ಇನ್ಮುಂದೆ ಫ್ರೀ ಅಕ್ಕಿ ಸಿಗುತ್ತಾ? ಇಲ್ಲವೇ ಹಣ ಸಿಗುತ್ತಾ? ಪೌಷ್ಠಿಕ ಆಹಾರವೇ? ಅನ್ನಭಾಗ್ಯ ಯೋಜನೆಯ ಕುರಿತು ಇಲ್ಲಿದೆ ಮಾಹಿತಿ…

Views: 0
ಇತ್ತೀಚಿನ ದಿನಗಳಲ್ಲಿ ಅನ್ನಭಾಗ್ಯ ಯೋಜನೆಗೆ ಸಂಬಂಧಪಟ್ಟಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಮುಖ್ಯ ಕಾರಣ ಸರ್ಕಾರವು ದಿನದಿಂದ ದಿನಕ್ಕೆ ತನ್ನ ನಿರ್ಧಾರವನ್ನು ಬದಲಾಯಿಸುತ್ತಿರುವುದು.
ಈ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾಗಿರುವ ಕೆಎಚ್ ಮುನಿಯಪ್ಪ, ಸಪ್ಟೆಂಬರ್ ತಿಂಗಳಿನಿಂದ ಅಕ್ಕಿಯ ಬದಲು ಹಣ ವರ್ಗಾವಣೆ ಮಾಡುವ ಕೆಲಸವನ್ನು ನಿಲ್ಲಿಸಲಾಗುವುದು. ಅಂದರೆ ಹತ್ತು ಕೆಜಿ ಅಕ್ಕಿಯನ್ನೇ ಫಲಾನುಭವಿಗಳಿಗೆ ನೀಡಲಾಗುವುದು ಎಂದು ತಿಳಿಸಿದ್ದರು.
ಇತ್ತೀಚಿಗೆ ಬಂದಿರುವ ಮಾಹಿತಿಯ ಪ್ರಕಾರ ರಾಜ್ಯ ಸರ್ಕಾರಕ್ಕೆ ಇದುವರೆಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಒದಗಿಸಲು ಸಾಧ್ಯವಾಗಿಲ್ಲ.
ಈಗಾಗಲೇ ರಾಜ್ಯದ ಕೆಲವು ಬರಪೀಡಿತ ಪ್ರದೇಶಗಳ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಹಣದ ಬದಲು ಹತ್ತು ಕೆಜಿ ಅಕ್ಕಿಯನ್ನು ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.ಇನ್ನೂ ಸಾಕಷ್ಟು ಜನ ತಮಗೆ ಹಣ ಬೇಡ ಅಕ್ಕಿಯನ್ನೇ ಕೊಡಿ ಎಂದು ತಿಳಿಸಿದ್ದರು. ಆದರೆ ಅದ್ಯಾಕೋ ನುಡಿದಂತೆ ನಡೆಯುವ ಸರ್ಕಾರಕ್ಕೆ ಅಕ್ಕಿ ಹೊಂದಿಸುವುದು ಮಾತ್ರ ಕಷ್ಟ ಆಗುತ್ತಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಸಿಗುತ್ತಿರುವ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ಫಲಾನುಭವಿಗಳ ಖಾತೆಗೆ ಅಕ್ಕಿಯ ಬದಲು ಹಣ ಹಾಕುವ ಪ್ರಕ್ರಿಯೆ ಯಥಾ ಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯ ಬದಲು ಹಣ ಕೊಡುತ್ತಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಒಂದು ವೇಳೆ ಅಕ್ಕಿಯನ್ನು ಒದಗಿಸಲು ಸಾಧ್ಯವಾಗದೆ ಇದ್ದರು ಹಣ ಕೊಡುವ ಬದಲು ಐದು ಕೆಜಿ ಅಕ್ಕಿ ತೂಕದ ಪೌಷ್ಟಿಕ ಆಹಾರ ವನ್ನು ಕೊಡುವುದರ ಬಗ್ಗೆ ಚರ್ಚೆ ನಡೆಸಲಾಗಿತ್ತು.
ಈ ಬಗ್ಗೆ ಸಚಿವ ಚೆಲುವರಾಯಸ್ವಾಮಿ ವಿಧಾನಸೌಧ ಸಭೆಯಲ್ಲಿ ಮಾತನಾಡಿದರು. ಆದರೆ ಈಗ ಸರ್ಕಾರ ಇದಕ್ಕೂ ಕೂಡ ಸಿದ್ಧವಿಲ್ಲ. ಫಲಾನುಭವಿಗಳಿಗೆ ಅಕ್ಕಿಯ ಬದಲು ಹಣವನ್ನೇ ಮುಂದಿನ ತಿಂಗಳು ಕೂಡ ಅವರ ಖಾತೆಗೆ ನೇರವಾಗಿ ಜಮಾ ಮಾಡುವುದಾಗಿ ತಿಳಿಸಿದೆ.
ಅನ್ನಭಾಗ್ಯ ಯೋಜನೆಯಡಿಯಲ್ಲಿ ಈಗಾಗಲೇ ಮೂರು ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಸಪ್ಟೆಂಬರ್ ತಿಂಗಳಿನ ಕಂತಿನ ಹಣ ಬಿಡುಗಡೆ ಆಗಿದ್ದು ಇನ್ನೂ ಹಲವರ ಖಾತೆಗೆ ವರ್ಗಾವಣೆ ಆಗಬೇಕಿದೆ.
ಒಟ್ಟಿನಲ್ಲಿ ಅಕ್ಟೋಬರ್ ತಿಂಗಳಿನಿಂದಾದರೂ ಹಣದ ಬದಲು ಅಕ್ಕಿಯೇ ತಮಗೆ ಸಿಗುತ್ತದೆ ಎಂದುಕೊಂಡಿದ್ದವರಿಗೆ ನಿರಾಸೆಯಾಗಿದೆ. ಹಣದ ಬದಲು ಅಕ್ಕಿಯನ್ನು ಒದಗಿಸುವ ಬಗ್ಗೆ ಅಥವಾ ಪೌಷ್ಟಿಕ ಆಹಾರವನ್ನು ನೀಡುವುದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿಲ್ಲ. ಹಾಗಾಗಿ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ, ಒಬ್ಬ ವ್ಯಕ್ತಿಗೆ 170 ರೂ.ಗಳು ಮುಂದಿನ ತಿಂಗಳು ಕೂಡ ನೇರವಾಗಿ ಖಾತೆಗೆ ಸಂದಾಯವಾಗಲಿದೆ.






