ಅಂಪಾರು ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಭಾರೀ ಅವ್ಯವಹಾರ:ಕಾರ್ಯ ನಿರ್ವಹಣಾಧಿಕಾರಿ ವಿರುದ್ಧ ದೂರು
Views: 796
ಕನ್ನಡ ಕರಾವಳಿ ಸುದ್ದಿ:ಅಂಪಾರು ಸಹಕಾರಿ ವ್ಯವಸಾಯಿಕ ಸಂಘ (ನಿ)ದಲ್ಲಿ ಭಾರೀ ಹಣಕಾಸು ಅವ್ಯವಹಾರ ಬೆಳಕಿಗೆ ಬಂದಿದ್ದು, ಆರೋಪಿ ಸದಾಶಿವ ವೈದ್ಯನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
2023-24ನೇ ಸಾಲಿನಲ್ಲಿ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಆರೋಪಿ ಸದಾಶಿವ ವೈದ್ಯ ತನ್ನ ಹುದ್ದೆಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಂಘದ ಹಣವನ್ನು ಅಕ್ರಮವಾಗಿ ಬಳಕೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಯು ಬಡ್ಡಿ ಖಾತೆಗಳಿಗೆ ನಕಲಿ ಖರ್ಚು ದಾಖಲಿಸಿ, ನಕಲಿ ಠೇವಣಿ ಖಾತೆಗಳನ್ನು ಸೃಷ್ಟಿಸಿ, ಉಳಿತಾಯ ಖಾತೆಗಳಲ್ಲಿ ಅವ್ಯವಹಾರ ನಡೆಸಿ ಒಟ್ಟು ₹3,95,65,000 ಮೊತ್ತದ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಸಂಘದ ಕಂಪ್ಯೂಟರ್ ದಾಖಲೆಗಳಲ್ಲಿ “ವೈದ್ಯ’ ಹಾಗೂ “ಮ್ಯಾನೇಜರ್” ಎಂಬ ಪಾಸ್ವರ್ಡ್ಗಳ ಮೂಲಕ ಹೊಂದಾಣಿಕೆ ಲೆಕ್ಕಗಳನ್ನು ದಾಖಲಿಸಲಾಗಿದ್ದು, ಅವುಗಳನ್ನು ಆರೋಪಿ ಬಳಸುತ್ತಿದ್ದನು ಎಂಬುದು ತನಿಖೆಯಿಂದ ಬಯಲಾಗಿದೆ. ಇದಲ್ಲದೆ, ಆರೋಪಿಯು ನಕಲಿ ಠೇವಣಿ, ಉಳಿತಾಯ ಹಾಗೂ ಸಾಲ ಖಾತೆಗಳನ್ನು ತನ್ನ ಸಂಬಂಧಿಕರಿಗೆ ಸೇರಿದ ಖಾತೆಗಳ ಮೂಲಕ ತೆರೆದು ಸಂಘದ ಹಣವನ್ನು ಪಡೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂಸ್ಥೆಯ ನಿರ್ದಿಷ್ಟ ಠೇವಣಿ ಕುಳುವಾರು ಪರಿಶೀಲನೆಯ ವೇಳೆ ಈ ಅಕ್ರಮಗಳು ಪತ್ತೆಯಾಗಿದ್ದು, ಈ ಬಗ್ಗೆ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಪ್ರವೀಣ ಕುಮಾರ್ ಶೆಟ್ಟಿ ಅವರು ದೂರು ದಾಖಲಿಸಿದ್ದಾರೆ.
ಸಂಸ್ಥೆ ಹಾಗೂ ಗ್ರಾಹಕರಿಗೆ ವಂಚನೆ ಮಾಡುವ ಉದ್ದೇಶದಿಂದ ನಕಲಿ ಪಾಸ್ವರ್ಡ್ಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪದಡಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






