ಇತರೆ

ಕಾರಿನ ಕನ್ನಡಿಗೆ ಬೈಕ್ ಆಕಸ್ಮಿಕ ತಾಗಿದ್ದಕ್ಕೆ ಕೋಪಗೊಂಡ ದಂಪತಿ ಕಾರನ್ನು ನೇರವಾಗಿ ಬೈಕ್‌ಗೆ ಗುದ್ದಿ ಯುವಕನನ್ನು ಕೊಂದೇ ಬಿಟ್ಟರು!

Views: 881

ಕನ್ನಡ ಕರಾವಳಿ ಸುದ್ದಿ: ಕಾರಿನ ಕನ್ನಡಿಗೆ ಬೈಕ್ ತಾಗಿದ್ದು, ಕ್ಷುಲ್ಲಕ ಕಾರಣಕ್ಕೆ, ದಂಪತಿಯೊಬ್ಬರು ಇಬ್ಬರು ಯುವಕರನ್ನು ಸುಮಾರು 2 ಕಿಲೋಮೀಟರ್‌ಗಳಷ್ಟು ದೂರ ಬೆನ್ನಟ್ಟಿ, ಡಿಕ್ಕಿ ಹೊಡೆದು ಒಬ್ಬ ವ್ಯಕ್ತಿಯ ಸಾವಿಗೆ ಕಾರಣರಾಗಿದ್ದಾರೆ. ಈ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಮ ಲೇಔಟ್‌ನಲ್ಲಿ ನಡೆದಿದೆ.

ಮೊದಲ ನೋಟಕ್ಕೆ ಇದೊಂದು ಸಾಮಾನ್ಯ ಅಪಘಾತದಂತೆ ಕಂಡಿತ್ತು. ಹೀಗಾಗಿಯೇ, ಪ್ರಕರಣವನ್ನು ಮೊದಲು ಜೆಪಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ‘ಹಿಟ್ ಅಂಡ್ ರನ್’ ಎಂದು ದಾಖಲಿಸಲಾಗಿತ್ತು. ಆದರೆ, ಪುಟ್ಟೇನಹಳ್ಳಿ ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಿದಾಗ, ಇದು ಆಕಸ್ಮಿಕ ಅಪಘಾತವಲ್ಲ, ಎಂಬ ಸತ್ಯ ಬಯಲಾಗಿದೆ.

ಅಕ್ಟೋಬರ್ 25ರ ರಾತ್ರಿ ಸುಮಾರು 11:30ರ ಸಮಯದಲ್ಲಿ, ಮನೋಜ್ ಕುಮಾರ್ ಮತ್ತು ಆತನ ಪತ್ನಿ ಆರತಿ ಶರ್ಮಾ ತಮ್ಮ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಇದೇ ವೇಳೆ, ದರ್ಶನ್ ಮತ್ತು ವರುಣ್ ಎಂಬ ಯುವಕರು ಸಂಚರಿಸುತ್ತಿದ್ದ ಬೈಕ್, ಆಕಸ್ಮಿಕವಾಗಿ ಕಾರಿನ ಕನ್ನಡಿಗೆ ತಾಗಿದೆ. ಇದರಿಂದ ಕೋಪದಿಂದ ದಂಪತಿ, ಯುವಕರಿಗೆ ಪಾಠ ಕಲಿಸಲು ನಿರ್ಧರಿಸಿ, ತಮ್ಮ ಕಾರನ್ನು ವೇಗವಾಗಿ ಚಲಾಯಿಸಿ ಬೈಕನ್ನು ಬೆನ್ನಟ್ಟಲು ಆರಂಭಿಸಿದ್ದಾರೆ.

ತಮ್ಮನ್ನು ಕಾರೊಂದು ಬೆನ್ನಟ್ಟುತ್ತಿರುವುದನ್ನು ಅರಿತ ದರ್ಶನ್ ಮತ್ತು ವರುಣ್, ಜೀವಭಯದಿಂದ ಬೈಕಿನ ವೇಗವನ್ನು ಹೆಚ್ಚಿಸಿದ್ದಾರೆ. ಸುಮಾರು 2 ಕಿ.ಮೀ. ವರೆಗೆ ಈ ಚೇಸಿಂಗ್ ನಡೆದಿದೆ. ಒಂದು ಹಂತದಲ್ಲಿ ಯುವಕರು ಅವರಿಂದ ತಪ್ಪಿಸಿಕೊಂಡರೂ, ದಂಪತಿಯ ಕ್ರೌರ್ಯ ಅಲ್ಲಿಗೇ ನಿಲ್ಲಲಿಲ್ಲ. ತಮ್ಮ ಕಾರನ್ನು ಯೂ-ಟರ್ನ್ ಮಾಡಿಕೊಂಡು ಬಂದು, ನೇರವಾಗಿ ಬೈಕ್‌ಗೆ ಗುದ್ದಿದ್ದಾರೆ.

ಡಿಕ್ಕಿಯ ರಭಸಕ್ಕೆ ಇಬ್ಬರೂ ಗಾಳಿಯಲ್ಲಿ ಹಾರಿ ರಸ್ತೆಗೆ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ವರುಣ್ ಸ್ಥಿತಿ ಗಂಭೀರವಾಗಿದೆ.

ಕೃತ್ಯದ ನಂತರ, ದಂಪತಿಗಳು ಪೊಲೀಸರಿಗೆ ಸಿಕ್ಕಿಬೀಳಬಾರದೆಂದು ಮುಖಕ್ಕೆ ಮಾಸ್ಕ್ ಧರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಆದರೆ, ಮತ್ತಷ್ಟು ಕ್ರೌರ್ಯ ಮೆರೆದ ಅವರು, ಸ್ವಲ್ಪ ಸಮಯದ ನಂತರ ಮತ್ತೆ ಅದೇ ಸ್ಥಳಕ್ಕೆ ವಾಪಸ್ ಬಂದಿದ್ದಾರೆ. ಅಪಘಾತದ ರಭಸಕ್ಕೆ ತಮ್ಮ ಕಾರಿನಿಂದ ಕೆಳಗೆ ಬಿದ್ದಿದ್ದ ಭಾಗಗಳನ್ನು (ಅವಶೇಷಗಳನ್ನು) ಸಂಗ್ರಹಿಸಿಕೊಂಡು, ಸಾಕ್ಷ್ಯ ನಾಶಪಡಿಸುವ ಹೀನ ಪ್ರಯತ್ನವನ್ನೂ ಮಾಡಿದ್ದಾರೆ.

ಸದ್ಯ, ಪುಟ್ಟೇನಹಳ್ಳಿ ಪೊಲೀಸರು ದಂಪತಿಯನ್ನು ಬಂಧಿಸಿದ್ದು, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

 

 

 

 

 

Related Articles

Back to top button
error: Content is protected !!