿದ್ದು, ನಂತರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿರುತ್ತಾರೆ. ಸ್ಥಳಕ್ಕೆ ದೌಡಾಯಿಸಿದ ಕಾರ್ಕಳ ಅಗ್ನಿಶಾಮಕ ಸಿಬ್ಬಂದಿ ವ್ಯಕ್ತಿಯನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಸಿಬ್ಬಂದಿಯವರಾದ ಜಯಮೂಲ್ಯ ಮತ್ತು ರೂಪೇಶ್ ಇಡೂರಕರ್ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಸುರಂಗದೊಳಗೆ ಹೊಗಿ ಅರೆ ಪ್ರಜ್ಞಾವ್ಯಸ್ಥೆಯಲ್ಲಿದ್ದ ರಾಧಾಕೃಷ್ಣ ಅವರನ್ನು ರಕ್ಷಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕಾರ್ಕಳ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿ ನಿತ್ಯಾನಂದ ಹರಿಕಾಂತ್, ಬಸವರಾಜ್ ಮತ್ತು ಗಣೇಶ್ ಮೊದಲಾದವರು ಪಾಲ್ಗೊಂಡಿದ್ದರು.






