ಕಾಂಗ್ರೆಸ್ ಮಣಿಸಲು ಬಿಜೆಪಿ, ಜೆಡಿಎಸ್ ಅಸ್ತಿತ್ವ ಉಳಿಸಲು ದೋಸ್ತಿ- ಪ್ರಜ್ವಲ್, ಎಚ್ಡಿ ರೇವಣ್ಣ ಅನುಪಸ್ಥಿತಿ

Views: 0
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಣಿಸುವ ಸಲುವಾಗಿ ಜೆಡಿಎಸ್ ಎನ್ಡಿಎ ಮೈತ್ರಿಕೂಟವನ್ನು ಸೇರಿದೆ.
ದೆಹಲಿಯಲ್ಲಿ ನಡೆದ ಅಮಿತ್ ಶಾ ಜೆಪಿ ನಡ್ಡಾ ಮತ್ತು ಕುಮಾರಸ್ವಾಮಿ ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಧಿಕೃತ ಮುದ್ರೆ ಬಿದ್ದಿದೆ. ಸೀಟು ಹಂಚಿಕೆ ಸೇರಿ ಹಲವು ವಿಚಾರಗಳ ಬಗ್ಗೆ ಗಹನವಾದ ಚರ್ಚೆ ನಡೆದಿದೆ. ಮೈತ್ರಿ ಏರ್ಪಡುವಲ್ಲಿ ಗೋವಾ ಸಿಎಂ ಪ್ರಮೋದ್ ಸಾವಂತ್ ಮಹತ್ವದ ಪಾತ್ರ ವಹಿಸಿದ್ದಾರೆ.
ಗೃಹ ಮಂತ್ರಿ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಟ್ವೀಟ್ ಮೂಲಕ ದೋಸ್ತಿಯನ್ನು ಖಚಿತಪಡಿಸಿದ್ದಾರೆ. ಎನ್ಡಿಎ ಕೂಟಕ್ಕೆ ಜೆಡಿಎಸ್ ಸೇರ್ಪಡೆಗೊಂಡಿರುವುದು ಸಂತಸ ತಂದಿದೆ. ಪ್ರಧಾನಿ ಮೋದಿ ಅವರ ಆಶಯಗಳನ್ನು ಸಾಕಾರಗೊಳಿಸಲು ಈ ಮೈತ್ರಿ ನೆರವಾಗಲಿದೆ ಎಂದು ಹೇಳಿಕೊಂಡಿದ್ದಾರೆ.
ಸಭೆ ಬಳಿಕ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಮೈತ್ರಿ ಬಗ್ಗೆ ಈಗಷ್ಟೇ ಮಾತಾಡಲಾಗಿದೆ. ಮುಂದಿನ ದಿನಗಳಲ್ಲಿ ಸೀಟು ಹಂಚಿಕೆ ಫೈನಲ್ ಮಾಡುತ್ತೇವೆ ಎಂದು ತಿಳಿಸಿದರು.
ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿರುವುದನ್ನು ರಾಜ್ಯ ಬಿಜೆಪಿ ಸ್ವಾಗತಿಸಿದೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಬಿಜೆಪಿಗರು ಸಂತಸ ವ್ಯಕ್ತಪಡಿಸಿದ್ದಾರೆ.
ಸೀಟ್ ಹಂಚಿಕೆ ಸೂತ್ರಗಳು
ಫಾರ್ಮುಲಾ 1 – 22/6 (ಬಿಜೆಪಿ-22, ಜೆಡಿಎಸ್-6)
ಫಾರ್ಮುಲಾ 2 – 23/5 (ಬಿಜೆಪಿ-23, ಜೆಡಿಎಸ್-5)
ಫಾರ್ಮುಲಾ 3 – 24/4 (ಬಿಜೆಪಿ-24, ಜೆಡಿಎಸ್-4)
ಎಲ್ಲೆಲ್ಲಿ ದೋಸ್ತಿ
ಮಂಡ್ಯ, ಹಾಸನ, ತುಮಕೂರು ಕ್ಷೇತ್ರಕ್ಕೆ ಜೆಡಿಎಸ್ ಪಟ್ಟು ಹಿಡಿಯುವುದರ ಜೊತೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಕ್ಕೂ ಬೇಡಿಕೆ ಇಟ್ಟಿದೆ. ಅಂತಿಮವಾಗಿ 4 ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ಮುಂದಾಗಿದ್ದು, ಚಿಕ್ಕಬಳ್ಳಾಪುರ ಅಥವಾ ಕೋಲಾರ ಪೈಕಿ 1 ಕ್ಷೇತ್ರ ಜೆಡಿಎಸ್ಗೆ ಸಿಗುವ ಸಾಧ್ಯತೆ ಇದೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಸೀಟ್ ಕಗ್ಗಂಟಾಗಿ ಉಳಿದಿದೆ.
ಕಾಂಗ್ರೆಸ್ ಮಣಿಸಲುಬಿಜೆಪಿ ಲೆಕ್ಕಾಚಾರ ಏನು?
ಕಾಂಗ್ರೆಸ್ ವಿರುದ್ಧದ ಹೋರಾಟಕ್ಕೆ ಜೆಡಿಎಸ್ ಸೇರಿದ್ರೆ ಹೊಸ ಶಕ್ತಿ ಸಿಗಲಿದೆ. ಒಕ್ಕಲಿಗ + ಲಿಂಗಾಯತ ಕಾಂಬಿನೇಷನ್ನಿಂದ ಹೆಚ್ಚಿನ ಮತ ಸಿಗಲಿದೆ. ಪ್ರಬಲ ಸಮುದಾಯಗಳ ಕಾಂಬಿನೇಷನ್ನಿಂದ 25 ಸ್ಥಾನ ಗೆಲ್ಲುವ ಗುರಿ ಹಾಕಿಕೊಳ್ಳಲಾಗಿದೆ. ಮೈತ್ರಿ ಫೈನಲ್ ಆಗಿರುವುದರಿಂದ ಲಿಂಗಾಯತ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆಯಿದೆ. ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಹೆಸರನ್ನು ಒಂದು ಗುಂಪು ಪ್ರಸ್ತಾಪಿಸಿದ್ದು, ಹಿಂದೂತ್ವ ಫೈರ್ ಬ್ರ್ಯಾಂಡ್ಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಇನ್ನೊಂದು ಗುಂಪು ಹೇಳಿದೆ.
ಪಕ್ಷದ ಉಳಿವಿಗಾಗಿ ಜೆಡಿಎಸ್ ಲೆಕ್ಕಾಚಾರ ಏನು?
ಬಿಜೆಪಿ ಜೊತೆ ಸೇರಿಕೊಂಡರಷ್ಟೇ ಪಕ್ಷಕ್ಕೆ ಉಳಿವು ಎನ್ನುವುದು ಗೊತ್ತಾಗಿದೆ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪ್ರಬಲ ಎದುರಾಳಿಯಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತಗಳು ಬಿಜೆಪಿಗೆ ಹೋಗಿರುವ ಕಾರಣ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಹಲವು ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿ+ಜೆಡಿಎಸ್ ಒಂದಾದಲ್ಲಿ ಕಾಂಗ್ರೆಸ್ ಮಣಿಸಬಹುದು ಎಂಬ ಲೆಕ್ಕಾಚಾರವನ್ನು ಜೆಡಿಎಸ್ ಹಾಕಿಕೊಂಡಿದೆ.
ಪ್ರಜ್ವಲ್ ಹಾಗೂ ಎಚ್ಡಿ ರೇವಣ್ಣ ಅನುಪಸ್ಥಿತಿ
ಬಿಜೆಪಿ ನಾಯಕರ ಜೊತೆಗಿನ ಭೇಟಿಗಾಗಿ ಕುಮಾರಸ್ವಾಮಿ ಅವರ ಜತೆ ಪ್ರಜ್ವಲ್ ರೇವಣ್ಣ ಹಾಗೂ ಎಚ್ಡಿ ರೇವಣ್ಣ ಶುಕ್ರವಾರ ನಡೆದ ಮೈತ್ರಿ ಮಾತುಕತೆಯ ಭೇಟಿಯಲ್ಲಿ ಸಂಸದ ಪ್ರಜ್ವಲ್ ಹಾಗೂ ಶಾಸಕ ರೇವಣ್ಣ ಕಾಣಿಸಿಕೊಂಡಿಲ್ಲ. ಇದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದೆ.
ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಟಿಕೆಟ್ ಸಂಬಂಧ ರೇವಣ್ಣ ಹಾಗೂ ಕುಮಾರಸ್ವಾಮಿ ಕುಟುಂಬದ ಜೊತೆ ಮುಸುಕಿನ ಗುದ್ದಾಟ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ಭವಾನಿ ರೇವಣ್ಣ ಬೇಡಿಕೆ ಇಟ್ಟಿದ್ದರು. ಆದರೆ, ಕುಮಾರಸ್ವಾಮಿ ಅವರು ಸ್ವರೂಪ್ ಅವರಿಗೆ ಟಿಕೆಟ್ ನೀಡಿದ್ದರು. ಇದು ಎರಡೂ ಕುಟುಂಬಗಳ ನಡುವೆ ಅಸಮಾಧಾನವನ್ನು ಹುಟ್ಟುಹಾಕಿತ್ತು. ಇದು ಲೋಕಸಭೆ ಚುನಾವಣೆಯಲ್ಲಿಯೂ ಮುಂದುವರಿಯಲಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.






